ಈ ಶುಕ್ರವಾರ ಕನ್ನಡ ಚಿತ್ರಗಳಿಗೆ ಆಯಿತವಾರ
ಶುಕ್ರವಾರ ಬಂತೆಂದರೆ ಸಾಕು ಮಿನಿಮಮ್ ಮೂರು, ನಾಲ್ಕು ಚಿತ್ರಗಳು ಗ್ಯಾರಂಟಿ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಒಂದೊಂದು ವಾರ ಬಿಡುಗಡೆಯಾಗುತ್ತಿದ್ದ ಚಿತ್ರಗಳ ಪಟ್ಟಿ ನೋಡಿದ ಪ್ರೇಕ್ಷಕರು ಗಲಿಬಿಲಿಯಾಗುತ್ತಿದ್ದರು. ಆದರೆ ಈ ಶುಕ್ರವಾರ (ಜ.4) ಆಯಿತವಾರ. ಯಾವುದೇ ಕನ್ನಡ ಚಿತ್ರ ರಿಲೀಸ್ ಆಗುತ್ತಿಲ್ಲ.
ಹೊಸ ವರ್ಷದ ಮೊದಲ ವಾರ ಯಾವುದೇ ಕನ್ನಡ ಚಿತ್ರ ತೆರೆಗೆ ಅಪ್ಪಳಿಸುತ್ತಿಲ್ಲ. ಈ ಮೂಲಕ ಪ್ರೇಕ್ಷಕರು ಬಚಾವಾಗಿದ್ದಾರೆ. ಬಿಡುಗಡೆಗೆ ಸಿದ್ಧವಾಗಿದ್ದ ಸಾಲು ಸಾಲು ಕನ್ನಡ ಚಿತ್ರಗಳು ಹಿಂದೇಟು ಹಾಕಿ ಬಿಡುಗಡೆಯನ್ನು ಮುಂದೂಡಿವೆ.
ನಮ್ಮ ಸಿನಿಮಾ ಮಂದಿಗೆ ಸೆಂಟಿಮೆಂಟ್ ಗಳು ಜಾಸ್ತಿ. ಬಹುಶಃ ಮೊದಲ ವರ್ಷದ ಮೊದಲ ಚಿತ್ರವೇ ತೋಪಾದರೆ ಏನು ಮಾಡೋದು ಗುರು ಎಂಬ ಭಯ ಅವರನ್ನು ಕಾಡುತ್ತಿರುವಂತಿದೆ. ಚಿತ್ರ ತೋಪಾಗಲು ಮೊದಲ ವಾರವಾದರೇನು ಕೊನೆಯ ವಾರವಾದರೇನು? ಅದೇನು ಕಥೆನೋ ಏನೋ.

ಸುದೀಪ್ ಅಭಿನಯದ ವರದನಾಯಕ, ಮಾಲಾಶ್ರೀ ಅವರ ವೀರ, ಪ್ರೇಮ್ ಅವರ ಚಾರ್ ಮಿನಾರ್, ಲೂಸ್ ಮಾದನ ಬಂಗಾರಿ, ಶ್ರೀನಗರಕಿಟ್ಟಿ ಅವರ ಅಪ್ಪಯ್ಯ ಮತ್ತು ಟೋನಿ, ...ಹೀಗೆ ಸಾಲು ಸಾಲು ಚಿತ್ರಗಳು ಹೊಸ ವರ್ಷಕ್ಕೆ ಬಿಡುಗಡೆಯಾಗುತ್ತವೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಎಲ್ಲಾ ಠುಸ್ ಆಗಿದೆ.
ಯೋಗರಾಜ್ ಭಟ್ ಅವರ ಡ್ರಾಮಾ, ಸುಮನಾ ಕಿತ್ತೂರು ಅವರ ಎದೆಗಾರಿಕೆ, ದರ್ಶನ್ ಅವರ ಸಂಗೊಳ್ಳಿ ರಾಯಣ್ಣ, ಪುನೀತ್ ಅಭಿನಯದ ಯಾರೇ ಕೂಗಾಡಲಿ ಚಿತ್ರಗಳು ಇನ್ನೂ ಯಶಸ್ವಿ ಪ್ರದರ್ಶನ ಕಾಣುತ್ತಿವೆ. ಥಿಯೇಟರ್ ಗಳು ಖಾಲಿ ಇಲ್ಲ ಎಂಬುದು ಇನ್ನೊಂದು ಪ್ರಮುಖ ಕಾರಣ.
ಒಟ್ಟಿನಲ್ಲಿ ಹೊಸ ಕನ್ನಡ ಚಿತ್ರ ನೋಡಬೇಕಾದರೆ ಜನವರಿ ಎರಡನೇ ವಾರದವರೆಗೂ ಕಾಯಬೇಕು. ಅದೂ ಗ್ಯಾರಂಟಿ ಇಲ್ಲ. ಬಹುಶಃ ಈ ವರ್ಷದ ಮೊದಲ ಚಿತ್ರವಾಗಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ 'ಲಕ್ಷ್ಮಿ' ತೆರೆಗೆ ಅಪ್ಪಳಿಸುವ ಸಾಧ್ಯತೆಗಳಿವೆ. ನಂತರ ಚಿತ್ರಮಂದಿರಗಳಲ್ಲಿ ಇದ್ದೇ ಇದೆ ನೂಕು ನುಗ್ಗಲು. (ಏಜೆನ್ಸೀಸ್)


Click it and Unblock the Notifications











