ಉತ್ತರ ಕರ್ನಾಟಕದ ಜನ ಮೆಚ್ಚಿದ 'ದ್ರೋಹಿ'
ಗಂಡು ಮೆಟ್ಟಿನ ನಾಡು ಎಂದರೆ ಇಡೀ ಕರ್ನಾಟಕದಲ್ಲಿ ಹುಬ್ಬಳ್ಳಿಯೊಂದೇ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಈ ಮಾತಿಗೆ ಸಾಟಿ ಎಂಬಂತೆ ಹುಬ್ಬಳ್ಳಿಯ ಹೊಸಬರು ಸೇರಿಕೊಂಡು "ದ್ರೋಹಿ" ಎಂಬ ಚಲನಚಿತ್ರ ಮಾಡಿ ಆಗಸ್ಟ್ 28 ರಂದು ಹುಬ್ಬಳ್ಳಿಯಲ್ಲಿ ಬಿಡುಗಡೆ ಮಾಡಿದ್ದಾರೆ.
ಮೊದಲ ಪ್ರದರ್ಶನದಲ್ಲಿಯೇ ಚಿತ್ರಮಂದಿರ ಕಿಕ್ಕಿರಿದು ತುಂಬಿರುವುದನ್ನು ಕಂಡರೆ ಇಲ್ಲಿಯವರ ಸಿನಿಮಾ ಪ್ರೇಮ ಎಷ್ಟರಮಟ್ಟಿಗಿದೆ ಅನ್ನೋದನ್ನ ತೋರಿಸುತ್ತದೆ.
ಆಪ್ತಮಿತ್ರರಿಬ್ಬರು ಹೇಗೆ ರಾಜಕೀಯದಾಟಕ್ಕೆ ಬಲಿಯಾಗಿ ಇಬ್ಬರಲ್ಲಿ ಒಬ್ಬರು ದ್ರೋಹಿಯಾಗುತ್ತಾರೆ ಎಂಬುದನ್ನು ಚಿತ್ರದಲ್ಲಿ ನಿರ್ದೇಶಕ ಪ್ರಕಾಶ ಕಮ್ಮಾರ ಸುಂದರವಾಗಿ ತೋರಿಸಿ ಕೊಟ್ಟಿದ್ದಾರೆ. ಜೊತೆಗೆ ಚಿತ್ರಕ್ಕೆ ಕಥೆ ಕೂಡ ಇವರದೇ ಆಗಿದ್ದು ವಿಶೇಷ. ಅಲ್ಲದೇ ಸುಮಾರು 15 ವರ್ಷಗಳ ಕಾಲ ಚಲನಚಿತ್ರ ಕ್ಷೇತ್ರದಲ್ಲಿ ಮೇಕಪ್ ಮ್ಯಾನ್ ಆಗಿ ದುಡಿದಿರುವ ಅನುಭವ ನಿರ್ದೇಶಕ ಪ್ರಕಾಶ ಕಮ್ಮಾರರದು.
ಇದು ಪ್ರಕಾಶ ಕಮ್ಮಾರರ ಮೊದಲ ನಿರ್ದೇಶನದ ಸಿನಿಮಾ. ಇವರಿಗೆ ವಿಶಾಲ ಎಂ. ಸುತಗಟ್ಟಿ ಸಾಥ್ ನೀಡಿ ಸಹ ನಿರ್ದೇಶಕರಾಗಿ ಅಚ್ಚುಕಟ್ಟಾಗಿ ಕೆಲಸ ಮಾಡಿ ಜೊತೆಗೆ ಸಹ ನಿರ್ಮಾಪಕರಾಗಿ ದುಡಿದಿದ್ದಾರೆ.

ರೌಡಿಸಂ ಹಿನ್ನೆಲೆಯನ್ನೂ ಚಿತ್ರ ಹೊಂದಿದ್ದು, ಹುಬ್ಬಳ್ಳಿ ಸುತ್ತಮುತ್ತಲಿನ ಸುಂದರ ಸ್ಥಳಗಳನ್ನು ಕ್ಯಾಮರಾ ಮ್ಯಾನ್ ಶಿವಶರಣ ಸುಗ್ನಳ್ಳಿ ಚಿತ್ರದಲ್ಲಿ ಸುಂದರವಾಗಿ ಸೆರೆಹಿಡಿದಿದ್ದಾರೆ.
ಚಿತ್ರದಲ್ಲಿ ಪ್ರೇಮಕಥಾ ಹಂದರವಿದ್ದು, ಚಿತ್ರದಲ್ಲಿ ಬರುವ 6 ಹಾಡುಗಳಲ್ಲಿ ಎಲ್ಲವೂ ಕೇಳಲು ಇಂಪಾಗಿವೆ. ಅದರಲ್ಲೂ "ಮಳೆ ಬಿಲ್ಲಲ್ಲೇ" ಎಂಬ ಹಾಡಂತೂ ಮ್ಯೂಸಿಕ್ ಪ್ರೀಯರ ಮೆಚ್ಚುಗೆ ಗಳಿಸಿದೆ.
ಪರಶುರಾಮ ದಲಬಂಜನ, ಮತ್ತು ಮಲ್ಲಯ್ಯ ಮಠಪತಿ ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ಹುಬ್ಬಳ್ಳಿ ಮಹಾನಗರ ಪಾಲಿಕೆಯ ಇಪ್ಪತ್ತಕ್ಕೂ ಹೆಚ್ಚು ಸದಸ್ಯರು ಮತ್ತು ಹಲವಾರು ಸಂಘಟನೆಗಳ ಧುರೀಣರು ನಟಿಸಿರುವುದು ಇನ್ನೂ ವಿಶೇಷ. ಜೊತೆಗೆ ಮಾಜಿ ಶಾಸಕ ಅಶೋಕ ಕಾಟವೆ ಕೂಡ ಈ ಚಿತ್ರಕ್ಕಾಗಿ ಬಣ್ಣ ಹಚ್ಚಿದ್ದಾರೆ.
ಎಂ. ವಿಜಯಕುಮಾರ್ ಅವರ ಹಿನ್ನೆಲೆ ಸಂಗೀತ ರೌಡಿಸಂ ಸನ್ನಿವೇಶಗಳಲ್ಲಿ ಭಯ ಹುಟ್ಟಿಸುವಂತಿದೆ. ನಾಯಕಿ ನಟಿ ಅಮೃತಾಶ್ರೀ ಪ್ರೇಕ್ಷಕರ ಹೃದಯಕ್ಕೆ ಲಗ್ಗೆಯಿಡುವಂತೆ ನಟಿಸಿರುವುದು ಅವರ ಮುಂದಿನ ಭವಿಷ್ಯಕ್ಕೆ ತುಂಬಾ ಸಹಕಾರಿಯಾಗುವುದರಲ್ಲಿ ಸಂಶಯವೇ ಇಲ್ಲ. ಖಳನಟನ ಪಾತ್ರ ಮಾಡಿದ ಪ್ರಶಾಂತ್ ಅವರ ನಟನೆ ತೆಲಗು ಚಿತ್ರಗಳ ವಿಲನ್ ಪಾತ್ರಧಾರಿಗಳನ್ನು ನೆನಪಿಸುತ್ತದೆ.
ಜಶ್ವಂತ್ ಜಾಧವ್, ಪ್ರಕಾಶ ನಾಯಕ್, ಅಮೃತಾಶ್ರೀ, ಪ್ರಶಾಂತ್, ಎಸ್. ಕೆ. ಮಂಜು, ಓಂ ಪ್ರದೀಪ ಕುಮಾರ್ ಪತಕಿ ಮತ್ತು ಯಮನೂರಪ್ಪ ಜಾಧವ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ.
ಈಗಾಗಲೇ ಉತ್ತರ ಕರ್ನಾಟಕದಲ್ಲಿ ಪ್ರತ್ಯೇಕ ವಾಣಿಜ್ಯ ಮಂಡಳಿ ರಚಿಸಿ ಬೆಂಗಳೂರಿನ ಸಿನೆಮಾ ಮಂದಿಯ ಗಮನ ಸೆಳೆದಿದ್ದ ಹುಬ್ಬಳ್ಳಿಗರು, ಈಗ "ದ್ರೋಹಿ" ಚಿತ್ರದ ಮೂಲಕ ಮತ್ತೊಮ್ಮೆ ಬೆಂಗಳೂರಿಗರ ಗಮನ ಸೆಳೆಯುವ ಪ್ರಯತ್ನವನ್ನು ಮಾಡಿದ್ದಂತು ಖಂಡಿತ.


Click it and Unblock the Notifications











