ಪೂಜಾಗಾಂಧಿ ಕೈಗೆ ಪಿಸ್ತೂಲು ಕೊಟ್ಟ ದಾವೂದ್!
ಈಗಷ್ಟೇ ರಿಯಲ್ ಎಸ್ಟೇಟ್ ಕುಳ ಆನಂದಗೌಡ ಜೊತೆಗಿನ ಮದುವೆ ಸಂಬಂಧವನ್ನು ಮುರಿದುಕೊಂಡು ಭಾರಿ ಸುದ್ದಿಗೆ ಕಾರಣವಾಗಿದ್ದಾರೆ ನಟಿ ಪೂಜಾಗಾಂಧಿ. ನಮ್ಮಿಬ್ಬರ ನಡುವೆ ಏನಿಲ್ಲಾ ಏನಿಲ್ಲಾ...ಆದರೆ ಅವರ ತಾಯಿಯದ್ದೇ ಎಲ್ಲಾ ಕಿತಾಪತಿ ಎಂದು ಆನಂದಗೌಡ ಆರೋಪಿಸಿದ್ದಾರೆ.
ಇರಲಿ ಬಿಡಿ ಈಗ ಆ ವಿಚಾರ ಪಕ್ಕಕ್ಕಿಟ್ಟು ಪೂಜಾಗಾಂಧಿ ಪಿಸ್ತೂಲ್ ಕಡೆಗೆ ಕೊಂಚ ಗಮನಹರಿಸೋಣ. ಆನಂದಗೌಡ ಅವರಿಗೇನಾದರೂ ಪೂಜಾ ಪಿಸ್ತೂಲ್ ತೋರಿಸಿ ಹೆದರಿಸಿದರೇ? ಅವರ ಮದುವೆ ಮುರಿದುಬೀಳಲು ಇದೇ ಕಾರಣವೇ...ಹಾಗೆ ಹೀಗೆ ಎಂಬ ಕಲ್ಪನೆಗಳಿಗೆ ಫುಲ್ ಸ್ಟಾಪ್ ಹಾಕಿ ಮುಂದೆ ಓದಿ.
ಪೂಜಾಗಾಂಧಿ ಅವರು ಈಗಾಗಲೆ ಲವ್, ಫ್ಯಾಮಿಲಿ, ಸೆಂಟಿಮೆಂಟು ಮಣ್ಣು ಮಸಿ ಎಂಬ ಸಿನಿಮಾಗಳಿಂದ ಹನ್ನೆರಡು ಮೈಲಿ ದೂರ ಸರಿದಿರುವುದು ಗೊತ್ತೇ ಇದೆ. ಈಗೇನಿದ್ದರೂ ಅವರು 'ದಂಡುಪಾಳ್ಯ'ದಂತಹ ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ. ಈಗ ಅಂಥಹದ್ದೇ ಮತ್ತೊಂದು ಚಿತ್ರಕ್ಕೂ ಸಹಿಹಾಕಿದ್ದಾರೆ. ಚಿತ್ರದ ಹೆಸರು 'ಹಂತಕಿ'.
ಹೆಸರೇ ಹೇಳುವಂತೆ ಇದೊಂದು ಮರ್ಡರ್ ಮಿಸ್ಟರಿ ಚಿತ್ರ. ಈ ಬಾರಿ ಪೂಜಾಗಾಂಧಿ ಕೈಗೆ ಪಿಸ್ತೂಲು ತೆಗೆದುಕೊಂಡಿದ್ದಾರೆ. ಚಿತ್ರದಲ್ಲಿ ಯಾರ ಎದೆಗೆ ಗುಂಡು ಹೊಡೆಯುತ್ತಾರೋ ಏನೋ. ಇಷ್ಟಕ್ಕೂ ಪೂಜಾಗಾಂಧಿ ಕೈಗೆ ಪಿಸ್ತೂಲು ಕೊಟ್ಟವರು ದಾವೂದ್. ಗಾಬರಿಯಾಗಬೇಡಿ ಇವರು ಭೂಗತದೊರೆ ಅಲ್ಲ. ಚಿತ್ರದ ನಿರ್ದೇಶಕ ಸೈಯದ್ ದಾವೂದ್.
ಈ ಹಿಂದೆ ಇವರು 'ಸಂಚು' (1987) ಹಾಗೂ 'ಗಂಡಿನ ಬಲ ಹೆಣ್ಣಿನ ಛಲ' ಎಂಬೆರಡು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಇಷ್ಟು ದಿನ ಭೂಗತರಾಗಿದ್ದ ಇವರು ಈಗ ಮತ್ತೆ ಚಿತ್ರ ನಿರ್ದೇಶನಕ್ಕೆ ಮರಳಿದ್ದಾರೆ. ಡೈಲಾಗ್ ಕಿಂಗ್ ಸಾಯಿಕುಮಾರ್ ಚಿತ್ರದಲ್ಲಿ ಪ್ರಮುಖ ಪಾತ್ರ ಪೋಷಿಸುತ್ತಿದ್ದಾರೆ. ಹಿಂದಿಯ 'ಜಬ್ ವಿ ಮೆಟ್' ಚಿತ್ರದಲ್ಲಿ ಅಭಿನಯಿಸಿದ್ದ ತರುಣ್ ಅರೋರಾ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಜಿತಿನ್ ಶಾಮ್ ಅವರ ಸಂಗೀತ, ಸಿ ನಾರಾಯಣ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಬಹುತೇಕ ಚಿತ್ರೀಕರಣ ಕರಾವಳಿ ಪ್ರದೇಶಗಳಲ್ಲೇ ನಡೆಯಲಿದೆ ಎನ್ನುತ್ತಾರೆ ಚಿತ್ರದ ನಿರ್ಮಾಪಕರೂ ಆಗಿರುವ ದಾವೂದ್. ಅಂದಹಾಗೆ ಚಿತ್ರದಲ್ಲಿ ಪೂಜಾಗಾಂಧಿ ಅವರದು ಎರಡು ಭಿನ್ನ ಶೇಡ್ ಗಳಿರುವ ಪಾತ್ರವಂತೆ.
ಸಿನಿಮಾನೇ ಬೇರೆ ರಾಜಕೀಯವೇ ಬೇರೆ. ಎರಡನ್ನೂ ಒಟ್ಟಿಗೆ ಬೆರೆಸಲು ಸಾಧ್ಯವಿಲ್ಲ. ವಿಜಯಶಾಂತಿ, ಹೇಮಾ ಮಾಲಿನಿ ಅವರು ಈಗಾಗಲೆ ಈ ಎರಡೂ ಕ್ಷೇತ್ರಗಳಲ್ಲಿ ತಮ್ಮದೇ ಆದಂತಹ ಛಾಪನ್ನು ಮೂಡಿಸಿದ್ದಾರೆ. ತಾವೂ ಅಷ್ಟೇ ಎಂದಿದ್ದಾರೆ ಪೂಜಾಗಾಂಧಿ. (ಒನ್ಇಂಡಿಯಾ ಕನ್ನಡ)


Click it and Unblock the Notifications












