ಕಿಚ್ಚ ಸುದೀಪ್ ಬೆಳ್ಳಿ ಕಿರೀಟ ನಿರಾಕರಿಸಿದ್ದು ಯಾಕೆ?
ಹೊಸಬರ ಮತ್ತು ಇತರ ಕಲಾವಿದರ ಚಿತ್ರಗಳಿಗೆ ವಾಯ್ಸ್ ಓವರ್ ನೀಡುವುದು, ಹಾಡುವ ಮುಂತಾದ ಬೆನ್ನುತಟ್ಟುವ ಕೆಲಸಗಳು ಸ್ಯಾಂಡಲ್ ವುಡ್ ನಲ್ಲಿ ಈಗ ಹೆಚ್ಚು ಹೆಚ್ಚು ನಡೆಯುತ್ತಿರುವುದು ಪ್ರಶಂನಾರ್ಹ.
ಗುರುವಾರ ಮಕರ ಸಂಕ್ರಾತಿಯ (ಜ 15) ದಿನ ಸಂಜೆ ಬೆಂಗಳೂರಿನ ವಿದ್ಯಾಪೀಠದ ಬಳಿಯ ಕೆಂಪೇಗೌಡ ಆಟದ ಮೈದಾನದಲ್ಲಿ 'ಜಸ್ಟ್ ಮದ್ವೇಲಿ' ಚಿತ್ರದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮ ಆಯೋಜಿತವಾಗಿತ್ತು.

ಹೊಸ ಪ್ರತಿಭೆಗಳು ತುಂಬಿರುವ ಈ ಚಿತ್ರದ ಕಾರ್ಯಕ್ರಮಕ್ಕೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಆಗಮಿಸಿದ್ದು ಕಾರ್ಯಕ್ರಮದ ವಿಶೇಷವಾಗಿತ್ತು. ನಿಗದಿತ ಸಮಯಕ್ಕಿಂತ ಮುಕ್ಕಾಲು ಗಂಟೆ ಲೇಟಾಗಿ ಬಂದ ಸುದೀಪ್, ಭಾರೀ ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳನ್ನು ಸಖತ್ತಾಗಿ ರಂಜಿಸಿದರು. (ರನ್ನ ಚಿತ್ರ ಲೇಟಾಗಲು ಕಾರಣವೇನು)
ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದ ಕಿಚ್ಚ ಸುದೀಪ್ ಅವರಿಗೆ ಚಿತ್ರತಂಡ ಗೌರವಪೂರ್ವಕವಾಗಿ ಸುಮಾರು 85 ಸಾವಿರ ಮೌಲ್ಯದ ಬೆಳ್ಳಿ ಕಿರೀಟವನ್ನು ಉಡುಗೊರೆಯಾಗಿ ನೀಡಿ, ಮೈಸೂರು ಪೇಟ ತೊಡಿಸಿ ಸನ್ಮಾನಿಸಿತು.
ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ ಸುದೀಪ್, ಈ ಬೆಳ್ಳಿ ಕಿರೀಟವನ್ನು ಪ್ರೀತಿಪೂರ್ವಕವಾಗಿ ವಾಪಸ್ ನೀಡುತ್ತಿದ್ದೇನೆ. ಇದನ್ನು ಕರಗಿಸಿ ಬಂದ ಹಣದಲ್ಲಿ ಯಾವುದಾದರೂ ಅನಾಥಶ್ರಾಮಕ್ಕೋ, ಮಕ್ಕಳಿಗೋ ನೀಡಿ ಎಂದು ಮಾನವೀಯತೆ ಮೆರೆದರು.

ಕಿರೀಟ ತೊಡಲು ನಾನು ಮಹಾರಾಜನಲ್ಲ. ನಿಮ್ಮ ಪ್ರೀತಿಗೆ ಆಭಾರಿಯಾಗಿದ್ದೇನೆ. ಬೆಳ್ಳಿ ಕಿರೀಟ ಕರಗಿಸಿ ಬರುವ ದುಡ್ಡಿನಲ್ಲಿ ಅನ್ನದಾನ ಮಾಡಿ, ದೇಶದಲ್ಲಿ ಅದೆಷ್ಟೋ ಬಡವರು ಊಟಕ್ಕೆ ಇಲ್ಲದೇ ಒದ್ದಾಡುತ್ತಿದ್ದಾರೆ.
ಅಂಥವರಿಗೆ ಇದರಿಂದ ಉಪಯೋಗವಾಗಲಿ ಎಂದು ಕಿಚ್ಚ ಸುದೀಪ್ ಕಾರ್ಯಕ್ರಮದಲ್ಲಿ ಹೇಳಿದಾಗ ನೆರೆದಿದ್ದ ಅಭಿಮಾನಿಗಳು ಚಪ್ಪಾಳೆ, ಶಿಳ್ಳೆಯ ಸುರಿಮಳೆಯನ್ನೇ ಗೈದರು.
ರಾಟೆ ಚಿತ್ರದಲ್ಲಿ ತಾನೇ ಹಾಡಿದ ಹಾಡನ್ನು ಹಾಡಿ ರಂಜಿಸಿದ ಸುದೀಪ್, ಬಹಳ ಹೊತ್ತು ವೇದಿಕೆಯ ಮೇಲೆ ಇದ್ದದ್ದು ವಿಶೇಷ. (ಜಸ್ಟ್ ಮದ್ವೇಲಿ ಚಿತ್ರದ ಗ್ಯಾಲರಿ)

ಈ ಕಾರ್ಯಕ್ರಮದಲ್ಲಿ ಮಾಜಿ ಡಿಸಿಎಂ ಆರ್ ಅಶೋಕ್, ಪಾಲಿಕೆ ಸದಸ್ಯರಾದ ಸಂಗಾತಿ ವೆಂಕಟೇಶ್, ವೆಂಕಟೇಶಮೂರ್ತಿ, ಸುದೀಪ್ ಅಭಿಮಾನಿ ಸಂಘದ ರಾಜ್ಯಾಧ್ಯಕ್ಷ ರವೀಂದ್ರ ಸಿಂಗ್ ಮುಂತಾದವರು ಭಾಗವಹಿಸಿದ್ದರು.
ಜಸ್ಟ್ ಮದ್ವೇಲಿ ಕುಚ್ ಕುಚ್ ಹೋತಾಹೆ ಟ್ಯಾಗ್ ಲೈನ್ ನಲ್ಲಿ ಬರುತ್ತಿರುವ ಈ ಚಿತ್ರವನ್ನು ಹರೀಶ್ ಜಲಗೆರೆ ನಿರ್ಮಿಸುತ್ತಿದ್ದಾರೆ. ಇವರೇ ಚಿತ್ರದ ನಾಯಕರು ಕೂಡಾ. ಕೋಲಾರ ಸೀನ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ರವಿ ಬಸ್ರೂರು ಸಂಗೀತ ನೀಡಿದ್ದಾರೆ.


Click it and Unblock the Notifications











