ಮಾತು ಬಾರದ ಹುಡುಗಿ ಪಾತ್ರದಲ್ಲಿ ಸಂಯುಕ್ತ ಹೆಗ್ಡೆ
'ಒಮ್ಮೆ ನಿಶ್ಯಬ್ಧ ಒಮ್ಮೆ ಯುದ್ಧ' ಸಿನಿಮಾ ಮುಂದಿನ ಶುಕ್ರವಾರ (ಮೇ 31) ರಂದು ಬಿಡುಗಡೆಯಾಗುತ್ತಿದೆ. ಈ ಚಿತ್ರದ ಮೂಲಕ ನಟಿ ಸಂಯುಕ್ತ ಹೆಗ್ಡೆ ವರ್ಷಗಳ ಬಳಿಕ ಮತ್ತೆ ಬಿಗ್ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.
ಸೃಜನಶೀಲ ಸಿನಿಮಾಗಳನ್ನು ಮಾಡಿ ಗೆಲ್ಲಿಸಿಕೊಳ್ಳುವುದು ಕನ್ನಡ ಚಿತ್ರರಂಗದಲ್ಲಿ ಮಾತ್ರ ಎಂದು ನಂಬಿದ್ದ ತೆಲುಗು ನಾಡಿನ ಗೆಳೆಯರ ತಂಡ ಒಂದು, ಎರಡು ವರ್ಷದ ಹಿಂದೆ ಬೆಂಗಳೂರಿಗೆ ಬಂದಿತ್ತು. ಆ ತಂಡ ತಯಾರಿಸಿದ ಸಿನಿಮಾವೇ 'ಒಮ್ಮೆ ನಿಶ್ಯಬ್ಧ ಒಮ್ಮೆ ಯುದ್ಧ'.
ಯುವ ನಟ ಪ್ರಭು ನಾಯಕ ನಟರಾಗಿ ನಟಿಸಿದ್ದು, ಸಂಯುಕ್ತ ಹೆಗ್ಡೆ ನಾಯಕಿ ನಟಿಯಾಗಿ ನಟಿಸಿದ್ದಾರೆ. ಈ ಚಿತ್ರದ ವಿಶೇಷತೆಗಳಲ್ಲಿ ಒಂದು ಸಂಯುಕ್ತ ಹೆಗಡೆ ಅವರ ಪಾತ್ರ. ಕಿರಿಕ್ ಪಾರ್ಟಿ ಹಾಗೂ 'ಕಾಲೇಜು ಕುಮಾರ್' ಚಿತ್ರದಲ್ಲಿ ಚಟಪಟ ಮಾತಾಡುವ ಬಬ್ಲಿ ನಟಿಯಾಗಿ ನಟಿಸಿ ಜನಪ್ರಿಯತೆ ಗಳಿಸಿದ್ದ ಇವರು, ಈ ಚಿತ್ರದ ಮೂಲಕ ಮಾತು ಬಾರದ ಹಾಗೂ ಕಿವಿ ಕೇಳದ ಅನಾಥೆಯ ಪಾತ್ರ ನಿಭಾಯಿಸಿದ್ದಾರೆ.

ಶ್ರೀ ನಾಗ್ ಅವರು ಈಗಾಗಲೇ ತೆಲುಗಿನಲ್ಲಿ ನಾಲ್ಕು ಸಿನಿಮಾಗಳನ್ನು ಮಾಡಿದ್ದಾರೆ. ಕನ್ನಡಕ್ಕೆ 'ನಿತ್ಯ ಜೊತೆ ಸತ್ಯ' ಎಂಬ ಸಿನಿಮಾದ ಮೂಲಕ ಕಾಲಿಟ್ಟಿದ್ದರು. ಈಗ ಮತ್ತೆ ಮತ್ತೊಂದು ಕನ್ನಡ ಸಿನಿಮಾ ಮೂಲಕ ಕನ್ನಡ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಈ ಬಾರಿ ಒಂದು ಭಿನ್ನ ರೋಚಕ ಪ್ರೇಮ ಕಥೆಯನ್ನು ಚಿತ್ರಕತೆಯಾಗಿಸಿ ನಿರ್ದೇಶನ ಮಾಡಿದ್ದಾರೆ.
ಈ ಚಿತ್ರಕ್ಕೆ ಕನ್ನಡದ ರಂಗಕರ್ಮಿ, 'ಗುಲಾಬಿ ಗ್ಯಾಂಗ್' ನಾಟಕದ ಖ್ಯಾತಿಯ ಪ್ರವೀಣ್ ಸೂಡ ಅವರು ಸಂಭಾಷಣೆ ಬರೆದಿದ್ದಾರೆ. ಕಿರಣ್ ವಾರಣಾಸಿ ಅವರ ಸಂಗೀತ ಈಗಾಗಲೇ ಸಂಗೀತ ಪ್ರಿಯರ ಮನ ಗೆದ್ದಿದೆ. ಕಲ್ಯಾಣ್ ಸಾಮಿ ಅವರ ಛಾಯಾಗ್ರಹಣ ಹಾಗೂ ಸುರೇಶ್ ಕುಮಾರ್ ಅವರ ಸಂಕಲನ ಇರುವ ಈ ಚಿತ್ರದ ಟ್ರೈಲರ್ ಚಿತ್ರ ರಸಿಕರ ಮೆಚ್ಚುಗೆ ಪಡೆದಿದೆ.
ಇನ್ನೂ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ತೆಲುಗು ಮೂಲದ ವಿಜಯ್ ಬೋಲೆನಾಥ್ ಅವರು ನಟಿಸಿದ್ದು, ಜೊತೆಗೆ ಚಿತ್ರದ ನಿರ್ಮಾಣದಲ್ಲಿ ಅವರ ಪಾತ್ರ ಪ್ರಮುಖವಾಗಿದೆಯಂತೆ. ಈ ಚಿತ್ರದ ಇತರೆ ಪಾತ್ರಗಳಲ್ಲಿ ರಾಮಕೃಷ್ಣ, ದಿವಂಗತ ಎಡಕಲ್ಲು ಗುಡ್ಡದ ಮೇಲೆ ಚಂದ್ರಶೇಖರ್, ಯುವ ನಟಿ ಸುಶ್ಮಿತಾ ಗೌಡ ನಟಿಸಿದ್ದಾರೆ.
ಪ್ರವೀಣ್ ರಾಜ್ ಹಾಗೂ ಸುರೇಶ್ ಕುಮಾರ್ ಎಂಬ ತೆಲುಗಿನ ಉದ್ಯಮಿಗಳು ಬಂಡವಾಳ ಹೂಡಿದ್ದಾರೆ. 'ಒಮ್ಮೆ ನಿಶ್ಯಬ್ಧ ಒಮ್ಮೆ ಯುದ್ಧ' ಚಿತ್ರವು ಇದೇ ತಿಂಗಳ ಅಂದರೆ ಮೇ 31ಕ್ಕೆ ಬಿಡುಗಡೆ ಕಾಣಲಿದೆ.


Click it and Unblock the Notifications











