ಸಾಗರ್ ಚಿತ್ರಮಂದಿರಕ್ಕೆ ಕಾದಿದೆ ಪ್ರಜ್ವಲ್ 'ಸಾಗರ್'
ಎಂಡಿ ಶ್ರೀಧರ್ ನಿರ್ದೇಶನ ಹಾಗೂ ಪ್ರಜ್ವಲ್ ದೇವರಾಜ್ ನಟನೆ ಚಿತ್ರ ಸಾಗರ್, ಸದ್ಯದಲ್ಲೇ ಗಾಂಧಿನಗರದ 'ಸಾಗರ್'ನಲ್ಲಿ ತೆರೆಗೆ ಅಪ್ಪಳಿಸಲು ಕಾದಿದೆ. ಆದರೆ, ದಿನಾಂಕವಿನ್ನೂ ನಿಗದಿಯಾಗಿಲ್ಲ. ಅದಕ್ಕೆ ಕಾರಣ, ಸಾಗರ್ ಚಿತ್ರಮಂದಿರದಲ್ಲಿ ಈಗಾಗಲೇ ಬಿಡುಗಡೆಯಾಗಿರುವ 'ಅದ್ದೂರಿ' ಚಿತ್ರ ಯಶಸ್ವಿಯಾಗಿ ಮನ್ನುಗ್ಗುತ್ತಿದೆ. ಸಾಗರ್ ಚಿತ್ರಕ್ಕೂ 'ಸಾಗರ್' ಚಿತ್ರಮಂದಿರವೇ ಬೇಕಾಗಿದೆ.
ಕೋಟಿ ನಿರ್ಮಾಪಕ ರಾಮು 'ಸಾಗರ್' ಚಿತ್ರವನ್ನು ಭಾರೀ ಅದ್ದೂರಿಯಾಗಿ ನಿರ್ಮಿಸಿದ್ದಾರೆ. ಈ ಚಿತ್ರಕ್ಕೆ ವಿದೇಶಗಳೂ ಸೇರಿ, ಸಾಕಷ್ಟು ಬೇರೆ ಬೇರೆ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಚಿತ್ರದ ನಾಯಕರಾಗಿ ಪ್ರಜ್ವಲ್ ದೇವರಾಜ್ ನಟಿಸಿದ್ದು ಅವರಿಗೆ ನಾಯಕಿಯರಾಗಿ ರಾಧಿಕಾ ಪಂಡಿತ್, ಹರಿಪ್ರಿಯಾ ಹಾಗೂ ಸಂಜನಾ ನಟಿಸಿದ್ದಾರೆ.
ಸಾಗರ್ ಚಿತ್ರಮಂದಿರದ ಇನ್ನೊಂದು ವಿಶೇಷವೆಂದರೆ, ತೆಲುಗು ಸೂಪರ್ ಹಿಟ್ 'ಮಗಧಿರ' ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ಮಿಂಚಿದ್ದ ನಟ ದೇವಗಿಲ್ ಈ ಚಿತ್ರದಲ್ಲಿ ಪ್ರಮುಖ ಖಳನಟರಾಗಿ ಅಭಿನಯಿಸಿದ್ದಾರೆ. ಇವರ ಪಾತ್ರಕ್ಕೆ ಧ್ವನಿ ನೀಡಿರುವವರು ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಎಂಬುದು ಈಗಾಗಲೇ ಬಹಿರಂಗವಾಗಿದೆ. ಗುರುಕಿರಣ್ ಧ್ವನಿ ದೇವ್ ಗಿಲ್ ಅವರಿಗೆ ಎಷ್ಟರಮಟ್ಟಿಗೆ ಹೊಂದಿಕೆಯಾಗುತ್ತೋ!
ಸಾಗರ್ ಚಿತ್ರ ಮುಗಿಸಿರುವ ಪ್ರಜ್ವಲ್ ದೇವರಾಜ್ ಈಗ ಗಲಾಟೆ ಚಿತ್ರದಲ್ಲಿ ಬಿಜಿಯಾಗಿದ್ದಾರೆ. ಈ ತಿಂಗಳ ಕೊನೆಯಲ್ಲಿ ಗಲಾಟೆ ಮುಗಿಯಲಿದ್ದು ನಂತರ ಅವರ ಹೊಸ ಚಿತ್ರ 'ದಿಲ್ ಕಾ ರಾಜಾ' ಚಿತ್ರೀಕರಣ ಪ್ರಾರಂಭವಾಗಲಿದೆ. ಪ್ರಜ್ವಲ್ ಯಾರ 'ದಿಲ್ ಕಾ ರಾಜಾ' ಎಂಬುದಕ್ಕೂ ಉತ್ತರ ಸಿಕ್ಕಿದೆ. ಪ್ರಜ್ವಲ್ ದಿಲ್ ರಾಣಿಯಾಗಿ ರಮ್ಯಾ ಆಯ್ಕೆಯಾಗಿದ್ದಾರೆ.
ಪ್ರಜ್ಡಲ್ ಹೊಸ ಚಿತ್ರ ದಿಲ್ ಕಾ ರಾಜಾ ಚಿತ್ರದ ಚಿತ್ರೀಕರಣ ಬರುವ ತಿಂಗಳು, ಆಗಸ್ಟ್ 8, 2012 ಕ್ಕೆ ಎಂಬುದು ಪಕ್ಕಾ ಆಗಿದೆ. ಈ ಚಿತ್ರವನ್ನು ನಿರ್ಮಿಸಲಿರುವವರು ವಿಶ್ವನಾಥ್ ರೆಡ್ಡಿ ಹಾಗೂ ಗಂಗಾ ಆರ್ ಪಾಟೀಲ್. ಅಂದಹಾಗೆ, ಶೀಖ್ರದಲ್ಲೇ ಬರಲಿರುವ ಪ್ರಜ್ವಲ್ ಅಭಿನಯದ 'ಸಾಗರ್' ಚಿತ್ರಕ್ಕೆ ಪ್ರೇಕ್ಷಕರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದು ಸದ್ಯಕ್ಕಿರುವ ಕುತೂಹಲ. (ಒನ್ ಇಂಡಿಯಾ ಕನ್ನಡ)


Click it and Unblock the Notifications











