'ಪೊಗರು' ಸಿನಿಮಾದ ಪೊಗರು ಇಳಿಸಿದ ಬ್ರಾಹ್ಮಣ ಸಮುದಾಯ: ದೃಶ್ಯ ಕತ್ತರಿಗೆ ಒಪ್ಪಿಗೆ
ಧ್ರುವ ಸರ್ಜಾ ನಟನೆಯ 'ಪೊಗರು' ಸಿನಿಮಾದ ವಿರುದ್ಧ ಬ್ರಾಹ್ಮಣ ಸಮುದಾಯ ಹೋರಾಟ ತೀವ್ರಗೊಳಿಸಿದೆ. ಇಂದು ವಾಣಿಜ್ಯ ಮಂಡಳಿಗೆ ಭೇಟಿ ನೀಡಿದ್ದ ಬ್ರಾಹ್ಮಣ ಸಮುದಾಯ ಮುಖಂಡರು 'ಪೊಗರು' ಚಿತ್ರತಂಡದ ವಿರುದ್ಧ ಏರಿದ ದನಿಯಲ್ಲಿ ಸಿಟ್ಟು ವ್ಯಕ್ತಪಡಿಸಿದ್ದಾರೆ.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಂಗ ಸಂಸ್ಥೆಗಳ ಮುಖಂಡರುಗಳು ಇಂದು ವಾಣಿಜ್ಯ ಮಂಡಳಿಗೆ ಭೇಟಿ ನೀಡಿ, 'ಪೊಗರು' ಸಿನಿಮಾದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಅವಹೇಳನ ಮಾಡಿದ ದೃಶ್ಯವನ್ನು ತೆಗೆಯಬೇಕೆಂದು ಆಗ್ರಹಿಸಿದವು. ಈ ಸಮಯ ನಿರ್ಮಾಪಕ ಸೂರಪ್ಪ ಬಾಬು ಹಾಗೂ ಇತರರೊಂದಿಗೆ ಜೋರು ವಾಗ್ವಾದ ಸಹ ನಡೆಯಿತು.
'ಪೊಗರು' ಸಿನಿಮಾದ ನಿರ್ಮಾಪಕ ಗಂಗಾಧರ್ ಬದಲಿಗೆ ನಿರ್ಮಾಪಕ ಸೂರಪ್ಪ ಬಾಬು ವಾಣಿಜ್ಯ ಮಂಡಳಿಗೆ ಬ್ರಾಹ್ಮಣ ಸಮುದಾಯದ ಮುಖಂಡರ ಬಳಿ ಮಾತನಾಡಲು ಆಗಮಿಸಿದರು. ಇದರಿಂದ ಸಿಟ್ಟಿಗೆದ್ದ ಮುಖಂಡರು, ಪೊಗರು ಸಿನಿಮಾದ ನಿರ್ಮಾಪಕ, ನಿರ್ದೇಶಕರನ್ನು ಕರೆಸಬೇಕು ಎಂದು ಪಟ್ಟು ಹಿಡಿದರು.

'ಮೊದಲು ಕರೆಸ್ರಿ ಅವನನ್ನ'
'ನಿರ್ಮಾಪಕ, ನಿರ್ದೇಶಕನನ್ನು ಕರೆಸುತ್ತೀವೆಂದು ಬೆಳಿಗ್ಗಿನಿಂದ ಕಾಯಿಸುತ್ತಿದ್ದಾರೆ. ಆ ನಿರ್ದೇಶಕ ಫಿಲಂ ಚೇಂಬರ್ ಗೆ ಗೌರವ ಕೊಡದಿದ್ದ ಮೇಲೆ ಇನ್ಯಾರಿಗೆ ಕೊಡ್ತಾನಂತೆ, ಮೊದಲು ಕರೆಸ್ರಿ ಅವನನ್ನ' ಎಂದು ಏಕವನಚದಲ್ಲಿಯೇ ಆಗ್ರಹಿಸಿದರು.

ವಿವಾದಾತ್ಮಕ ದೃಶ್ಯಗಳನ್ನು ಕತ್ತರಿಸಲಾಗುತ್ತದೆ: ಸೂರಪ್ಪ ಬಾಬು
ಅಂತಿಮವಾಗಿ ಸಭೆಯೆಲ್ಲ ಮುಗಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ಮಾಪಕ ಸೂರಪ್ಪ ಬಾಬು, 'ಬ್ರಾಹ್ಮಣ ಸಂಘದ ಮನವಿಯಂತೆ ಐದು ಮಂದಿಯ ಕಮಿಟಿ ಮಾಡಲಾಗಿದ್ದು, ವಿವಾದಾತ್ಮಕ ದೃಶ್ಯ್ಗಳನ್ನು ತೆಗೆದು ಹಾಕಲಾಗುತ್ತದೆ' ಎಂದು ಭರವಸೆ ನೀಡಿದರು.

ಐದು ಮಂದಿಯ ಕಮಿಟಿ ರಚನೆ
ನಿರ್ದೇಶಕಿ ರೂಪಾ ಅಯ್ಯರ್ ಹಾಗೂ ಇನ್ನೂ ಕೆಲವರು ಕಮಿಟಿಯಲ್ಲಿರಲಿದ್ದು, ಸಿನಿಮಾದ ತಂತ್ರಜ್ಞರ ಜೊತೆ ಕೂತುಕೊಂಡು ಚರ್ಚೆ ನಡೆಸಿ ಬ್ರಾಹ್ಮಣ ಸಮುದಾಯಕ್ಕೆ ಅವಹೇಳನ ಮಾಡುವ ದೃಶ್ಯಗಳನ್ನು ತೆಗೆದು ಹಾಕಲಾಗುವುದು, ನಾಳೆ ಮಧ್ಯಾಹ್ನ ಶೋ ಒಳಗಾಗಿ ದೃಶ್ಯಗಳನ್ನು ಡಿಲೀಟ್ ಮಾಡುವ ಪ್ರಯತ್ನ ಮಾಡುತ್ತೇನೆ' ಎಂದು ಹೇಳಿದರು.
Recommended Video

ಬ್ರಾಹ್ಮಣ ಸಮುದಾಯಕ್ಕೆ ಅವಹೇಳನ ಮಾಡುವ ದೃಶ್ಯಗಳು
ಪೊಗರು ಸಿನಿಮಾದಲ್ಲಿ ಬ್ರಾಹ್ಮಣ ಸಮುದಾಯದ ಅವಹೇಳನ ಮಾಡುವ ದೃಶ್ಯಗಳಿದ್ದು ಅವನ್ನು ಕತ್ತರಿಸಬೇಕು, ನಿರ್ದೇಶಕ, ನಿರ್ಮಾಪಕರು ಬ್ರಾಹ್ಮಣ ಸಮುದಾಯದ ಕ್ಷಮೆ ಕೇಳಬೇಕು ಎಂದು ಕೆಲವು ದಿನಗಳಿಂದ ಬ್ರಾಹ್ಮಣ ಸಮುದಾಯದರು ಒತ್ತಾಯಿಸುತ್ತಿದ್ದಾರೆ.


Click it and Unblock the Notifications











