ತೆಲುಗಿಗೆ ಡಬ್ ಆಗುತ್ತಿದೆ ಪೂಜಾಗಾಂಧಿ ದಂಡುಪಾಳ್ಯ
ಕೊಲೆ, ದರೋಡೆ, ಅತ್ಯಾಚಾರ, ಕಳ್ಳತನಗಳ ಸುತ್ತ ಹೆಣೆದ ನೈಜಕತೆಯಾಧಾರಿತ 'ದಂಡುಪಾಳ್ಯ' ಚಿತ್ರ ತೆಲುಗು ಭಾಷೆಗೆ ಡಬ್ ಆಗಲಿದೆ. ಪೂಜಾಗಾಂಧಿ ಬೆತ್ತಲೆ ಬೆನ್ನಿನ ಕಾರಣ ಸಿನಿಮಾಗೆ ಸಾಕಷ್ಟು ಪ್ರಚಾರ ಸಿಕ್ಕಿತ್ತು ಹಾಗೆಯೇ ವಿವಾದಕ್ಕೂ ಈಡಾಗಿತ್ತು.
ಪೂಜಾಗಾಂಧಿ, ರಘುಮುಖರ್ಜಿ, ಪ್ರಿಯಾಂಕಾ ಕೊಠಾರಿ, ರವಿಕಾಳೆ, ಪೆಟ್ರೋಲ್ ಪ್ರಸನ್ನ, ಮುನಿ, ಯತಿರಾಜ್, ಮಕರಂದ್ ದೇಶಪಾಂಡೆ, ಕರಿಸುಬ್ಬು ಮುಂತಾದವರು ಅಭಿನಯದ ಈ ಚಿತ್ರ 25 ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ.
ಸದ್ಯಕ್ಕೆ ಈ ಚಿತ್ರದ ತೆಲುಗು ಡಬ್ಬಿಂಗ್ ಹೈದರಾಬಾದಿನಲ್ಲಿ ಭರದಿಂದ ಸಾಗುತ್ತಿದೆ. ತೆಲುಗು ಸೇರಿದಂತೆ ದಕ್ಷಿಣ ಭಾರತದ ಉಳಿದ ಭಾಷೆಗಳಿಗೂ ಡಬ್ ಮಾಡುವ ಇಂಗಿತವನ್ನು ಚಿತ್ರದ ನಿರ್ದೇಶಕ ಶ್ರೀನಿವಾಸರಾಜು ವ್ಯಕ್ತಪಡಿಸಿದ್ದಾರೆ.
ತಮ್ಮ ಮಾತೃಭಾಷೆ ತೆಲುಗಿಗೆ 'ದಂಡುಪಾಳ್ಯ' ಡಬ್ ಆಗುತ್ತಿರುವುದು ನಿಜಕ್ಕೂ ಸಂತಸ ತಂದಿದೆ ಎಂದಿದ್ದಾರೆ ಶ್ರೀನಿವಾಸರಾಜು. ತೆಲುಗು ದಂಡುಪಾಳ್ಯಕ್ಕೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂಬ ನಿರೀಕ್ಷೆ ನಿರ್ದೇಶಕರಿಗಿದೆ.
ಚಿತ್ರದಲ್ಲಿನ ಬಹುತೇಕ ಕಲಾವಿದರಾದ ರವಿಕಾಳೆ, ಮಕರಂದ್ ದೇಶಪಾಂಡೆ, ಪ್ರಿಯಾಂಕಾ ಕೊಠಾರಿ ಈಗಾಗಲೆ ತೆಲುಗು ಚಿತ್ರರಂಗಕ್ಕೆ ಪರಿಚಿತರು. ಹಾಗಾಗಿ 'ದಂಡುಪಾಳ್ಯ' ತೆಲುಗು ಆವೃತ್ತಿಯನ್ನೂ ಪ್ರೇಕ್ಷಕರು ಆದರಿಸುತ್ತಾರೆ ಎಂಬ ವಿಶ್ವಾಸವಿದೆ.
ಈಗಾಗಲೆ ತೆಲುಗು ಚಿತ್ರರಂಗಕ್ಕೆ 'ಬುದ್ಧಿವಂತ' ಚಿತ್ರದ ಮೂಲಕ ಪೂಜಾಗಾಂಧಿ ಪರಿಚಿತರಾಗಿದ್ದಾರೆ. ಬುದ್ಧಿವಂತ ಚಿತ್ರ ಬುದ್ಧಿವಂತುಡು ಎಂದು ತೆಲುಗಿಗೆ ಡಬ್ ಆಗಿತ್ತು. ತೆಲುಗಿನ 'ಜೈ ಸಾಂಬಶಿವ' ಎಂಬ ಚಿತ್ರದಲ್ಲಿ ಅರ್ಜುನ್ ಸರ್ಜಾಗೆ ಜೊತೆ ಪೂಜಾಗಾಂಧಿ ಅಭಿನಯಿಸಿದ್ದಾರೆ.
ಅರ್ಜುನ್ ಜನ್ಯಾ ಸಂಗೀತ ನಿರ್ದೇಶನ, ರಾಮ್ ಪ್ರಸಾದ್ ಅವರ ಛಾಯಾಗ್ರಹಣ ಇರುವ ಈ ಚಿತ್ರದ ನಿರ್ಮಾಪಕರು ಗಿರೀಶ್ ಮತ್ತು ಪ್ರಶಾಂತ್. 'ದಂಡುಪಾಳ್ಯ' ಯಶಸ್ಸಿನ ಸಂತಸದಲ್ಲಿರುವ ಚಿತ್ರದ ನಿರ್ದೇಶಕ ಶ್ರೀನಿವಾಸರಾಜು ಅವರು ಮತ್ತೆ ಪೆನ್ನು ಪೇಪರ್ ಹಿಡಿದು ಕೂತಿದ್ದಾರೆ. ಈ ಬಾರಿಯೂ ಅವರು 'ದಂಡುಪಾಳ್ಯ' ಗ್ಯಾಂಗ್ ಮತ್ತೊಂದು ಮುಖದ ಮೇಲೆ ಬೆಳಕು ಬೀರಲಿದ್ದಾರೆ. ಅರ್ಥಾತ್ 'ದಂಡುಪಾಳ್ಯ ಭಾಗ 2' ಮಾಡುವ ಸಿದ್ಧತೆಯಲ್ಲಿದ್ದಾರೆ. (ಏಜೆನ್ಸೀಸ್)


Click it and Unblock the Notifications











