ಪೂಜಾ ಗಾಂಧಿಯ 'ಅಭಿನೇತ್ರಿ' ಚಿತ್ರದ ಪ್ರಿವ್ಯೂ
ತಿಂಗಳುಗಳ ಹಿಂದೆಯೇ ತೆರೆಗೆ ಬರಬೇಕಿದ್ದ 'ಅಭಿನೇತ್ರಿ' ಚಿತ್ರ ಇಂದು ರಾಜ್ಯದಾದ್ಯಂತ ರಿಲೀಸ್ ಆಗುತ್ತಿದೆ. ಹಲವಾರು ವಿವಾದಗಳಿಂದ ಗಾಂಧಿನಗರದ ತುಂಬೆಲ್ಲಾ ಸದ್ದು-ಸುದ್ದಿ ಮಾಡಿದ್ದ 'ಅಭಿನೇತ್ರಿ' ಸಿನಿಮಾ ಬೆಳ್ಳಿತೆರೆಗೆ ಅಪ್ಪಳಿಸುತ್ತಿದೆ.
ಬಿಡುಗಡೆ ಆದ್ಮೇಲೆ 'ಅಭಿನೇತ್ರಿ' ಚಿತ್ರವನ್ನ ನೋಡಿದವರು ಮತ್ತಿನ್ಯಾವ ಕ್ಯಾತೆ ತೆಗಿಯುತ್ತಾರೋ ಗೊತ್ತಿಲ್ಲ. ಆದರೆ, 'ಅಭಿನೇತ್ರಿ' ಚಿತ್ರವನ್ನ ನೀವು ನೋಡುವ ಮುನ್ನ ಚಿತ್ರದ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ನಿಮಗೆ ನೀಡುತ್ತಿದ್ದೇವೆ. ಮುಂದೆ ಓದಿ.........

ಬಹುದಿನಗಳ ನಂತ್ರ ತೆರೆಮೇಲೆ ಪೂಜಾ ಗಾಂಧಿ
ಬೆಳ್ಳಿತೆರೆ ಮೇಲೆ ಪೂಜಾ ಗಾಂಧಿ ಮಿಂಚಿ ಬಹಳ ದಿನವಾಗಿದೆ. 'ದಂಡುಪಾಳ್ಯ' ಸಿನಿಮಾ ಆದ್ಮೇಲೆ ಐಟಂ ಸಾಂಗ್ ನಲ್ಲಿ ಮಾತ್ರ ಕಾಣಿಸಿಕೊಂಡಿದ್ದ ಪೂಜಾ ಗಾಂಧಿಯ 'ಕಲ್ಯಾಣಮಸ್ತು' ಸಿನಿಮಾ ಬಂದಿದ್ದೂ ಗೊತ್ತಾಗಲಿಲ್ಲ. ಹೋಗಿದ್ದೂ ಗೊತ್ತಾಗಲಿಲ್ಲ! ಸೋಲಿನ ಸುಳಿಯಲ್ಲಿ ಸಿಲುಕಿದ ಪೂಜಾ ಗೆ 'ಅಭಿನೇತ್ರಿ' ಚಿತ್ರ ಕೈಹಿಡಿಯಲೇ ಬೇಕು. ['ಅಭಿನೇತ್ರಿ' ಪೂಜಾಗಾಂಧಿಯ ಪೂಜಾಫಲ ಫಲಿಸೀತೆ?]

ನಿರ್ಮಾಪಕಿ ಪಟ್ಟಕ್ಕೇರಿದ 'ಪೂಜಾ ಗಾಂಧಿ'
'ಅಭಿನೇತ್ರಿ' ಚಿತ್ರದ ಮೂಲಕೆ ತೆರೆ ಮೇಲೆ ಮತ್ತು ತೆರೆ ಹಿಂದೆ ತಮ್ಮ ಸಾಮರ್ಥ್ಯವನ್ನ ಸಾಬೀತು ಪಡಿಸುವುದಕ್ಕೆ ಹೊರಟಿದ್ದಾರೆ ಪೂಜಾ ಮೇಡಂ. ಮೊದಲ ಬಾರಿ ನಿರ್ಮಾಣದ ಜವಾಬ್ದಾರಿಯನ್ನ ಹೊತ್ತಿರುವ ಪೂಜಾ ಗಾಂಧಿ, ಹಾಗೂ ಹೀಗೂ 'ಅಭಿನೇತ್ರಿ' ಚಿತ್ರವನ್ನ ಬೆಳ್ಳಿತೆರೆಗೆ ತರುತ್ತಿದ್ದಾರೆ.

ಕಲ್ಪನಾ ಜೀವನಾಧಾರಿತ ಚಿತ್ರ 'ಅಭಿನೇತ್ರಿ'
'ಅಭಿನೇತ್ರಿ' ಟೈಟಲ್, ಚಿತ್ರದ ಪೋಸ್ಟರ್ ಗಳು, ಪೂಜಾ ಗಾಂಧಿ ಗೆಟಪ್...ಇದನ್ನೆಲ್ಲಾ ನೋಡಿದರೆ, ಚಿತ್ರ ಮಿನುಗುತಾರೆ ಕಲ್ಪನಾ ಜೀವನಾಧಾರಿತ ಚಿತ್ರ ಅಂತ ಮೇಲ್ನೋಟಕ್ಕೆ ಸಾಬೀತಾಗುತ್ತದೆ. ಆದ್ರೆ, ಇದನ್ನ ಮೊದಮೊದಲು ನಿರಾಕರಿಸಿದ್ದ ಪೂಜಾ, ಕೃತಿ ಚೌರ್ಯ ಆರೋಪದಡಿ ಕೋರ್ಟ್ ಮೆಟ್ಟಿಲೇರಿದಾಗ, 'ಅಭಿನೇತ್ರಿ' ಕಲ್ಪನಾ ಕಥೆ ಅಂತಲೇ ಒಪ್ಪಿಕೊಂಡರು. ['ಅಭಿನೇತ್ರಿ' ಪೂಜಾಗಾಂಧಿ ಕತ್ತಲ್ಲಿ ಕಲ್ಪನಾರ ಕಪ್ಪು ಮಚ್ಚೆ]

ಪುಟ್ಟಣ್ಣ-ಕಲ್ಪನಾ ಬಗ್ಗೆ ಅವಹೇಳನ?
'ಅಭಿನೇತ್ರಿ' ಚಿತ್ರದಲ್ಲಿ ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ಮತ್ತು ಕಲ್ಪನಾರನ್ನ ಅವಹೇಳನಕಾರಿಯಾಗಿ ಚಿತ್ರೀಕರಿಸಲಾಗಿದೆ ಅಂತ ಪುಟ್ಟಣ್ಣ ಕಣಗಾಲ್ ಕುಟುಂಬ ಕೂಡ ಆಕ್ಷೇಪ ವ್ಯಕ್ತಪಡಿಸಿತ್ತು. ಈ ಹಿಂದೆ ವಾಣಿಜ್ಯ ಮಂಡಳಿ ಮೆಟ್ಟಿಲೇರಿ ದೂರು ನೀಡಿದ್ದ ಪುಟ್ಟಣ್ಣ ಕಣಗಾಲ್ ಫ್ಯಾಮಿಲಿ, 'ಅಭಿನೇತ್ರಿ' ಚಿತ್ರವನ್ನ ನೋಡಿ ಏನು ಹೇಳುತ್ತಾರೋ..? [ಕಲ್ಪನಾ-ಪುಟ್ಟಣ್ಣ ಬಗ್ಗೆ 'ಅಭಿನೇತ್ರಿ' ಚಿತ್ರದಲ್ಲೇನಿದೆ..?]

ಚಿತ್ರದಲ್ಲಿದೆ ಹಸಿಬಿಸಿ ದೃಶ್ಯ
'ಅಭಿನೇತ್ರಿ' ಚಿತ್ರದಲ್ಲಿ ಪೂಜಾ ಗಾಂಧಿ ಮತ್ತು ರವಿಶಂಕರ್ ಇರುವ ಹಸಿಬಿಸಿ ಪೋಟೋಗಳು ಜಾಲತಾಣಗಳಲ್ಲಿ ಬಿಸಿದೋಸೆಯಂತೆ ಸೇಲ್ ಆಗುತ್ತಿದೆ. ಅಲ್ಲದೇ, ಚಿತ್ರದಲ್ಲಿ ಗರಮಾಗರಂ ದೃಶ್ಯಗಳು ಹೇರಳವಾಗಿವೆ ಅನ್ನುವ ಮಾಹಿತಿ ಕೂಡ ಇದೆ. [ಅರೆಬರೆ ಬೆತ್ತಲಾದ 'ಅಭಿನೇತ್ರಿ' ಪೂಜಾಗಾಂಧಿ]

ಡಾ.ರಾಜ್ ಪಾತ್ರದಲ್ಲಿ ಶ್ರೀನಗರ ಕಿಟ್ಟಿ..?
ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವ ಡೈಮಂಡ್ ಸ್ಟಾರ್ ಶ್ರೀನಗರ ಕಿಟ್ಟಿ, ಎವರ್ ಗ್ರೀನ್ ಹಿಟ್ 'ತಂನಂ ತಂನಂ' ಹಾಡಲ್ಲಿ ಪೂಜಾ ಗಾಂಧಿ ಜೊತೆ ಸ್ಟೆಪ್ ಹಾಕಿದ್ದಾರೆ. ಹಾಗಾದ್ರೆ, ಕಿಟ್ಟಿ ರಾಜಣ್ಣನ ಪಾತ್ರ ನಿರ್ವಹಿಸುತ್ತಿದ್ದಾರಾ..? ಚಿತ್ರ ನೋಡಿದ ಮೇಲೆ ಈ ಪ್ರಶ್ನೆಗೆ ಉತ್ತರ ಸಿಗುತ್ತದೆ.

ಮನೋ ಮೂರ್ತಿ ಸಂಗೀತ
ಕೊಂಚ ಗ್ಯಾಪ್ ನ ನಂತ್ರ ಮನೋ ಮೂರ್ತಿ ಮರಳಿ ಸ್ಯಾಂಡಲ್ ವುಡ್ ಕಡೆ ಮುಖ ಮಾಡಿರುವುದು 'ಅಭಿನೇತ್ರಿ' ಚಿತ್ರದಿಂದಲೇ. 'ತಂನಂ ತಂನಂ' ಹಾಡನ್ನ ರೀಮಿಕ್ಸ್ ಮಾಡುವುದರ ಜೊತೆಗೆ 'ಅಭಿನೇತ್ರಿ' ಚಿತ್ರಕ್ಕೆ ರೆಟ್ರೋ ಸ್ಟೈಲ್ ನಲ್ಲಿ ಮಸ್ತ್ ಮಸ್ತ್ ಮ್ಯೂಸಿಕ್ ನೀಡಿದ್ದಾರೆ.

ನಿರ್ದೇಶಕ ಸತೀಶ್ ಪ್ರಧಾನ್ ಗೆ ಚೊಚ್ಚಲ ಚಿತ್ರ
ಅನೇಕ ಕನ್ನಡ ಚಿತ್ರಗಳಿಗೆ ಸಹಾಯಕ ನಿರ್ದೇಶಕನಾಗಿದ್ದ ಸತೀಶ್ ಪ್ರಧಾನ್, ಮೊದಲ ಬಾರಿಗೆ ಆಕ್ಷನ್ ಕಟ್ ಹೇಳಿರುವ ಚಿತ್ರ 'ಅಭಿನೇತ್ರಿ'. ಮೊದಲ ಪ್ರಯತ್ನದಲ್ಲಿ ವಿವಾದಕ್ಕೆ ಗುರಿಯಾಗಿರುವ ಸತೀಶ್ ಹಣೆಬರಹ 'ಅಭಿನೇತ್ರಿ' ಕೃಪೆಯಿಂದ ನಿರ್ಧಾರವಾಗಲಿದೆ.

ಚಿತ್ರದಲ್ಲಿದೆ ದೊಡ್ಡ ತಾರಾಬಳಗ
60-70 ರ ದಶಕದ ನಾಯಕ ನಟಿಯಾಗಿ ಪೂಜಾ ಗಾಂಧಿ ಕಾಣಿಸಿಕೊಂಡಿದ್ದರೆ, ಖ್ಯಾತ ನಿರ್ದೇಶಕನ ಪಾತ್ರದಲ್ಲಿ ಅತುಲ್ ಕುಲಕರ್ಣಿ, ನಾಟಕದ ಕಂಪನಿ ಮಾಲೀಕನಾಗಿ ರವಿಶಂಕರ್, ಅಚ್ಯುತ್ ಕುಮಾರ್ ಸೇರಿದಂತೆ ಚಿತ್ರದಲ್ಲಿ ದೊಡ್ಡ ತಾರಾಬಳಗವಿದೆ.

ಪೂಜಾ ಗಾಂಧಿಗಿದು ಲಾಸ್ಟ್ ಚಾನ್ಸ್..!
ಸತತ ಸೋಲಿನ ಸುಳಿಯಲ್ಲೇ ಸಿಲುಕಿರುವ ಪೂಜಾ ಗಾಂಧಿ, ಮರಳಿ ಗಾಂಧಿನಗರದಲ್ಲಿ ಬೇಡಿಕೆ ಸೃಷ್ಟಿಸಿಕೊಳ್ಳಬೇಕು ಅಂದ್ರೆ 'ಅಭಿನೇತ್ರಿ' ಮುಖಾಂತರ ಗೆಲುವು ಅನಿವಾರ್ಯ. ಬೂದಿ ಮುಚ್ಚಿದ ಕೆಂಡದಂತೆ ವಿವಾದಗಳ ಸುಳಿಯಲ್ಲೇ ರಿಲೀಸ್ ಆಗುತ್ತಿರುವ 'ಅಭಿನೇತ್ರಿ'ಯಿಂದ 'ಪೂಜಾ' ಫಲ ಲಭಿಸುತ್ತಾ? ನೋಡೋಣ...['ಅಭಿನೇತ್ರಿ'ಯಲ್ಲಿ ನನ್ನ ಕಥೆಯೂ ಇದೆ - ಪೂಜಾಗಾಂಧಿ]


Click it and Unblock the Notifications











