ನಿಮಗೆ ಅವಮಾನ ಆಗಬಾರದೆಂದು ಇದನ್ನು ಹೇಳಿರಲಿಲ್ಲ: ದಯಾಳ್ಗೆ ಪವನ್ ಧ್ವನಿ ಸಂದೇಶ
'ಲೂಸಿಯಾ', 'ಯೂಟರ್ನ್' ಖ್ಯಾತಿಯ ಪವನ್ ಕುಮಾರ್ ಕಳೆದ ವರ್ಷ ಎಫ್ಯುಸಿ ಎಂಬ ತಂಡ ಕಟ್ಟಿ ಕನ್ನಡ ನಿರ್ದೇಶಕರನ್ನು ಒಟ್ಟು ಮಾಡುವ ಯತ್ನ ಮಾಡಿದ್ದರು. ಆ ತಂಡದಲ್ಲಿ ಸೇರಿಕೊಳ್ಳಲು ನಿರ್ದೇಶಕ ದಯಾಳ್ ಪದ್ಮನಾಭ್ಗೆ ಅವಕಾಶ ಸಿಗದೇ ಇರುವ ಬಗ್ಗೆ ದಯಾಳ್ ಫೇಸ್ಬುಕ್ನಲ್ಲಿ ಅಳಲು ತೋಡಿಕೊಂಡು ಪವನ್ ಕುಮಾರ್ ಅನ್ನು ಗುರಿ ಮಾಡಿ ಪೋಸ್ಟ್ ಹಾಕಿದ್ದು ಹಳೆಯ ವಿಚಾರ. ಆದರೆ ಈಗ ಅದಕ್ಕೆ ಮರುಜೀವ ದೊರಕಿದೆ.
ಇತ್ತೀಚೆಗೆ ಕ್ಲಬ್ಹೌಸ್ ಚರ್ಚೆಯೊಂದರಲ್ಲಿ ಪಾಲ್ಗೊಂಡಿದ್ದ ದಯಾಳ್ ಪದ್ಮನಾಭನ್ ಮತ್ತೆ ಪವನ್ ಕುಮಾರ್ ವಿರುದ್ಧ ಮಾತನಾಡಿದ್ದು ಆ ವಿಷಯವನ್ನು ಕೆಲವು ಗೆಳೆಯರು ಪವನ್ಗೆ ತಲುಪಿಸಿದ್ದಾರೆ. ಹೀಗಾಗಿ ಪವನ್ ಕುಮಾರ್, ದಯಾಳ್ ಪದ್ಮನಾಭ್ಗೆ ಖಾಸಗಿಯಾಗಿ ಧ್ವನಿ ಸಂದೇಶವೊಂದನ್ನು ಕಳಿಸಿದ್ದಾರೆ. ಆ ಸಂದೇಶ ಈಗ ವೈರಲ್ ಆಗಿದೆ.
''ಒಂದು ವರ್ಷವಾದರೂ ನೀವು ತಪ್ಪು ಕಲ್ಪನೆಯಲ್ಲಿಯೇ ಇದ್ದೀರಿ ಎಂಬ ಅಂಶ ನಿಮ್ಮ ಕ್ಲಬ್ಹೌಸ್ ಚರ್ಚೆಯಿಂದ ಗೊತ್ತಾಗಿದೆ. ನಾನು ನಿಮ್ಮನ್ನು ಎಫ್ಯುಸಿಗೆ ಆಹ್ವಾನಿಸಲಿಲ್ಲ. ನಿಮಗೆ ಕಳಿಸಿದಂತೆ ಚಿತ್ರರಂಗದ ಬಹುತೇಕರಿಗೆ ಸಂದೇಶ ಕಳಿಸಿ, ''ನಾವು ಎಫ್ಯುಸಿ ಮಾಡುತ್ತಿದ್ದೇವೆ ಸೇರಿಕೊಳ್ಳಿ'' ಎಂದು ಕೇಳಿದ್ದೆವು. ಅದು ಆಹ್ವಾನ ಮಾಡಿದ್ದಲ್ಲ ಬದಲಿಗೆ ಅದೊಂದು ಪ್ರೊಪೋಸಲ್ ಆಗಿತ್ತಷ್ಟೆ. ನಿಮ್ಮಂಥೆ ಆರಂಭದಲ್ಲಿ ಹಲವರು ಅದಕ್ಕೆ ಪ್ರತಿಕ್ರಿಯಿಸಿರಲಿಲ್ಲ. ಆ ನಂತರ ಪ್ರತಿಕ್ರಿಯಿಸಿದರು'' ಎಂದಿದ್ದಾರೆ ಪವನ್.

ನಿಮ್ಮ ವಿರುದ್ಧವಾಗಿ ಮತ ಹಾಕಿದ್ದರು: ಪವನ್
''ಎಫ್ಯುಸಿಗೆ ಸದಸ್ಯರನ್ನು ಆಯ್ಕೆ ಮಾಡಲು ಒಂದು ಮಾದರಿ ಹಾಕಿಕೊಂಡಿದ್ದೆವು. ಈಗಾಗಲೇ ಎಫ್ಯುಸಿಯಲ್ಲಿ ಸದಸ್ಯರಾಗಿರುವವರು, ಹೊಸದಾಗಿ ಅರ್ಜಿಹಾಕುವವರು ಎಫ್ಯುಸಿಯ ಸದಸ್ಯರಾಗಲು ಅರ್ಹರೇ ಅಥವಾ ಅಲ್ಲವೇ ಎಂದು ಮತ ಹಾಕಬೇಕಿತ್ತು. ಇದು ನಮ್ಮ ಮಾಡೆಲ್ ಆಗಿತ್ತು. ಅಂತೆಯೇ ನಿಮ್ಮ ಅರ್ಜಿ ಸದಸ್ಯರ ಮುಂದೆ ಬಂದಾಗ ಬಹುತೇಕರು ನಿಮ್ಮ ವಿರುದ್ಧವಾಗಿ ಮತ ಹಾಕಿದ್ದರು'' ಎಂದು ವಿವರಿಸಿದ್ದಾರೆ ಪವನ್.

''ನನ್ನನ್ನು ಬೈದುಕೊಳ್ಳುತ್ತಿದ್ದೀರಿ, ಆದರೆ ನಾನು ನಿಮ್ಮ ಪರವಾಗಿ ಮತ ಹಾಕಿದ್ದೆ''
''ನೀವು ಇಂದು ನನ್ನನ್ನು ಬೈದುಕೊಂಡು ಓಡಾಡುತ್ತಿದ್ದೀರ. ಆದರೆ ನೀವು ಎಫ್ಯುಸಿಯ ಸದಸ್ಯರಾಗಬೇಕು ಎಂದು ನಾನು ನಿಮ್ಮ ಪರವಾಗಿ ಮತ ಹಾಕಿದ್ದೆ. ಆದರೆ ಹೆಚ್ಚಿನ ಮತಗಳು ನಿಮ್ಮ ವಿರುದ್ಧ ಇದ್ದ ಕಾರಣ ನೀವು ಆಯ್ಕೆ ಆಗಲಿಲ್ಲ. ಆದರೆ ತಂಡಕ್ಕೆ ಇನ್ನಷ್ಟು ಸದಸ್ಯರು ಸೇರಿಕೊಂಡ ನಂತರ ಮತ್ತೊಮ್ಮೆ ನಿಮ್ಮ ಅರ್ಜಿಯನ್ನು ಮತಕ್ಕೆ ಹಾಕಲಾಯಿತು. ಆ ಸಮಯದಲ್ಲಿ ನಾವು ನಿಮ್ಮ ಬಗ್ಗೆ ಚರ್ಚೆ ಸಹ ಮಾಡಿದೆವು, ನಿಮ್ಮಂಥಹ ಅನುಭವಿಗಳು ತಂಡದಲ್ಲಿ ಇರಬೇಕೆಂದು. ಆದರೆ ಆ ವೇಳೆಗೆ ನೀವು ಫೇಸ್ಬುಕ್ನಲ್ಲಿ ಏನೇನು ಬೇಕೊ ಅದನ್ನೆಲ್ಲ ಮಾಡಿಬಿಟ್ಟಿದ್ದಿರಿ'' ಎಂದು ಆಗ ನಡೆದಿದ್ದ ಘಟನೆ ವಿವರಿಸಿದ್ದಾರೆ ಪವನ್.

ಎರಡನೇ ಬಾರಿ ಒಂದು ಮತವೂ ಬರಲಿಲ್ಲ: ಪವನ್
''ಎರಡನೇ ಬಾರಿ ನಿಮ್ಮ ಅರ್ಜಿಯನ್ನು ಮತಕ್ಕೆ ಹಾಕಿದಾಗ ಒಂದು ಮತ ಸಹ ನಿಮ್ಮ ಪರವಾಗಿ ಬರಲಿಲ್ಲ. ಇದನ್ನು ನಾನು ಎಲ್ಲೂ ಹೊರಗೆ ಹೇಳಿರಲಿಲ್ಲ. ನೀವು ಹಿರಿಯರು, ನಿಮಗೆ ಮರ್ಯಾದೆ ಇರುತ್ತದೆ ಅದಕ್ಕೆ ಧಕ್ಕೆ ತರುವುದು ಬೇಡ ಎಂದು ಕೊಂಡಿದ್ದೆ. ಆದರೆ ನೀವು ಫೇಸ್ಬುಕ್ನಲ್ಲಿ ಬರೆದು ರಗಳೆ ಮಾಡಿದ ಮೇಲೆ ಗೊತ್ತಾಯ್ತು ಯಾಕೆ ನಿಮಗೆ ಮತ ಬರಲಿಲ್ಲವೆಂದು. ಒಮ್ಮೆಯಂತೂ ಒಬ್ಬ ಸಿನಿಮಾ ನಿರ್ದೇಶಕರು ಕರೆ ಮಾಡಿ 'ಅವರು ಬರುವುದಾದರೆ ನಾವೆಲ್ಲ ಎಫ್ಯುಸಿ ಬಿಟ್ಟು ಹೋಗುತ್ತೇವೆ' ಎಂದರು. ನೀವು ಶ್ಯಾಮ್ ಅಂಥವರ ಜೊತೆ ಸೇರಿ ಏನೇನೋ ಮಾಡಿದ (ಪವನ್ ವಿರುದ್ಧ ಫೇಸ್ಬುಕ್ನಲ್ಲಿ ನಿಂದನೆ) ಬಳಿಕ ನನಗೆ ಗೊತ್ತಾಯ್ತು, ಅವರೆಲ್ಲ ಯಾಕೆ ನಿಮ್ಮನ್ನು ದ್ವೇಷಿಸುತ್ತಾರೆ ಎಂದು'' ಎಂದು ನೇರವಾಗಿಯೇ ಮಾತನಾಡಿದ್ದಾರೆ ಪವನ್.

ಗೌರವಕ್ಕೆ ಧಕ್ಕೆ ಬರಬಾರದೆಂದು ಹೊರಗೆ ಹೇಳಿರಲಿಲ್ಲ: ಪವನ್
''ತಂಡವೊಂದು ಒಟ್ಟಿಗೆ ಸೇರಿ ಏನೋ ಮಾಡುತ್ತಿದ್ದು, ನಿಮ್ಮನ್ನು ಸೇರಿಸಿಕೊಳ್ಳಲು ಇಷ್ಟವಿಲ್ಲವೆಂದಾಗ ಅದನ್ನು ನೀವು ಒಪ್ಪಿಕೊಳ್ಳಬೇಕಿತ್ತು. ಆದರೆ ನೀವು ಅದನ್ನು ನೆಗೆಟಿವ್ ಆಗಿ ಪರಿಗಣಿಸಿ, ತಂಡದ ಸದಸ್ಯರನ್ನೆಲ್ಲ ಬೈದುಕೊಂಡು ಓಡಾಡುವುದು ನಿಮ್ಮ ಅನುಭವಕ್ಕೆ, ನಿಮ್ಮ ವಯಸ್ಸಿಗೆ ಶೋಭೆ ತರುವಂಥಹುದ್ದಲ್ಲ. ನಾನು ಇದನ್ನು ಎಲ್ಲೂ ಹೇಳಿರಲಿಲ್ಲ ಕಾರಣ ನಿಮ್ಮ ಘನತೆಗೆ ಧಕ್ಕೆ ಬರದೇ ಇರಲೆಂದು. ಹಾಗಾಗಿಯೇ ನಾನು ಇಂದು ಸಹ ನಿಮಗೆ ಖಾಸಗಿಯಾಗಿ ಈ ಧ್ವನಿ ಸಂದೇಶ ಕಳಿಸುತ್ತಿದ್ದೀನಿ. ಇದನ್ನು ನೀವು ಎಲ್ಲಿಯಾದರೂ ಹಂಚಿಕೊಳ್ಳಬಹುದು. ನೀವು ಹಂಚಿಕೊಳ್ಳುತ್ತೀರೆಂದು ಸಹ ನನಗೆ ಗೊತ್ತಿದೆ'' ಎಂದಿದ್ದಾರೆ ಪವನ್.
Recommended Video

ಈಗಲಾದರೂ ಅರಿತುಕೊಳ್ಳುತ್ತೀರ ಎಂದು ಭಾವಿಸಿದ್ದೇನೆ: ಪವನ್
''ನನಗೆ ಆಹ್ವಾನ ಮಾಡಿ ಕೊನೆಗೆ ತಂಡಕ್ಕೆ ಸೇರಿಸಿಕೊಳ್ಳದೆ ಅವಮಾನ ಮಾಡಿದರು ಎಂದು ನೀವು ಹೇಳುತ್ತಿದ್ದೀರಿ. ಆದರೆ ಅದು ಆಹ್ವಾನವೇ ಅಲ್ಲ ಅದು ಪ್ರೊಪೋಸಲ್ ಅಷ್ಟೆ. ಸಿನಿಮಾಕರ್ಮಿಗಳನ್ನು ಕರೆದು ಅವರ ಪ್ರತಿಭೆಯನ್ನು ಗಮನಿಸಿ ತಂಡಕ್ಕೆ ಸೇರಿಸಿಕೊಳ್ಳುವ ಪ್ರಕ್ರಿಯೆ ಅದಾಗಿತ್ತು. ಸಿನಿಮಾ ಕರ್ಮಿಗಳು ಉಳಿದವರೊಟ್ಟಿಗೆ ಹೇಗೆ ವರ್ತಿಸುತ್ತಾರೆ, ತಂಡದ ಜೊತೆಯಾಗಿ ಕೆಲಸ ಮಾಡಬಲ್ಲರೇ? ಎಂಬಿತ್ಯಾದಿ ವೈಯಕ್ತಿಕ ಅಂಶಗಳೂ ಸಹ ಗಣನೆಗೆ ಬಂದ ಕಾರಣ ನಿಮ್ಮ ಆಯ್ಕೆ ಆಗಲಿಲ್ಲ. ಈ ಸತ್ಯವನ್ನು ಈಗಾದರೂ ಅರಿತುಕೊಳ್ಳುತ್ತೀರ ಎಂದುಕೊಂಡಿದ್ದೇನೆ. ಇದನ್ನು ಇಲ್ಲಿಗೆ ಮುಗಿಸುತ್ತೀರ ಎಂದುಕೊಂಡಿದ್ದೇನೆ'' ಎಂದಿದ್ದಾರೆ ಪವನ್ ಕುಮಾರ್.


Click it and Unblock the Notifications











