ದಿಲ್ ಕಾ ರಾಜಾ ಆಗಲಿರುವ ಪ್ರಜ್ವಲ್ ದೇವರಾಜ್
ಸದ್ಯ ತೆಲುಗಿನಲ್ಲಿ ಭಾರೀ ಸೆನ್ಸೇಷನ್ ಸೃಷ್ಟಿಸಿರುವ 'ಗಬ್ಬರ್ ಸಿಂಗ್' ಚಿತ್ರದ ನಿರ್ದೇಶಕ ಹರೀಶ್ ಶಂಕರ್ ಅವರಿಗೆ ಅಸೋಸಿಯೇಟ್ ಆಗಿ ಕೆಲಸ ಮಾಡಿದ ಅನುಭವ ಸೋಮನಾಥ್ ಪಾಟೀಲ್ ಅವರದು. ಇದೇ ಮೊದಲ ಬಾರಿಗೆ ಸ್ವತಂತ್ರ ನಿರ್ದೇಶನಕ್ಕೆ ಇಳಿದಿರುವ ಅವರು ಪ್ರಪ್ರಥಮವಾಗಿ ಕನ್ನಡ ಚಿತ್ರವನ್ನು ನಿರ್ದೇಶಿಸಲಿದ್ದಾರೆ.
ವಿಶ್ವನಾಥ್ ರೆಡ್ಡಿ ಎಂಬವರು ಈ ಚಿತ್ರವನ್ನು ನಿರ್ಮಿಸಲಿದ್ದು, ಚಿತ್ರ ಸಾಹಸ ಪ್ರಧಾನ ಎನ್ನಲಾಗಿದೆ. ಈ ಚಿತ್ರದಲ್ಲಿ 15 ನಿಮಿಷಗಳ ಭಾರೀ ಸಾಹಸ ದೃಶ್ಯವೊಂದನ್ನು ಸಂಯೋಜಿಸಲು ನಿರ್ದೇಶಕರು ಯೋಚಿಸಿದ್ದಾರಂತೆ. ಇದೇ ಈ ಚಿತ್ರದ ಹೈಲೈಟ್ ಕೂಡ ಆಗಲಿದೆ ಎಂದಿದ್ದಾರೆ ಸೋಮನಾಥ್ ಪಾಟೀಲ್.
ಇತ್ತೀಚಿಗಷ್ಟೇ ಎಂ ಡಿ ಶ್ರೀಧರ್ ನಿರ್ದೇಶನದ 'ಗಲಾಟೆ' ಚಿತ್ರೀಕರಣ ಮುಗಿಸಿರುವ ಪ್ರಜ್ವಲ್ ಈ ಚಿತ್ರದ ಮುಹೂರ್ತಕ್ಕೆ ಸಿದ್ಧರಾಗಿದ್ದಾರೆ. ಸದ್ಯದಲ್ಲೇ ಪ್ರಜ್ವಲ್ ದೇವರಾಜ್ ಅಭಿನಯದ 'ಸಾಗರ್' ಚಿತ್ರ ತೆರೆಗೆ ಅಪ್ಪಳಿಸಲಿದೆ. ಸಾಗರ್ ಚಿತ್ರದಲ್ಲಿ ಪ್ರಜ್ವಲ್ ಅವರಿಗೆ ರಾಧಿಕಾ ಪಂಡಿತ್, ಹರಿಪ್ರಿಯಾ ಹಾಗೂ ಸಂಜನಾ ನಾಯಕಿಯರು.
ಸಿಕ್ಸರ್ ಮೂಲಕ ಸ್ಯಾಂಡಲ್ ವುಡ್ ಬಣ್ಣದ ಲೋಕಕ್ಕೆ ಕಾಲಿಟ್ಟ ಪ್ರಜ್ವಲ್ ದೇವರಾಜ್, ಡೈನಾಮಿಕ್ ಸ್ಟಾರ್ ದೇವರಾಜ್ ಮಗ. ತಂದೆ ಖಳನಾಯಕರಾಗಿ ಮಿಂಚಿದ್ದರೆ ಮಗ ನಾಯಕನಟನಾಗಿ ಮಿಂಚುತ್ತಿದ್ದಾರೆ. ಸಿಕ್ಸರ್ ನಲ್ಲಿ ಎಲ್ಲರ ಗಮನಸೆಳೆದ ಪ್ರಜ್ವಲ್ ನಟನೆಯ ಒಟ್ಟೂ 12 ಚಿತ್ರಗಳು ಈವೆರೆಗೆ ಬಿಡುಗಡೆಯಾಗಿವೆ.
ಐದು ಚಿತ್ರಗಳನ್ನು ತಮ್ಮ ಅಕೌಂಟಿನಲ್ಲಿ ಇಟ್ಟುಕೊಂಡಿರುವ ಪ್ರಜ್ವಲ್ ಈಗಾಗಲೇ ಮೂರು ಚಿತ್ರಗಳ ಶೂಟಿಂಗ್ ಮುಗಿಸಿದ್ದಾರೆ. ಸೂಪರ್ ಶಾಸ್ರಿ ಹಾಗೂ ಸಾಗರ್ ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. ಗಲಾಟೆ ಚಿತ್ರೀಕರಣ ಮುಗಿದಿದೆ. ಗೋಕುಲ ಕೃಷ್ಣ ಹಾಗೂ ಸುಮ್ ಸುಮ್ನೆ ಚಿತ್ರಗಳು ಚಿತ್ರೀಕರಣ ಹಂತದಲ್ಲಿವೆ.
ಬಿಡುಗಡೆಗೆ ರೆಡಿಯಾಗಿರುವ ಸಾಗರ್ ಹಾಗೂ ಸೂಪರ್ ಶಾಸ್ತ್ರಿ ಈ ಎರಡೂ ಚಿತ್ರಗಳು ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಚಿತ್ರಗಳು. ಈ ಚಿತ್ರಗಳು ಪ್ರಜ್ವಲ್ ವೃತ್ತಿಜೀವನಕ್ಕೆ ಹೊಸ ತಿರುವು ನೀಡಬಹುದೆಂದು ಎಲ್ಲರೂ ನಿರೀಕ್ಷಿಸುತ್ತಿದ್ದಾರೆ. ಸ್ವತಃ ಪ್ರಜ್ವಲ್ ಕೂಡ ಈ ನಿರೀಕ್ಷೆ ಹೊಂದಿದ್ದಾರೆ. ಮುಂದೇನಾಗುತ್ತೋ ಕಾದು ನೋಡಬೇಕಾಗಿದೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications












