ತೆಲುಗು ತೆರೆಗೆ ಪೂಜಾಗಾಂಧಿ ದಂಡುಪಾಳ್ಯ ಚಿತ್ರ
ಬಾಕ್ಸ್ ಆಫೀಸಲ್ಲಿ ಭಾರಿ ಸದ್ದು ಮಾಡಿದ ಚಿತ್ರ 'ದಂಡುಪಾಳ್ಯ'. ತಳಕಚ್ಚಿದ್ದ ತಾರೆ ಪೂಜಾಗಾಂಧಿ ಅವರ ವೃತ್ತಿಜೀವನಕ್ಕೆ ಹೊಸ ತಿರುವು ನೀಡಿದ ಚಿತ್ರವೂ ಹೌದು. ಈಗಿದು ತೆಲುಗು ಭಾಷೆಗೂ ಡಬ್ ಆಗಿದ್ದು ಇನ್ನೇನು ಬಿಡುಗಡೆಗೆ ಸಿದ್ಧವಾಗಿದೆ.
ಈ ಚಿತ್ರ ತೆಲುಗು ಭಾಷೆಗಷ್ಟೇ ಅಲ್ಲದೆ ತಮಿಳು, ಮಲಯಾಳಂ ಹಾಗೂ ಭೋಜ್ ಪುರಿ ಭಾಷೆಗಳಿಗೂ ಡಬ್ ಆಗಲಿದೆ ಎನ್ನುತ್ತಾರೆ ಚಿತ್ರದ ನಿರ್ದೇಶಕ ಶ್ರೀನಿವಾಸರಾಜು. ಈ ಎಲ್ಲಾ ಹಿನ್ನೆಲೆಯಲ್ಲಿ ಅವರು 'ದಂಡುಪಾಳ್ಯ ಭಾಗ 2'ರ ಸಿದ್ಧತೆಯಲ್ಲೂ ಮುಳುಗಿದ್ದಾರೆ.
'ದಂಡುಪಾಳ್ಯ' ಗ್ಯಾಂಗ್ ನ ಹಿಂದಿರುವ ಶಕ್ತಿಗಳು, ಅವರ ಮತ್ತಷ್ಟು ಕ್ರೌರ್ಯ, ಅದರ ಹಿನ್ನೆಲೆ ಎಲ್ಲವುಗಳಿಗೂ ಉತ್ತರವಾಗಿ ಭಾಗ 2 ಮೂಡಿಬರಲಿದೆ. ಹತ್ಯೆಗಳ ಹಿಂದೆ ಹಲವಾರು ರಾಜಕಾರಣಿಗಳು, ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದರು. ಚಿತ್ರದ ಎರಡನೇ ಭಾಗದಲ್ಲಿ ಅವರ ಮುಖಗಳನ್ನು ಅನಾವರಣ ಮಾಡುವುದಾಗಿ ಶ್ರೀನಿವಾಸರಾಜು ತಿಳಿಸಿದ್ದಾರೆ.
ಸತ್ಯಘಟನೆ ಆಧಾರಿತ ದಂಡುಪಾಳ್ಯ ಚಿತ್ರ ಬಾಕ್ಸಾಫೀಸಲ್ಲಿ ಎರಡೇ ವಾರದಲ್ಲಿ ಸರಿಸುಮಾರು ರು.7 ಕೋಟಿ ಕಲೆಕ್ಷನ್ ಮಾಡಿರುವುದಾಗಿ ಶ್ರೀನಿವಾಸರಾಜು ಹೇಳುತ್ತಾರೆ. ಚಿತ್ರದಲ್ಲಿ ಪೂಜಾಗಾಂಧಿ ಅವರ ಅರೆ ಬೆತ್ತಲೆ ಪ್ರದರ್ಶನ ವಿವಾದಕ್ಕೂ ಕಾರಣವಾಗಿತ್ತು.
ಚಿತ್ರಕ್ಕೆ ಸಾಕಷ್ಟು ವಿರೋಧಗಳು ವ್ಯಕ್ತವಾದರೂ ಚಿತ್ರಕಥೆಯಲ್ಲಿ ಧಂ ಇದ್ದ ಕಾರಣ ಗಟ್ಟಿಯಾಗಿ ಕಚ್ಚಿಕೊಂಡಿತು. ಈಗ ತಾವು ಇದೇ ಚಿತ್ರವನ್ನು ಹಿಂದಿ ಭಾಷೆಗೂ ರೀಮೇಕ್ ಮಾಡಲಿರುವುದಾಗಿ ಶ್ರೀನಿವಾಸರಾಜು ತಿಳಿಸಿದ್ದಾರೆ. ದಂಡುಪಾಳ್ಯ ಚಿತ್ರ ವಿಮರ್ಶೆ ಓದಿ
ಪೂಜಾಗಾಂಧಿ, ರಘುಮುಖರ್ಜಿ, ಪ್ರಿಯಾಂಕಾ ಕೊಠಾರಿ, ರವಿಕಾಳೆ, ಪೆಟ್ರೋಲ್ ಪ್ರಸನ್ನ, ಮುನಿ, ಯತಿರಾಜ್, ಮಕರಂದ್ ದೇಶಪಾಂಡೆ, ಕರಿಸುಬ್ಬು ಮುಂತಾದವರು ಅಭಿನಯದ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದರು.
ಈಗಾಗಲೆ ತೆಲುಗು ಚಿತ್ರರಂಗಕ್ಕೆ 'ಬುದ್ಧಿವಂತ' ಚಿತ್ರದ ಮೂಲಕ ಪೂಜಾಗಾಂಧಿ ಪರಿಚಿತರಾಗಿದ್ದಾರೆ. ಬುದ್ಧಿವಂತ ಚಿತ್ರ ಬುದ್ಧಿವಂತುಡು ಎಂದು ತೆಲುಗಿಗೆ ಡಬ್ ಆಗಿತ್ತು. ತೆಲುಗಿನ 'ಜೈ ಸಾಂಬಶಿವ' ಎಂಬ ಚಿತ್ರದಲ್ಲಿ ಅರ್ಜುನ್ ಸರ್ಜಾಗೆ ಜೊತೆ ಪೂಜಾಗಾಂಧಿ ಅಭಿನಯಿಸಿದ್ದಾರೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











