ಪಿ ಶೇಷಾದ್ರಿ ಚಿತ್ರದ ವಿರುದ್ಧ ಕಥೆ ಕದ್ದ ಆರೋಪ
ಖ್ಯಾತ ನಿರ್ದೇಶಕ ಪಿ ಶೇಷಾದ್ರಿ ಅವರ 'ಡಿಸೆಂಬರ್ 1' ಚಿತ್ರ ಪ್ರತಿಷ್ಠಿತ ರಾಷ್ಟ್ರ ಪ್ರಶಸ್ತಿಗೆ ಪಾತ್ರವಾಗಿರುವುದು ಗೊತ್ತೇ ಇದೆ. ಇದೀಗ ಚಿತ್ರ ಬಿಡುಗಡೆಯಾಗಿದ್ದು, ರಾಜ್ಯದಾದ್ಯಂತ ಪ್ರದರ್ಶನ ಕಾಣುತ್ತಿದೆ. ಇದೇ ಸಂದರ್ಭದಲ್ಲಿ ಚಿತ್ರದ ವಿರುದ್ಧ ಕಥೆ ಕದ್ದ ಆರೋಪ ಎದುರಾಗಿದೆ.
ಪಿ ಶೇಷಾದ್ರಿ ವಿರುದ್ಧ ಕಥೆ ಕದ್ದ ಆರೋಪ ಮಾಡುತ್ತಿರುವವರು ಮತ್ತೊಬ್ಬ ನಿರ್ದೇಶಕ, ನಟ ಓಂ ಪ್ರಕಾಶ್ ನಾಯಕ್. ಅವರು ಮಾಡುತ್ತಿರುವ ಆರೋಪ ಏನೆಂದರೆ, ತಮ್ಮ 'ಸಿಎಂ ಹಾಗೂ ಸೋಮ್ಲಾ' ಎಂಬ ಸಣ್ಣ ಕಥೆಯನ್ನು ಕದ್ದು ಶೇಷಾದ್ರಿ ಅವರು ಚಿತ್ರ ಮಾಡಿದ್ದಾರೆ. ಈ ಕಥೆ 2007ರಲ್ಲಿ ಪತ್ರಿಕೆಯೊಂದರ ದೀಪಾವಳಿ ವಿಶೇಷಾಂಕದಲ್ಲಿ ಪ್ರಕಟವಾಗಿತ್ತು ಎಂದಿದ್ದಾರೆ. [ಪಿ ಶೇಷಾದ್ರಿ ಅವರ 'ಡಿಸೆಂಬರ್ 1'ಕ್ಕೆ ರಾಷ್ಟ್ರಪ್ರಶಸ್ತಿ ಗರಿ]

ಬಸಂತಕುಮಾರ್ ಪಾಟೀಲ್ ಅವರು ನಿರ್ಮಿಸಿರುವ 'ಡಿಸೆಂಬರ್ 1' ಚಿತ್ರ 2013ನೇ ಸಾಲಿನ ಎರಡು ರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನವಾಗಿದೆ. ಮುಖ್ಯಮಂತ್ರಿಯೊಬ್ಬರ ಗ್ರಾಮವಾಸ್ತವ್ಯದ ಗಿಮ್ಮಿಕ್ಕು ಹಾಗೂ ಅದರಿಂದ ಗ್ರಾಮವೊಂದರ ಅಮಾಯಕ ಜನರ ಬದುಕು ಹೇಗೆ ಅಸ್ತವ್ಯಸ್ತವಾಗುತ್ತದೆ ಎಂಬುದೇ ಚಿತ್ರದ ಕಥಾವಸ್ತು.
ಇನ್ನು ಮಾಜಿ ಸಚಿವೆ ಬಿ ಟಿ ಲಲಿತಾ ನಾಯಕ್ ಅವರ ಪುತ್ರ ಓಂ ಪ್ರಕಾಶ್ ನಾಯಕ್ ಅವರು 'ನಾನು ಅವಳು ಮತ್ತು ಕನ್ನಡಿ' ಎಂಬ ಏಕವ್ಯಕ್ತಿ ಚಿತ್ರ ಮಾಡಿ ಗುರುತಿಸಿಕೊಂದಿದ್ದಾರೆ. ಪ್ರಸ್ತುತ ಅವರು 'ಢಿಶುಂ ಢಿಶುಂ' ಎಂಬ ಚಿತ್ರದಲ್ಲಿ ತಪ್ಪು ಮಾಡಿದ್ರೆ ಹೊಡೀತೀನಿ ಎನ್ನುವ ಮೆಂಟಲ್ ಸೀನನ ಪಾತ್ರವನ್ನು ಪೋಷಿಸುತ್ತಿದ್ದಾರೆ. [ಒನ್ ಇಂಡಿಯಾ ಜತೆ ಸಂಭ್ರಮ ಹಂಚಿಕೊಂಡ ಶೇಷಾದ್ರಿ]
ಈ ಬಗ್ಗೆ ಪಿ ಶೇಷಾದ್ರಿ ಅವರು ಹೇಳುವುದೇನೆಂದರೆ, ದಿನಪತ್ರಿಕೆಯಲ್ಲಿ ಒಂದು ಸುದ್ದಿ ಬಂದಿತ್ತು, "ಗ್ರಾಮವಾಸ್ತವ್ಯದಿಂದ 'ವಾಸ್ತವ್ಯ'ವನ್ನೇ ಕಳೆದುಕೊಂಡರು! 2006ರಲ್ಲಿ ನಡೆಯಿತು ಎನ್ನಲಾದ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳ ವಿಶಿಷ್ಟ ಕಾರ್ಯಕ್ರಮ ಗ್ರಾಮವಾಸ್ತವ್ಯ ದ ನಂತರದ ಪರಿಣಾಮವನ್ನು ಈ ವರದಿ ಹಿಡಿದಿಟ್ಟಿತ್ತು.
ಇದನ್ನು ಓದಿದ ತಕ್ಷಣ ನನಗೆ ಹವವು ಒಳನೋಟಗಳು ಕಂಡವು. ಈ ಸುದ್ದಿಯ ಬೆನ್ನು ಹತ್ತಿ ಹೋದಾಗ ಮತ್ತಷ್ಟು ವಿವರಗಳು ಸಿಕ್ಕವು. ಮೇಲುನೋಟಕ್ಕೆ ಕಾಣುವುದಕ್ಕಿಂತ ಆಳದಲ್ಲಿರುವ ಸಮಸ್ಯೆಯೇ ಬೇರೆ ಅನ್ನಿಸಿತು. ಹಾಗೆ ನೋಡಿದರೆ ಇದೊಂದು ಸತ್ಯ ಕಥೆ. ಎಲ್ಲಿಯೂ ನಡೆಯಬಹುದಾದದ್ದು!


Click it and Unblock the Notifications











