ನಮ್ ಏರಿಯಾಲ್ ಇನ್ನೊಂದಿನಾ; ಜಸ್ಟ್ ಒನ್ ಟೇಕ್

ನಿರ್ದೇಶಕ ಅರವಿಂದ್ ಕೌಶಿಕ್ ಹಾಗೂ ತಂಡ ಈ ಪ್ರಯೋಗಕ್ಕೆ ಮುಂದಾಗಿದ್ದು, ಆ ಚಿತ್ರಕ್ಕೆ ನಾಯಕರಾಗಿ ಪಟ್ರೆ ಅಜಿತ್, ಪಯಣ ರವಿಶಂಕರ್ ಹಾಗೂ ಗುಂಡ್ರುಗೋವಿ ಸತ್ಯ ಸಾಥ್ ನೀಡುತ್ತಿದ್ದಾರೆ. ಇವರೊಂದಿಗೆ ರಘು ಶಿವಮೊಗ್ಗ, ಕೈಲಾಶ್ ಹಾಗೂ ಇನ್ನೂ ಮೂವರು ಹುಡುಗರೂ ಸೇರಿದ್ದಾರೆ. ಒಟ್ಟು 8 ಜನರು ಈ ಚಿತ್ರದ ಪಾತ್ರಧಾರಿಗಳು.
ಈ ಎಂಟು ಜನರ ನಡುವೆ ನಡೆಯುವ ಕಥೆಯೇ ಚಿತ್ರವಾಗಲಿದ್ದು ಇದರಲ್ಲಿ ಒಬ್ಬರೇ ನಾಯಕಿ. ಅವರ್ಯಾರು ಎಂಬುದು ಸದ್ಯಕ್ಕೆ ಸಸ್ಪೆನ್ಸ್. ಈ ಚಿತ್ರಕ್ಕೆ 'ನಮ್ ಏರಿಯಾಲ್ ಇನ್ನೊಂದಿನಾ' ಎಂದು ಹೆಸರಿಡಲಾಗಿದೆ. ಈ ಹೆಸರಿಡಲು ಕಾರಣ ಇದಕ್ಕೂ ಮೊದಲು ಅರವಿಂದ್ ಅವರದೇ ನಿರ್ದೇಶನದ 'ನಮ್ ಏರಿಯಾಲಿ ಒಂದಿನಾ' ಎಂಬ ಚಿತ್ರ ಬಂದಿತ್ತು.
ಕಥೆ-ಚಿತ್ರಕಥೆ-ಸಂಭಾಷಣೆ ಜೊತೆ ಈ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ ಅರವಿಂದ್ ಕೌಶಿಕ್. ಈ ರೀತಿಯಾಗಿ ಚಿತ್ರ ಮಾಡುವುದು ಸುಲಭಸಾಧ್ಯವಲ್ಲ. ಹಾಗಾಗಿ ಕಳೆದ ಹದಿನೈದು ದಿನಗಳಿಂದ ಸದ್ದಿಲ್ಲದೇ ರಿಹರ್ಸಲ್ ನಡೆಯುತ್ತಿದೆ. ತಾಂತ್ರಿಕ ವರ್ಗವೂ ಸೇರಿದಂತೆ ಇಡೀ ಚಿತ್ರತಂಡ ರಿಹರ್ಸಲ್ ನಲ್ಲಿ ಬಿಜಿಯಾಗಿದೆ.
ಎರಡು ಗಂಟೆಯಲ್ಲಿ ವ್ಯಕ್ತಿಯೊಬ್ಬನ ಜೀವನ ಹೇಗೆ ಬದಲಾಗುತ್ತಾ ಹೋಗುತ್ತದೆ ಎಂಬುದನ್ನು ಚಿತ್ರಕಥೆಯ ಮೂಲಕ ಹೇಳಲಿದ್ದಾರಂತೆ ಕೌಶಿಕ್. ನಮ್ ಏರಿಯಾಲಿ ಒಂದಿನಾ ಚಿತ್ರದಲ್ಲಿ ಒಬ್ಬ ಅಬ್ಬೆಪಾರಿ ಹುಡುಗನ ಕಥೆ ಹೇಳಿದ್ದ ಕೌಶಿಕ್, ಈ ಚಿತ್ರದಲ್ಲಿ ಒಟ್ಟೂ ಎಂಟು ಮಂದಿ ಅಬ್ಬೆಪಾರಿಗಳನ್ನು ಕಲೆಹಾಕಿದ್ದಾರೆ.
ಆ ಕಥೆಗೂ ಈ ಕಥೆಗೂ ಸಾಕಷ್ಟು ಸಾಮ್ಯತೆ ಹಾಗೂ ಭಿನ್ನತೆ ಇದೆಯಂತೆ. ಅದೇನೆಂಬ ಗುಟ್ಟನ್ನು ನಿರ್ದೇಶಕ ಅರವಿಂದ್ ಕೌಶೀಕ್ ಬಿಟ್ಟುಕೊಡುತ್ತಿಲ್ಲ, ಚಿತ್ರ ನೋಡಿಯೇ ತಿಳಿಯಬೇಕಷ್ಟೆ! ಈ ಚಿತ್ರದಲ್ಲಿ ಪ್ರೀತಿ, ತಲ್ಲಣ, ನಲಿವು, ನೋವು, ಭಯೋತ್ಪಾದನೆ ಎಲ್ಲವೂ ಅಡಕವಾಗಿದೆ. ಪ್ರತಿಯೊಬ್ಬರೂ ನೋಡಲೇಬೇಕಾದ ಚಿತ್ರವಿದು" ಎಂದಿದ್ದಾರೆ ಕೌಶಿಕ್.
ಸಹಜ ಬೆಳಕಿನಲ್ಲೇ ನಡೆಯುವ ಈ ಚಿತ್ರದ ಚಿತ್ರೀಕರಣಕ್ಕೆ '5ಡಿ' ಕ್ಯಾಮರಾ ಬಳಕೆಯಾಗಲಿದೆ. ಸತತ ಚಿತ್ರೀಕರಣ ಇರುವುದರಿಂದ ಅಧಿಕೃತವಾಗಿ ಯಾವುದೇ ಕ್ಯಾಮರಾಮನ್ ಇರುವುದಿಲ್ಲ. ಸತತ ಎರಡುಗಂಟೆಗಳ ಕಾಲ ಚಿತ್ರೀಕರಣ ನಡೆದ ಬಳಿಕ ಅಗತ್ಯವಿದ್ದಷ್ಟು ಎಡಿಟಿಂಗ್, ಡಬ್ಬಿಂಗ್ ಹಾಗೂ ರೀರೆಕಾರ್ಡಿಂಗ್ ಮಾಡಿ 10 ರಿಂದ ಹದಿನೈದು ದಿನ ಬಿಟ್ಟು ಬಿಡುಗಡೆ ಮಾಡಲಿದ್ದಾರೆ.
"ಗಿರಿನಗರದ ಫಿಫ್ಟಿ ಫೀಟ್ ಮೇನ್ ರೋಡ್, ಮುನೇಶ್ವರ ಬ್ಲಾಕ್ ಹಾಗೂ ಶಾಮಣ್ಣ ಗಾರ್ಡನ್ ಸುತ್ತಮುತ್ತ 5 ಕೀ ಮೀ ವ್ಯಾಪ್ತಿಯಲ್ಲಿ ಚಿತ್ರೀಕರಣ ನಡೆಯಲಿದೆ. ಕಡಿಮೆ ಬಜೆಟ್, ಜಾಸ್ತಿ ರಿಸ್ಕ್ ಈ ಚಿತ್ರ ಮಾಡುವುದರಲ್ಲಿದೆ. ಒಮ್ಮೆ ಮಳೆ ಬಂದರೂ ಕಲಾವದರು ನಟನೆ ಮುಂದುವರಿದು ಕ್ಯಾಮರಾ ಆಫ್ ಆಗದೇ ಚಿತ್ರೀಕರಣ ನಡೆಯುವಂತೆ ವ್ಯವಸ್ಥೆ ಮಾಡಿಕೊಂಡಿದ್ದೇನೆ" ಎಂಬುದು ನಿರ್ದೇಶಕರ ಮಾತು.
ಒಟ್ಟಿನಲ್ಲಿ ಬೆಳ್ಳಿತೆರೆಯಲ್ಲಿ ತಮ್ಮ ಜಾದೂ ಮೆರೆಯುತ್ತಿರುವ ಅರವಿಂದ್ ಕೌಶಿಕ್ ಸದ್ಯದಲ್ಲೇ ಹೊಸ ಸಾಹಸದ ಮೂಲಕ ದಾಖಲೆ ಮೆರೆಯಲು ಹೊರಟಿದ್ದಾರೆ. ಅವರ ಪ್ರಯತ್ನಕ್ಕೆ ಸಾಥ್ ನೀಡಲು ಅಜಿತ್, ರವಿಶಂಕರ್ ಹಾಗೂ ಸತ್ಯ ಇದ್ದಾರೆ. ಅಂದುಕೊಂಡಂತೆ ಎಲ್ಲವೂ ನಡೆದರೆ ಅತಿ ಶೀಘ್ರದಲ್ಲಿ ಈ ಚಿತ್ರವನ್ನು ಪ್ರೇಕ್ಷಕರು ನೋಡಲಿದ್ದಾರೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











