ನಿರ್ದೇಶಕ ಓಂ ಪ್ರಕಾಶ್ ನಟೋರಿಯಸ್ ಪಾದಯಾತ್ರೆ

ಅಂದರೆ ನಿರ್ದೇಶಕ ಓಂ ಪ್ರಕಾಶ್ ರಾವ್, ಯು ಗೋವಿಂದೇ ಗೌಡ ನಿರ್ದೇಶನದ 'ನಟೋರಿಯಸ್' ಚಿತ್ರದಲ್ಲಿ ರಾಜಕಾರಣಿ ಪಾತ್ರ ಮಾಡುತ್ತಿದ್ದಾರೆ. ರಾಜಕಾರಣಿಯಾಗಿ ಅವರು ಪಾದಯಾತ್ರೆಗೆ ಹೊರಟುನಿಂತಿರುವ ದೃಶ್ಯವನ್ನು ಚಿತ್ರೀಕರಿಸಿಕೊಳ್ಳಲಾಗಿದೆ. ಓಂ ಪ್ರಕಾಶ್ ರಾವ್ ಡೈಲಾಗ್ ಹೇಳುವ ರೀತಿಗೆ ಈಗಾಗಲೇ ಬೆರಗಾಗಿರುವ ಮಂದಿ ಸಾಕಷ್ಟಿದ್ದಾರೆ. ಇನ್ನು ರಾಜಕಾರಣಿ ಪಾತ್ರದಲ್ಲಿ ಅವರ ಡೈಲಾಗ್ ಕೇಳುವ ಕುತೂಹಲ ಎಲ್ಲರಲ್ಲೂ ಮೂಡಿದೆ.
ರಾಕೇಶ್ ಅಡಿಗ ಹಾಗೂ ರಮ್ಯಾ ಬಾರ್ನಾ ಅಭಿನಯದ ಈ ಚಿತ್ರವನ್ನು ಬಿಎನ್ ಗುರುರಾಜ್ ಅವರು ನಿರ್ಮಿಸುತ್ತಿದ್ದಾರೆ. ಈ ಚಿತ್ರದ ಬಹುತೇಕ ಶೂಟಿಂಗ್ ಬೆಂಗಳೂರು ಹಾಗೂ ಸುತ್ತಮುತ್ತ ನಡೆಯುತ್ತಿದ್ದು, ಓಂ ಪ್ರಕಾಶ್ ಅವರ ರಾಜಕಾರಣಿ ಪಾತ್ರವನ್ನು ನಂದಿನಿ ಲೇಔಟ್ ನಲ್ಲಿ ಚಿತ್ರೀಕರಿಸಿಕೊಳ್ಳಲಾಗಿದೆ. ಜೊತೆಗೆ ಕ್ಲಬ್ ಒಂದರಲ್ಲಿ ರಮ್ಯಾ ಬಾರ್ನಾ ಹಾಗೂ ರಾಕೇಶ್ ಹೆಜ್ಜೆಹಾಕಿರುವ 'ಮಿಣ ಮಿಣ ಕಣ್ಗಳಲ್ಲಿ ತರತರ ಆನಂದ...' ಎಂಬ ಗೀತೆಯನ್ನು ಶೂಟ್ ಮಾಡಲಾಗಿದೆ.
ಗೋವಿಂದೇ ಗೌಡ ನಿರ್ದೇಶನದ 'ನಟೋರಿಯಸ್' ಚಿತ್ರಕ್ಕೆ ಪ್ರಭು ಎಸ್ಆರ್ ಸಂಗೀತ ಹಾಗೂ ಧನುಷ್ ಛಾಯಾಗ್ರಹಣವಿದೆ. ಸಾಧು ಕೋಕಿಲ, ಓಂ ಪ್ರಕಾಶ್ ರಾವ್, ರಾಜು ತಾಳಿಕೋಟೆ, ನಾಗೇಂದ್ರ ಅರಸ್, ರವಿಚೇತನ್, ಸುಚೇಂದ್ರ ಪ್ರಸಾದ್ ಮುಂತಾದವರು ಪೋಷಕಪಾತ್ರಗಳಲ್ಲಿ ನಟಿಸಿದ್ದಾರೆ. ಒಟ್ಟಿನಲ್ಲಿ, ನಿರ್ದೇಶಕ ಓಂ ಪ್ರಕಾಶ್ ರಾವ್ ಅವರು ನಟರಾಗಿ ಹೆಚ್ಚು ಕಾಣಿಸಿಕೊಳ್ಳುತ್ತಿರುವುದು ಇತ್ತೀಚಿಗೆ ವಿಶೇಷ ಬೆಳವಣಿಗೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











