ಒಳ್ಳೆಯವರನ್ನು ಬೆಳೆಸಿ; ಸಿನಿರಸಿಕರಿಗೆ ಕರೆಕೊಟ್ಟ ರತ್ನನ್ ಪ್ರಪಂಚ ಪ್ರಮೋದ್

ಲಕುಮಿ ಧಾರಾವಾಹಿಯ ಮೂಲಕ ನಟನೆ ಆರಂಭಿಸಿದ್ದ ನಟ ಪ್ರಮೋದ್ ಪಂಜು ಗೀತಾ ಬ್ಯಾಂಗಲ್ ಸ್ಟೋರ್ ಚಿತ್ರದ ಮೂಲಕ ಸಿನಿ ಜರ್ನಿ ಆರಂಭಿಸಿದ್ದರು. ನಂತರ ಪ್ರೀಮಿಯರ್ ಪದ್ಮಿನಿ ಚಿತ್ರದಲ್ಲಿನ ನಟನೆಯಿಂದ ವೀಕ್ಷಕರ ಮನಗೆದ್ದ ಪ್ರಮೋದ್ ಹೆಚ್ಚಾಗಿ ಪ್ರಶಂಸೆ ಪಡೆದುಕೊಂಡದ್ದು ರತ್ನನ್ ಪ್ರಪಂಚ ಸಿನಿಮಾದ ಮೂಲಕ. ಈ ಚಿತ್ರದಲ್ಲಿ ಉಡಾಳ್ ಬಾಬು ರಾವ್ ಪಾತ್ರದಲ್ಲಿ ಪ್ರಮೋದ್ ಅದ್ಭುತವಾಗಿ ನಟಿಸಿದ್ದರು. ಹೀಗೆ ರತ್ನನ್ ಪ್ರಪಂಚ ಚಿತ್ರದಲ್ಲಿನ ತಮ್ಮ ಅಮೋಘ ಅಭಿನಯದಿಂದ ವೀಕ್ಷಕರ ಮನಸ್ಸನ್ನು ಗೆದ್ದಿದ್ದ ಪ್ರಮೋದ್ ಪಂಜು ಮುಂದೆ ಯಾವ ಚಿತ್ರದಲ್ಲಿ ಅಭಿನಯಿಸಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲಿಯೂ ಇತ್ತು.
ಪ್ರಮೋದ್ ಪಂಜು ಇಂಗ್ಲಿಷ್ ಮಂಜ ಎಂಬ ಚಿತ್ರದಲ್ಲಿ ಅಭಿನಯಿಸಲಿದ್ದು, ಇದಕ್ಕೂ ಮುನ್ನ ಬಾಂಡ್ ರವಿ ಎಂಬ ಆ್ಯಕ್ಷನ್ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರದ ಟೀಸರ್ ನಿನ್ನೆಯಷ್ಟೇ ( ಸೆಪ್ಟೆಂಬರ್ 24 ) ಬಿಡುಗಡೆಯಾಗಿದೆ. 'ಒಳ್ಳೆಯವನು ಕೆಟ್ಟವನಾದ್ರೆ ನಂಬ್ತಾರೆ, ಕೆಟ್ಟವನು ಒಳ್ಳೆಯವನಾದ್ರೆ ಯಾರೂ ನಂಬಲ್ಲ' ಎಂಬ ಖಡಕ್ ಡೈಲಾಗ್ ಮೂಲಕ ಆರಂಭವಾಗುವ ಟೀಸರ್ ಭರಪೂರ ಫೈಟ್ ಹಾಗೂ ರಕ್ತಸಿಕ್ತ ದೃಶ್ಯಗಳನ್ನು ಹೊಂದಿದೆ.
ಟೀಸರ್ ಪ್ರೇಮಕಥೆಯೊಂದನ್ನು ಸಹ ಹೊಂದಿದ್ದು, ಹೆಚ್ಚಾಗಿ ಕಾರಾಗೃಹದ ದೃಶ್ಯಗಳಿವೆ. ಈ ಹಿಂದೆ ರತ್ನನ್ ಪ್ರಪಂಚ ಚಿತ್ರದಲ್ಲಿ ಖಡಕ್ ದೃಶ್ಯಗಳ ಜತೆ ಸೆಂಟಿಮೆಂಟ್ ದೃಶ್ಯಗಳಲ್ಲಿ ಕಾಣಿಸಿಕೊಂಡು ನೋಡುಗರ ಕಣ್ಣು ಒದ್ದೆಯಾಗುವಂತೆ ನಟಿಸಿದ್ದ ಪ್ರಮೋದ್ ಈ ಟೀಸರ್ ಅಂತ್ಯದಲ್ಲಿ 'ಸರ್ ನನಗೆ ಸೆಂಟಿಮೆಂಟ್ ಗಿಂತ ಸೆಟಲ್ ಮೆಂಟೇ ಮುಖ್ಯ' ಎಂಬ ಡೈಲಾಗ್ ಹೇಳುವ ಮೂಲಕ ಈ ಬಾರಿ ಖಡಕ್ ಆ್ಯಕ್ಷನ್ ಸಿನಿಮಾ ಮಾಡಿರುವ ಸೂಚನೆ ನೀಡಿದ್ದಾರೆ.
ಟೀಸರ್ ಬಿಡುಗಡೆಯಾದ ಒಂದೇ ದಿನಕ್ಕೆ ಹತ್ತು ಲಕ್ಷ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಈ ಸಲುವಾಗಿ ಟೀಸರ್ ವೀಕ್ಷಿಸಿದ ಸಿನಿಪ್ರೇಮಿಗಳಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ನಟ ಪ್ರಮೋದ್ ಪಂಜು ತಮ್ಮ ಅಧಿಕೃತ ಇನ್ ಸ್ಟಾಗ್ರಾಂ ಖಾತೆಯಲ್ಲಿ ಲೈವ್ ಬಂದಿದ್ದರು. ಈ ಸಂದರ್ಭದಲ್ಲಿ ತಾನು ಮುಂದೆ ಉತ್ತಮ ಕಥೆಯುಳ್ಳ ಚಿತ್ರಗಳಲ್ಲಿ ಅಭಿನಯಿಸುವ ಭರವಸೆ ನೀಡಿದ್ದು, ಇದೇ ವೇಳೆ ಅಭಿಮಾನಿಯೋರ್ವ ನೀವು ಬೆಳೆಯಬೇಕು ಎಂದಿದ್ದ ಕಾಮೆಂಟ್ ಕುರಿತು ಪ್ರತಿಕ್ರಿಯಿಸಿದ್ದಾರೆ.
ನೀವು ಬೆಳೆಸಬೇಕು, ಒಳ್ಳೆಯವರನ್ನು ಹಾಗೂ ಒಳ್ಳೆ ಕೆಲಸ ಮಾಡುವವರನ್ನು ಬೆಳೆಸಬೇಕು, ಎಲ್ಲರಿಗೂ ತುಂಬಾ ಥ್ಯಾಂಕ್ಸ್ ಎಂದು ಹೇಳಿಕೆ ನೀಡಿದ್ದಾರೆ.


Click it and Unblock the Notifications











