'ಅಭಿನೇತ್ರಿ'ಯಲ್ಲಿ ಹನ್ನೊಂದು ಡೈಲಾಗ್ಸ್ ಮ್ಯೂಟ್
ಪೂಜಾಗಾಂಧಿ ನಿರ್ಮಾಣದ ಚೊಚ್ಚಲ 'ಅಭಿನೇತ್ರಿ' ಚಿತ್ರ ನಾನಾ ಕಾರಣಗಳಿಗಾಗಿ ಸ್ಯಾಂಡಲ್ ವುಡ್ ನಲ್ಲಿ ಕುತೂಹಲ ಮೂಡಿಸಿದೆ. ಇತ್ತೀಚೆಗೆ ಈ ಚಿತ್ರ ಸೆನ್ಸಾರ್ ಮಂಡಳಿ ಮುಂದೆ ಬಂದು ಯು/ಎ ಸರ್ಟಿಫಿಕೇಟ್ ನೊಂದಿಗೆ ಬಿಡುಗಡೆಗೆ ಸಿದ್ಧವಾಗಿದೆ.
ವಿಶೇಷ ಎಂದರೆ ಸತೀಶ್ ಪ್ರಧಾನ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿನ ಹನ್ನೊಂದು ಡೈಲಾಗ್ ಗಳನ್ನು ಮ್ಯೂಟ್ ಮಾಡಲು ಸೆನ್ಸಾರ್ ಮಂಡಳಿ ಸೂಚಿಸಿರುವುದು. ಚಿತ್ರದ ಎರಡು ದೃಶ್ಯಗಳಿಗೂ ಸೆನ್ಸಾರ್ ಕತ್ತರಿ ಪ್ರಯೋಗ ಮಾಡಿದೆ. [ಕಾನೂನು ಸಮರದಲ್ಲಿ ಗೆದ್ದ ಅಭಿನೇತ್ರಿ]
ಸಾಲದ್ದಕ್ಕೆ "ಇದು ಕಾಲ್ಪನಿಕ ಕಥೆಯಾಗಿದ್ದು ಯಾರನ್ನೂ ಉದ್ದೇಶಿಸಿದ್ದಲ್ಲ" ಎಂದು ಟೈಟಲ್ ಕಾರ್ಡ್ ನಲ್ಲಿ ತೋರಿಸುವಂತೆಯೂ ಸೆನ್ಸಾರ್ ಸೂಚಿಸಿದೆ. ಅಲ್ಲಿಗೆ ಚಿತ್ರದಲ್ಲಿ ಭಾರಿ ವಿವಾದಾತ್ಮಕ ಅಂಶಗಳಿರುವುದು ಮೇಲ್ಮೋಟಕ್ಕೆ ಗೊತ್ತಾಗುತ್ತದೆ.ಚಿತ್ರ ಸೆಟ್ಟೇರಿದಾಗಿನಿಂದಲೂ ಒಂದಲ್ಲ ಒಂದು ಸುದ್ದಿಯನ್ನು ಅಭಿನೇತ್ರಿ ಚಿತ್ರ ಮಾಡುತ್ತಲೇ ಬಂದಿದೆ. ಇದು ಮಿನುಗುತಾರೆ ಕಲ್ಪನಾ ಅವರ ಜೀವನಕಥೆ ಆಧಾರಿತ ಎಂದೇ ಭಾವಿಸಲಾಗಿತ್ತು. ಆದರೆ ಪೂಜಾಗಾಂಧಿ ಅವರು ಇದೊಂದು ಎಪ್ಪತ್ತು ಎಂಬತ್ತರ ದಶಕದ ತಾರೆಯೊಬ್ಬರ ಜೀವನಕಥೆ ಎಂದು ಹೇಳುವ ಮೂಲಕ ಎಲ್ಲಾ ಗಾಸಿಪ್ ಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದರು.
ಬಳಿಕ ಇನ್ನೊಂದು ವಿವಾದವೂ ಅಭಿನೇತ್ರಿ ಚಿತ್ರಕ್ಕೆ ಎದುರಾಯಿತು. ಕೃತಿಚೌರ್ಯ ಆರೋಪಕ್ಕೆ 'ಅಭಿನೇತ್ರಿ' ಸಿಲುಕಿತು. ಭಾಗ್ಯ ಕೃಷ್ಣಮೂರ್ತಿ ಅವರ 'ಅಭಿನೇತ್ರಿಯ ಅಂತರಂಗ' ಕಾದಂಬರಿಯ ಕಥೆಯನ್ನು ಕದ್ದ ಆರೋಪಕ್ಕೆ ಗುರಿಯಾಯಿತು. ಈ ಚಿತ್ರಕ್ಕೂ ಕಾದಂಬರಿಗೂ ಯಾವುದೇ ಸಂಬಂಧವಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡುವ ಮೂಲಕ ಪೂಜಾಗಾಂಧಿ ಕಾನೂನು ಸಮರದಲ್ಲಿ ಗೆದ್ದು ನಿರಾಳರಾದರು.
ಆರಂಭದಿಂದಲೂ ವಿಭಿನ್ನ ಪೋಸ್ಟರ್ ಗಳು, ಸ್ಟಿಲ್ಸ್ ಮೂಲಕ ಸುದ್ದಿ ಮಾಡುತ್ತಿರುವ ಚಿತ್ರ ಅಭಿನೇತ್ರಿ. ಪೂಜಾಗಾಂಧಿ ಅವರು ಮಿನುಗು ತಾರೆ ಕಲ್ಪನಾ ಅವರ ಗೆಟಪ್ ನಲ್ಲಿರುವ ಕಾರಣ ಇದು ಕಲ್ಪನಾ ಅವರದ್ದೇ ಜೀವನ ಕಥೆ ಎಂದು ಹೇಳಲಾಗುತ್ತಿದೆ.
ಆದರೆ ಪೂಜಾಗಾಂಧಿ ಮಾತ್ರ ಇದು ಮಿನುಗು ತಾರೆ ಕಲ್ಪನಾ ಅಥವಾ ಮಂಜುಳಾ ಅವರ ಜೀವನ ಕಥೆಯಲ್ಲಾ ಎಂದಿದ್ದಾರೆ. ಪೂಜಾ ಇಲ್ಲಿ 70-80ರ ದಶಕದ ನಾಯಕಿಯರನ್ನ ಪ್ರತಿನಿಧಿಸೋ ಪಾತ್ರ ಮಾಡ್ತಿದ್ದಾರೆ. ಇಲ್ಲಿ ಪೂಜಾಗಾಂಧಿ 20 ಕ್ಕೂ ಹೆಚ್ಚು ಗೆಟಪ್ ಗಳಲ್ಲಿ ಮಿಂಚ್ತಾರೆ. ಸತೀಶ್ ಪ್ರಧಾನ್ ನಿರ್ದೇಶಿಸುತ್ತಿರುವ ಈ ಚಿತ್ರದ ಪಾತ್ರವರ್ಗದಲ್ಲಿ ಪೂಜಾಗಾಂಧಿ ಜೊತೆ ಮಕರಂದ್ ದೇಶ್ ಪಾಂಡೆ, ರವಿಶಂಕರ್ ಇದ್ದಾರೆ. (ಫಿಲ್ಮಿಬೀಟ್ ಕನ್ನಡ)


Click it and Unblock the Notifications












