ಪುನೀತ್ ರಾಜ್ಕುಮಾರ್ ಬಗ್ಗೆ ಪ್ರಭುದೇವಾ ಹೇಳಿದ್ದು ಹೀಗೆ
ನಟ ಪ್ರಭುದೇವಾ ಮತ್ತು ಪುನೀತ್ ರಾಜ್ಕುಮಾರ್ ಜೊತೆಯಾಗಿರುವ ಸುದ್ದಿ ಅಭಿಮಾನಿಗಳಿಗೆ ಸಖತ್ ಕ್ರೇಜ್ ಹುಟ್ಟಿಸಿದೆ. ಪುನೀತ್ ಅತ್ಯದ್ಭುತ ಡ್ಯಾನ್ಸರ್, ಪ್ರಭುದೇವಾ ಭಾರತೀಯ ಸಿನಿಮಾದ ಡ್ಯಾನ್ಸ್ ಗುರು ಎಂದೇ ಖ್ಯಾತರು ಈ ಇಬ್ಬರು ಒಟ್ಟಾಗಿರುವುದು ಸಹಜವಾಗಿಯೇ ಭಾರಿ ಕುತೂಹಲ ಮೂಡಿಸಿದೆ.
Recommended Video
ಕನ್ನಡದ ಸಿನಿಮಾ ಒಂದರಲ್ಲಿ ನಟ ಪುನೀತ್ ರಾಜ್ಕುಮಾರ್ ಮತ್ತು ಪ್ರಭುದೇವಾ ಒಟ್ಟಿಗೆ ಡ್ಯಾನ್ಸ್ ಮಾಡುತ್ತಿದ್ದಾರೆ. ಆದರೆ ಇದು ಪುನೀತ್ ನಾಯಕನಾಗಿರುವ ಸಿನಿಮಾ ಅಲ್ಲ, ಅಥವಾ ಪ್ರಭುದೇವಾ ನಾಯಕ ನಟನಾಗಿ ನಟಿಸುತ್ತಿರುವ ಸಿನಿಮಾ ಸಹ ಅಲ್ಲ.
ಡಾರ್ಲಿಂಗ್ ಕೃಷ್ಣ ನಟಿಸುತ್ತಿರುವ ಸಿನಿಮಾದಲ್ಲಿ ಪ್ರಭುದೇವಾ ಮತ್ತು ಪುನೀತ್ ರಾಜ್ಕುಮಾರ್ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದ ವಿಶೇಷ ಹಾಡೊಂದರಲ್ಲಿ ನಟ ಪುನೀತ್ ರಾಜ್ಕುಮಾರ್ ಮತ್ತು ಪ್ರಭುದೇವಾ ಒಟ್ಟಿಗೆ ಹೆಜ್ಜೆ ಹಾಕುತ್ತಿದ್ದಾರೆ. ಈ ಇಬ್ಬರು ನಟರು ಒಟ್ಟಿಗೆ ಡ್ಯಾನ್ಸ್ ಮಾಡುತ್ತಿರುವ ಚಿತ್ರಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ.
ಪುನೀತ್ ರಾಜ್ಕುಮಾರ್ ಜೊತೆಗೆ ಹೆಜ್ಜೆ ಹಾಕಿದ ಪ್ರಭುದೇವಾ, ಪುನೀತ್ ಅವರ ನೃತ್ಯ ಕಲೆ ಮತ್ತು ವ್ಯಕ್ತಿತ್ವನ್ನು ಬಹುವಾಗಿ ಮೆಚ್ಚಿಕೊಂಡಿದ್ದು, ಪುನೀತ್ ರಾಜ್ಕುಮಾರ್ ಕುರಿತು ಮೆಚ್ಚುಗೆಯ ಟ್ವೀಟ್ ಒಂದನ್ನು ಮಾಡಿದ್ದಾರೆ.
''ನಿಮ್ಮೊಂದಿಗೆ ಡ್ಯಾನ್ಸ್ ಮಾಡಿದ್ದು ಬಹಳ ಖುಷಿ ಕೊಟ್ಟ ವಿಚಾರ. ನೀವು ಬಹಳ ಸಿಹಿಯಾದ ಮನಸುಳ್ಳ ವ್ಯಕ್ತಿ, ನಿಮ್ಮನ್ನು ಭೇಟಿ ಮಾಡಿದ್ದು ನನಗೆ ಬಹಳ ಆನಂದ ಉಂಟು ಮಾಡಿದೆ'' ಎಂದು ಪ್ರಭುದೇವಾ ಟ್ವೀಟ್ ಮಾಡಿದ್ದಾರೆ. ಪ್ರಭುದೇವಾರ ಟ್ವೀಟ್ಗೆ ಹಲವಾರು ಮಂದಿ ಲೈಕ್ಗಳನ್ನು, ಕಮೆಂಟ್ಗಳನ್ನು ಮಾಡಿದ್ದಾರೆ.

ಇದೊಂದು ನೆನಪುಳಿಯುವ ಅನುಭವ ಎಂದ ಪುನೀತ್
ಪುನೀತ್ ರಾಜ್ಕುಮಾರ್ ಸಹ ತಾವು ಹಾಗೂ ಪ್ರಭುದೇವಾ ಒಟ್ಟಿಗೆ ಡ್ಯಾನ್ಸ್ ಮಾಡುತ್ತಿರುವ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ''ಇದೊಂದು ನೆನಪುಳಿಯುವ ಅನುಭವ'' ಎಂದು ಬರೆದುಕೊಂಡಿದ್ದಾರೆ. ಟ್ವೀಟ್ ಅನ್ನು ಪ್ರಭುದೇವಾ, ಡಾರ್ಲಿಂಗ್ ಕೃಷ್ಣ, ಪ್ರಭುದೇವಾ ಸಹೋದರ ನಾಗೇಂದ್ರ ಪ್ರಸಾದ್, ಸಂಗೀತಾ ಶೃಂಗೇರಿ ಇನ್ನೂ ಕೆಲವರಿಗೆ ಟ್ಯಾಗ್ ಮಾಡಿದ್ದಾರೆ.

ಡಾರ್ಲಿಂಗ್ ಕೃಷ್ಣ ಸಿನಿಮಾದ ಹಾಡಿನಲ್ಲಿ ಅಪ್ಪು-ಪ್ರಭು
ಡಾರ್ಲಿಂಗ್ ಕೃಷ್ಣ ನಾಯಕರಾಗಿ ನಟಿಸುತ್ತಿರುವ 'ಲಕ್ಕಿ ಮ್ಯಾನ್' ಸಿನಿಮಾದ ವಿಶೇಷ ಹಾಡಿನಲ್ಲಿ ಪ್ರಭುದೇವಾ ಹಾಗೂ ಪುನೀತ್ ರಾಜ್ಕುಮಾರ್ ಒಟ್ಟಿಗೆ ಹೆಜ್ಜೆ ಹಾಕಿದ್ದಾರೆ. 'ಲಕ್ಕಿ ಮ್ಯಾನ್' ಸಿನಿಮಾವು ತಮಿಳಿನ 'ಓ ಮೈ ಕಡವುಲೆ' ಸಿನಿಮಾದ ರೀಮೇಕ್ ಆಗಿದ್ದು ಕನ್ನಡದಲ್ಲಿ ಈ ಸಿನಿಮಾವನ್ನು ನಾಗೇಂದ್ರ ಪ್ರಸಾದ್ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಪುನೀತ್ ರಾಜ್ಕುಮಾರ್ ನಿರೂಪಣೆ ಮಾಡುತ್ತಿದ್ದ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪ್ರಭುದೇವಾ ಭಾಗವಹಿಸಿದ್ದರು.

ಪ್ರಭುದೇವಾ ಸಹೋದರ ನಿರ್ದೇಶಿಸುತ್ತಿರುವ ಕನ್ನಡ ಸಿನಿಮಾ
ಪ್ರಭುದೇವಾ, ಡಾರ್ಲಿಂಗ್ ಕೃಷ್ಣರ 'ಲಕ್ಕಿ ಮ್ಯಾನ್' ಸಿನಿಮಾದಲ್ಲಿ ಡ್ಯಾನ್ಸ್ ಮಾಡಲು ಮುಖ್ಯ ಕಾರಣವೆಂದರೆ ಆ ಸಿನಿಮಾದ ನಿರ್ದೇಶಕ ನಾಗೇಂದ್ರ ಪ್ರಸಾದ್. ಕನ್ನಡದಲ್ಲಿ 'ಮನಸೆಲ್ಲಾ ನೀನೆ', 'ಚಿತ್ರಾ' ಹಾಗೂ ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸಿರುವ ನಾಗೇಂದ್ರ ಪ್ರಸಾದ್, ಪ್ರಭುದೇವ್ರ ಸ್ವಂತ ಸಹೋದರ. ನಟ ಹಾಗೂ ಡ್ಯಾನ್ಸ್ ಕೋರಿಯಾಗ್ರಫರ್ ಆಗಿರುವ ನಾಗೇಂದ್ರ ಪ್ರಸಾದ್ ಇದೇ ಮೊದಲ ಬಾರಿಗೆ ಸಿನಿಮಾ ನಿರ್ದೇಶನಕ್ಕೂ ಕೈ ಹಾಕಿದ್ದಾರೆ. ಕನ್ನಡ ಸಿನಿಮಾದ ಮೂಲಕವೇ ಸಿನಿಮಾ ನಿರ್ದೇಶನ ಆರಂಭಿಸಿದ್ದಾರೆ. ತಮ್ಮನಿಗೆ ಬೆಂಬಲ ನೀಡಲೆಂದು ಪ್ರಭುದೇವಾ 'ಲಕ್ಕಿಮ್ಯಾನ್' ಸಿನಿಮಾದಲ್ಲಿ ಸ್ಟೆಪ್ ಹಾಕಿದ್ದಾರೆ.

ಪ್ರಭುದೇವಾಗೆ ಕನ್ನಡ ಸಿನಿಮಾ ಹೊಸದಲ್ಲ
ಪ್ರಭುದೇವಾಗೆ ಕನ್ನಡ ಸಿನಿಮಾಗಳು ಹೊಸತೇನೂ ಅಲ್ಲ ಈ ಹಿಂದೆ ಅವರು ಉಪೇಂದ್ರ ನಟಿಸಿರುವ 'ಎಚ್2ಓ' ಸಿನಿಮಾದಲ್ಲಿ ನಟಿಸಿದ್ದರು. 'ಮನಸೆಲ್ಲಾ ನೀನೆ' ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಪ್ರಭುದೇವಾ ತಂದೆ ರಾಜಸುಂದರಂ ಮೈಸೂರಿನವರೇ ಕನ್ನಡದ ಹಲವು ಸಿನಿಮಾಗಳಲ್ಲಿ ಅವರು ಕೆಲಸ ಮಾಡಿದ್ದಾರೆ. ಇದೀಗ ಪ್ರಭುದೇವಾ ಕನ್ನಡದಲ್ಲಿ ಪೂರ್ಣ ಪ್ರಮಾಣದ ಸಿನಿಮಾ ಒಂದರಲ್ಲಿ ನಟಿಸಲಿದ್ದಾರೆ ಅದೂ ನಟ ಶಿವರಾಜ್ ಕುಮಾರ್ ಜೊತೆಗೆ ಈ ಸಿನಿಮಾವನ್ನು ಯೋಗರಾಜ್ ಭಟ್ ನಿರ್ದೇಶನ ಮಾಡಲಿದ್ದಾರೆ.

ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಪುನೀತ್
ಇನ್ನು ನಟ ಪುನೀತ್ ರಾಜ್ಕುಮಾರ್ ಪ್ರಸ್ತುತ ಕನ್ನಡದ ಬಹಳ ಬ್ಯುಸಿ ಸ್ಟಾರ್ ನಟ. 'ಜೇಮ್ಸ್' ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಕೊಂಡಿರುವ ಅವರು ಅದನ್ನು ಮುಗಿಸುತ್ತಲೇ 'ದ್ವಿತ್ವ' ಸಿನಿಮಾ ಪ್ರಾರಂಭಿಸಲಿದ್ದಾರೆ. 'ದ್ವಿತ್ವ' ಸಿನಿಮಾವನ್ನು 'ಲೂಸಿಯಾ' ಖ್ಯಾತಿಯ ಪವನ್ ಕುಮಾರ್ ನಿರ್ದೇಶನ ಮಾಡಲಿದ್ದಾರೆ. ಅದರ ಬಳಿಕ ದರ್ಶನ್ ತೂಗುದೀಪ್ ಸಹೋದರ ದಿನಕರ್ ತೂಗುದೀಪ್ ನಿರ್ದೇಶನದ ಹೊಸ ಸಿನಿಮಾದಲ್ಲಿ ನಟಿಸಲಿದ್ದಾರೆ. ಅದರ ಬಳಿಕ 'ರಾಮಾ ರಾಮಾ ರೇ' ನಿರ್ದೇಶಕ ಸತ್ಯ ನಿರ್ದೇಶನದ ಸಿನಿಮಾದಲ್ಲಿ ನಟಿಸಲಿದ್ದಾರೆ. ಅದರ ಬಳಿಕ ಜೇಕಬ್ ವರ್ಗೀಸ್ ನಿರ್ದೇಶನದ ಸಿನಿಮಾದಲ್ಲಿಯೂ ನಟಿಸುವ ಸಾಧ್ಯತೆ ಇದೆ.


Click it and Unblock the Notifications











