ವಿಷ್ಣು ಪುಣ್ಯ ಸ್ಮರಣೆ: ಸಿಎಂ ಸೇರಿ ಹಲವು ಗಣ್ಯರಿಂದ ಸಾಹಸಸಿಂಹ ನೆನಪು
ಕನ್ನಡ ಚಿತ್ರರಂಗದ ಮೇರು ನಟ, ಸಾಹಸ ಸಿಂಹ ಡಾ ವಿಷ್ಣುವರ್ಧನ್ ಅವರು ಅಗಲಿ 11 ವರ್ಷ ಕಳೆದಿದೆ. ಅಭಿಮಾನ್ ಸ್ಟುಡಿಯೋದಲ್ಲಿ ಅಭಿಮಾನಿಗಳು ಹಾಗೂ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ ಮಾಡುತ್ತಿರುವ ಸ್ಥಳದಲ್ಲಿ ಕುಟುಂಬಸ್ಥರು ವಿಷ್ಣುದಾದಾಗೆ ಪೂಜೆ ಸಲ್ಲಿಸಿದ್ದಾರೆ.
ಹೃದಯವಂತನ ಪುಣ್ಯ ಸ್ಮರಣೆಯ ದಿನ ಕರ್ನಾಟಕದ ಸರ್ಕಾರ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಸಚಿವರಾದ ಬಿಸಿ ಪಾಟೀಲ್, ಕೆಎಸ್ ಈಶ್ವರಪ್ಪ ನೆನಪು ಮಾಡಿಕೊಂಡಿದ್ದಾರೆ. ಜೊತೆಗೆ ಚಿತ್ರರಂಗದಿಂದ ಸಹ ಹಲವು ಸೆಲೆಬ್ರಿಟಿಗಳು ಕೋಟಿಗೊಬ್ಬನ ಸ್ಮರಣೆ ಮಾಡಿದ್ದಾರೆ. ಹಾಗಾದ್ರೆ, ಯಾವೆಲ್ಲ ಗಣ್ಯರು ಯಜಮಾನರನ್ನು ಸ್ಮರಿಸಿದ್ದಾರೆ ಎಂದು ತಿಳಿಯಲು ಮುಂದೆ ಓದಿ...

ಸಾಂಸ್ಕೃತಿಕ ಏಕತೆಯ ರಾಯಭಾರಿ
''ಇಂದು ಕನ್ನಡ ಚಿತ್ರರಂಗದ ಮೇರು ನಟ, ಅಭಿಮಾನಿಗಳ ಪಾಲಿನ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಪುಣ್ಯಸ್ಮರಣೆಯ ದಿನ. ತಮ್ಮ ನೂರಾರು ಉತ್ತಮ ಚಿತ್ರಗಳ ಮೂಲಕ ಕನ್ನಡಿಗರ ನೆಚ್ಚಿನ ನಟನಾಗಿಯೇ ಉಳಿದಿರುವ ಡಾ.ವಿಷ್ಣುವರ್ಧನ್ ಕನ್ನಡ ನಾಡು ನುಡಿಗಳ ಸಾಂಸ್ಕೃತಿಕ ಏಕತೆಯ ರಾಯಭಾರಿಯಾಗಿ ಜನಮಾನಸದಲ್ಲಿ ಚಿರಸ್ಥಾಯಿಯಾಗಿದ್ದಾರೆ. - ಯಡಿಯೂರಪ್ಪ, ಮುಖ್ಯಮಂತ್ರಿ

ಅಭಿಮಾನಿಗಳಿಗೆ ಸ್ಫೂರ್ತಿಯ ಸೆಲೆ
''ಕನ್ನಡ ಚಿತ್ರರಂಗದ ಮೇರು ನಟರಲ್ಲಿ ಒಬ್ಬರಾದ ಅಭಿನಯ ಭಾರ್ಗವ, ಅಭಿಮಾನಿಗಳ ನೆಚ್ಚಿನ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಪುಣ್ಯಸ್ಮರಣೆಯ ಈ ದಿನದಂದು ಅವರಿಗೆ ಭಾವಪೂರ್ಣ ನಮನಗಳು. ತೆರೆಯ ಮೇಲೆ ಮಾತ್ರವಲ್ಲದೆ ನಿಜ ಜೀವನದಲ್ಲೂ ತಮ್ಮ ಶ್ರೇಷ್ಠ ವ್ಯಕ್ತಿತ್ವದಿಂದ ಈಗಲೂ ಡಾ. ವಿಷ್ಣುವರ್ಧನ್ ಅಸಂಖ್ಯಾತ ಅಭಿಮಾನಿಗಳಿಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ.'' - ವಿಜಯೇಂದ್ರ

ಗೌರವಪೂರ್ವಕವಾಗಿ ಸ್ಮರಿಸೋಣ
''ಕನ್ನಡ ಚಲನಚಿತ್ರ ರಂಗದ ಸ್ಪ್ರುರದೃಪೀ ನಟ, ಸಾಹಸ ಸಿಂಹನಾಗೀ ಮಿಂಚಿದ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಪುಣ್ಯತಿಥಿಯ ದಿನವಾದ ಇಂದು ಈ ಮೇರುನಟನನ್ನು ಗೌರವಪೂರ್ವಕವಾಗಿ ಸ್ಮರಿಸೋಣ'' - ಕೆಎಸ್ ಈಶ್ವರಪ್ಪ, ಕರ್ನಾಟಕ ಸರ್ಕಾರ, ಸಚಿವ

ಜೀವನಚಕ್ರದಲ್ಲಿ ಎಂದು ಇಲ್ಲ ನಿಮಗೆ ಕೊನೆ
''ನೀವು ಬಿಟ್ಟು ಹೋದ ನೆನಪುಗಳಿಗೆ ಕೊಟ್ಟು ಹೋದ ಮೌಲ್ಯಗಳಿಗೆ ಬದುಕಿದ ರೀತಿಗೆ ಅದರೊಳಗಿದ್ದ ನೀತಿಗೆ, ಕನ್ನಡದ ಪ್ರೀತಿಗೆ ಸಾವಿಲ್ಲ. ನಿಮ್ಮನ್ನು ಅಭಿಮಾನಿಸುವಾಗ, ನೆನೆಸಿಕೊಂಡಾಗ ನಿಮ್ಮನ್ನು ತೆರೆಯಮೇಲೆ ನೋಡುವಾಗ ನಮ್ಮಲ್ಲಿ ನೀವು ಜೀವಂತವಾಗಿದ್ದೀರ. ಕಾಲಚಕ್ರದಲ್ಲಿ ಇಂದು ನಿಮ್ಮ ಸ್ಮರಣೆ, ಜೀವನಚಕ್ರದಲ್ಲಿ ಎಂದು ಇಲ್ಲ ನಿಮಗೆ ಕೊನೆ'' - ಸಂತೋಷ್ ಆನಂದ್ ರಾಮ್

ಎಂದೆಂದೂ ನೀವು ಕರುನಾಡ ಬಂಧು
''ಮರೆಯದ ನೆನಪನ್ನು ಎದೆಯಲ್ಲಿ ತಂದು, ಇಂದಿಗೆ 11 ವರ್ಷಗಳಾಯ್ತು, ನೀವಿಲ್ಲದೆ ನಾವು ನೊಂದು.. ಅಂದು, ಇಂದು, ಮುಂದು, ಎಂದೆಂದೂ ನೀವು ಕರುನಾಡ ಬಂಧು.. ನಿಮ್ಮ ಮರೆಯೋಲ್ಲ ಎಂದೂ.. We Miss all the Fun We Miss all the Joy We Miss u Dada'' - ರಘುರಾಮ್, ನಿರ್ದೇಶಕ

ವಿಷ್ಣು ಚಿರಾಯು
''ಸ್ನೇಹ ಪ್ರೀತಿಗೆ ಸಾಕಾರ ರೂಪವಾಗಿದ್ದ ನಮ್ಮ ವಿಷ್ಣುವರ್ಧನ್ ನಮ್ಮ ಕಣ್ಣ ಮುಂದೆ ಇರದೇ ಇರಬಹುದು. ಆದರೆ ನಮ್ಮ ನಿಶ್ಚಲ ಯೋಚನೆಗಳಲ್ಲಿ, ನಮ್ಮ ಚೈತನ್ಯದ ಯೋಜನೆಗಳಲ್ಲಿ, ನಮ್ಮ ಸಾಕ್ಷಿ ಪ್ರಜ್ಞೆಯಲ್ಲಿ ಮತ್ತು ಎಲ್ಲದಕ್ಕೂ ಹೆಚ್ಚಾಗಿ ನಮ್ಮೆಲ್ಲರ ಸ್ನೇಹದ ಸೇತುವೆಯಾಗಿ ಇನ್ನೂ ಜೀವಂತವಾಗಿದ್ದಾರೆ. #ವಿಷ್ಣು_ಚಿರಾಯು'' - ಸುಮಲತಾ, ಮಂಡ್ಯ ಸಂಸದೆ
Recommended Video

ನಮ್ಮೆಲ್ಲರ ಹೃದಯದಲ್ಲಿ ಎಂದೆಂದಿಗೂ ಅಮರ
''ಅಭಿನಯ ಭಾರ್ಗವ, ಕನ್ನಡ ಚಲನಚಿತ್ರರಂಗದ ಮೇರು ನಟ, ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು. ವಿಭಿನ್ನ ನಟನೆಯ ಮೂಲಕ ತೆರೆಯ ಮೇಲೆ ಮಿಂಚಿರುವ ಅವರ ಕಲಾ ಸಿರಿವಂತಿಕೆ ಹಾಗೂ ಶ್ರೇಷ್ಠ ವ್ಯಕ್ತಿತ್ವ ನಮ್ಮೆಲ್ಲರ ಹೃದಯದಲ್ಲಿ ಎಂದೆಂದಿಗೂ ಅಮರ.'' - ಬಿಸಿ ಪಾಟೀಲ್


Click it and Unblock the Notifications











