ಬೆಳ್ಳಿತೆರೆಯಲ್ಲಿ ಅದೃಷ್ಟ ಪರೀಕ್ಷೆಗೆ ನಿಂತ ಡೈನಾಮಿಕ್ ಹೀರೋ 2ನೇ ಕುಡಿ
ಇತ್ತೀಚೆಗೆ ಸ್ಟಾರ್ ನಟ-ನಟಿಯರ ಮಕ್ಕಳು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿರೋದು ಸಹಜ ವಿಷಯ. ಅದ್ರಲ್ಲಿ ಕೆಲವರಿಗೆ ಮೊದಲ ಸಿನಿಮಾ ಬ್ರೇಕ್ ಕೊಟ್ಟು, ಸೂಪರ್ ಹಿಟ್ ಹೀರೋ ಎನಿಸಿಕೊಂಡರೆ, ಇನ್ನು ಕೆಲವರಿಗೆ ಅದೃಷ್ಟ ಕೈ ಕೊಟ್ಟು ಬಂದ ದಾರಿಗೆ ಸುಂಕವಿಲ್ಲ ಎಂದು ವಾಪಸಾದ ಎಷ್ಟೋ ಪ್ರಸಂಗಗಳು ನಡೆದಿವೆ.
ಇದೀಗ ಮತ್ತೋರ್ವ ಸ್ಟಾರ್ ನಟನ ಮಗ ಒಬ್ಬರು ಕನ್ನಡ ಚಿತ್ರರಂಗಕ್ಕೆ ಮೊಟ್ಟ ಮೊದಲ ಬಾರಿಗೆ ಕಾಲಿಡುತ್ತಿದ್ದಾರೆ. ಇವರು ಬೇರಾರು ಅಲ್ಲ, ಖ್ಯಾತ ನಟ ಡೈನಾಮಿಕ್ ಸ್ಟಾರ್ ದೇವರಾಜ್ ಅವರ ಎರಡನೇ ಮಗ ಪ್ರಣಾಮ್ ದೇವರಾಜ್ ಅವರು.[ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಬಗ್ಗೆ ಹಬ್ಬಿರುವ ಸುದ್ದಿ ನಿಜವೇ?]
'ಸಿಕ್ಸರ್' ಚಿತ್ರದ ಮೂಲಕ ನಟ ಪ್ರಜ್ವಲ್ ದೇವರಾಜ್ ಅವರು ಮೊಟ್ಟ ಮೊದಲ ಬಾರಿಗೆ ಬೆಳ್ಳಿತೆರೆಗೆ ಕಾಲಿಟ್ಟರು. ಮೊದಲ ಚಿತ್ರದಲ್ಲಿಯೇ 'ಸುವರ್ಣ ಅತ್ಯುತ್ತಮ ಚೊಚ್ಚಲ ನಟ' ಎಂಬ ಪ್ರಶಸ್ತಿ ಗಿಟ್ಟಿಸಿಕೊಂಡು, ಎಲ್ಲರಲ್ಲೂ ಭರವಸೆ ಮೂಡಿಸಿದರು.
ತದನಂತರ ಬಂದ 'ಗೆಳೆಯ', 'ಗಂಗೆ ಬಾರೆ ತುಂಗೆ ಬಾರೆ' ಅಷ್ಟಕಷ್ಟೇ ಎನಿಸಿಕೊಂಡವು. ಆದರೆ 'ಮೆರವಣಿಗೆ' ಮತ್ತೆ ಪ್ರಜ್ವಲ್ ಅವರಿಗೆ ಬ್ರೇಕ್ ಕೊಟ್ಟಿತು. ತದನಂತರ ಬಂದ ಎಲ್ಲಾ ಸಿನಿಮಾಗಳು ಹೇಳ ಹೆಸರಿಲ್ಲದಂತೆ ಮಾಯವಾದವು.
ಇದೆಲ್ಲಾ ಎಲ್ಲರಿಗೂ ತಿಳಿದಿರುವ ಸಂಗತಿ. ಹೊಸದಾಗಿ ಇದೀಗ ಪ್ರಜ್ವಲ್ ದೇವರಾಜ್ ಅವರ ಸಹೋದರ ಪ್ರಣಾಮ್ ಅವರು ಬೆಳ್ಳಿತೆರೆಗೆ ಕಾಲಿಡಲು ಸಜ್ಜಾಗಿದ್ದು, ಭಾನುವಾರ (ಆಗಸ್ಟ್ 28) ಕಂಠೀರವ ಸ್ಟುಡಿಯೋದಲ್ಲಿ ಚಿತ್ರದ ಮುಹೂರ್ತ ನೆರವೇರಿದೆ.
ಚಿತ್ರದ ಹೆಸರೇನು.? ಚಿತ್ರಕ್ಕೆ ನಾಯಕಿ ಯಾರು.? ನಿರ್ದೇಶಕ-ನಿರ್ಮಾಪಕರು ಯಾರು.? ಎಂಬಿತ್ಯಾದಿ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಹುಡುಕಲು ಮುಂದಿನ ಸ್ಲೈಡ್ಸ್ ಗಳನ್ನು ಒಂದೊಂದಾಗಿ ಕ್ಲಿಕ್ಕಿಸುತ್ತಾ ಹೋಗಿ...

ಕ್ಲ್ಯಾಪ್ ಮಾಡಿದ ಶಿವಣ್ಣ
ಭಾನುವಾರ, ಆಗಸ್ಟ್ 28 ರಂದು, ಕಂಠೀರವ ಸ್ಟುಡಿಯೋದಲ್ಲಿ ಜರುಗಿದ ಮುಹೂರ್ತ ಕಾರ್ಯಕ್ರಮದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕ್ಲ್ಯಾಪ್ ಮಾಡುವ ಮೂಲಕ ಚಿತ್ರದ ಕೆಲಸಗಳಿಗೆ ಚಾಲನೆ ನೀಡಿದರು. ಇಡೀ ದೇವರಾಜ್ ಕುಟುಂಬ ಈ ಸಮಾರಂಭದಲ್ಲಿ ಹಾಜರಿದ್ದರು. ಚಿತ್ರಕ್ಕೆ ಚಾಲನೆ ನೀಡಿದ ಶಿವಣ್ಣ ಅವರು ಪ್ರಣಾಮ್ ಗೆ ಶುಭ ಹಾರೈಸಿದರು.[ಪ್ರಜ್ವಲ್ ದೇವರಾಜ್ ಮೇಲೆ ಜೇನು ಹುಳಗಳ ದಾಳಿ]

ಚಿತ್ರಕ್ಕಿನ್ನೂ ಹೆಸರಿಟ್ಟಿಲ್ಲ
ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲವಾದ್ದರಿಂದ, ಸದ್ಯಕ್ಕೆ ಪ್ರೊಡಕ್ಷನ್ ನಂ.1 ಎಂದು ಹೆಸರಿಡಲಾಗಿದೆ. ತೆಲುಗು ಸಿನಿಮಾ ನಿರ್ದೇಶಕ ಶ್ರೀಮನ್ ವೆಮುಲ ಅವರು ಪ್ರಣಾಮ್ ಗೆ ಆಕ್ಷನ್-ಕಟ್ ಹೇಳಲಿದ್ದು, ನಿರ್ಮಾಪಕರಾದ ಸಂಪತ್ ಕುಮಾರ್ ಮತ್ತು ಜಿ.ಶ್ರೀಧರ್ ಅವರು ಹಯಗ್ರೀವ ಬ್ಯಾನರ್ ಅಡಿಯಲ್ಲಿ ಬಂಡವಾಳ ಹೂಡಲಿದ್ದಾರೆ. ಛಾಯಾಗ್ರಾಹಕ ರಾಮಿರೆಡ್ಡಿ ಅವರು ಕ್ಯಾಮೆರಾ ಕೈ ಚಳಕ ತೋರಲಿದ್ದು, ಸಾಗರ್ ಮಹತಿ ಮ್ಯೂಸಿಕ್ ಕಂಪೋಸ್ ಮಾಡಲಿದ್ದಾರೆ.['ಚೌಕ'ದ ಮೊಹಮ್ಮದ್ ಅನ್ವರ್ ಗೆ 'ಬೇಗಂ' ಆಗ್ತಾರಾ ದೀಪಾ ಸನ್ನಿಧಿ?]

ರೀಮೇಕ್ ಸಿನಿಮಾ
ರೀಮೇಕ್ ಚಿತ್ರದ ಮೂಲಕ ಪ್ರಣಮ್ ಅವರು ಮೊಟ್ಟ ಮೊದಲ ಬಾರಿಗೆ ಬೆಳ್ಳಿತೆರೆಗೆ ಕಾಲಿಡುತ್ತಿದ್ದಾರೆ. ತೆಲುಗಿನಲ್ಲಿ ಸೂಪರ್ ಹಿಟ್ ಆಗಿದ್ದ 'ಕುಮಾರಿ 21F' ಚಿತ್ರ ಕನ್ನಡಕ್ಕೆ ರೀಮೇಕ್ ಆಗುತ್ತಿದ್ದು, ಈ ಚಿತ್ರದ ಮೂಲಕ ಪ್ರಣಾಮ್ ಅವರು ನಾಯಕನಾಗಿ ಪರಿಚಯಗೊಳ್ಳುತ್ತಿದ್ದಾರೆ. ಸುಕುಮಾರ್ ಅವರು ಈ ಚಿತ್ರಕ್ಕೆ ಕಥೆ ಬರೆದಿದ್ದು, ಈ ಮುಹೂರ್ತ ಸಮಾರಂಭದಲ್ಲಿ ಕೂಡ ಹಾಜರಿದ್ದರು.

ನಾಯಕಿ ಯಾರು.?
ಚಿತ್ರದಲ್ಲಿ ನಾಯಕಿಯಾಗಿ ನಿಧಿ ಕುಶಾಲಪ್ಪ ಅವರು ಬಣ್ಣ ಹಚ್ಚಲಿದ್ದಾರೆ. ಈ ಮೊದಲು ನಿಧಿ ಅವರು ನಟ ರಕ್ಷಿತ್ ಅವರ ಜೊತೆ 'ನನ್ ಲವ್ ಟ್ರ್ಯಾಕ್' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ಇದೀಗ ಪ್ರಣಾಮ್ ದೇವರಾಜ್ ಅವರ ಜೊತೆ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ. ಇನ್ನುಳಿದಂತೆ ಚಿತ್ರದಲ್ಲಿ ಪವಿತ್ರಾ ಲೋಕೇಶ್ ಮತ್ತು ರವಿ ಕಾಳೆ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.

ಬಹುತೇಕ ತೆಲುಗು ತಂಡ
ತೆಲುಗಿನ ರೀಮೇಕ್ ಸಿನಿಮಾ ಆಗಿರೋದ್ರಿಂದ ಬಹುತೇಕ ತೆಲುಗು ತಂಡ ಕನ್ನಡದಲ್ಲಿ ಕೂಡ ಕೆಲಸ ಮಾಡುವ ಸಾಧ್ಯತೆ ಇದೆ. ಬಹುತೇಕ ತಂತ್ರಜ್ಞರು ಕೂಡ ತೆಲುಗು ಚಿತ್ರರಂಗದವರೇ ಆಗಿದ್ದಾರೆ.


Click it and Unblock the Notifications











