'ಗಂಧದ ಗುಡಿ' ಬರೀ ಚಿತ್ರವಲ್ಲ ಎಂದ ದರ್ಶನ್; ಈ ಥರ ಯಾರಿಂದಲೂ ಸಾಧ್ಯವಿಲ್ಲ ಎಂದ ಪ್ರಶಾಂತ್ ನೀಲ್
ಪುನೀತ್ ರಾಜ್ ಕುಮಾರ್ ಅವರ ಕನಸಿನ ಕೂಸು ಗಂಧದಗುಡಿ ಇಂದು (ಅಕ್ಟೋಬರ್ 28 ) ಬೆಳ್ಳಿತೆರೆಗೆ ಅಪ್ಪಳಿಸಿದೆ. ಈ ಅಕ್ಟೋಬರ್ 29ಕ್ಕೆ ಸರಿಯಾಗಿ ಎರಡು ವರ್ಷಗಳ ಹಿಂದೆ ಅಂದರೆ 2020ರ ಅಕ್ಟೋಬರ್ 29ರಂದು ಶುರುವಾಗಿದ್ದ ಗಂಧದಗುಡಿ ಜರ್ನಿಯನ್ನು ಬೆಳ್ಳಿತೆರೆ ಮೇಲೆ ವೀಕ್ಷಿಸಿದ ವೀಕ್ಷಕರು ಪುನೀತರಾಗುತ್ತಿದ್ದಾರೆ.
ದಕ್ಷಿಣದಿಂದ ಉತ್ತರ ಕರ್ನಾಟಕದವರೆಗಿನ ಪ್ರಮುಖ ವನ್ಯ ಸಂಪತ್ತು ಹಾಗೂ ಯಾರೂ ಕಂಡಿರದ ರೀತಿಯ ಜಾಗಗಳನ್ನು ಮತ್ತು ಅವುಗಳ ವಿಶೇಷತೆಗಳನ್ನು ಪುನೀತ್ ಹಾಗೂ ಅಮೋಘವರ್ಷ ಜೋಡಿಯ ಗಂಧದಗುಡಿ ಬಿಚ್ಚಿಟ್ಟಿದೆ. ಕರ್ನಾಟಕ ವನ್ಯಸಂಪತ್ತಿನ ದರ್ಶನ ಮಾತ್ರವಲ್ಲದೆ ಚಿತ್ರಮಂದಿರಕ್ಕೆ ಬರುವ ಜನರಿಗೆ ಈ ಚಿತ್ರದಲ್ಲಿಯೂ ಸಹ ಪುನೀತ್ ರಾಜ್ ಕುಮಾರ್ ಒಳ್ಳೊಳ್ಳೆ ಸಂದೇಶ ನೀಡಿದ್ದಾರೆ.
ಪುನೀತ್ ರಾಜ್ ಕುಮಾರ್ ಅವರನ್ನು ಕೊನೆಯ ಬಾರಿಗೆ ತೆರೆಮೇಲೆ ನೋಡಿ ಕಣ್ತುಂಬಿಕೊಳ್ಳೋಣ ಎಂದು ಚಿತ್ರಮಂದಿರಕ್ಕೆ ಹಾಜರ್ ಆದ ಸಿನಿಪ್ರೇಕ್ಷಕರಿಗೆ ಅತ್ಯಮೂಲ್ಯವಾದ ಕಂಟೆಂಟ್ ಇರುವ ಚಿತ್ರ ವೀಕ್ಷಿಸಿದ ಬೃಹತ್ ಸಮಾಧಾನವಂತೂ ಖಂಡಿತ ಇದೆ. ಹೀಗೆ ಗಂಧದ ಗುಡಿ ಸಿನಿಮಾ ಪುನೀತ್ ಅವರ ಅಂತಿಮ ಚಿತ್ರ ಎಂಬ ಕಾರಣಕ್ಕಿಂತ ಒಂದೊಳ್ಳೆ ಕಂಟೆಂಟ್ ಇರುವ ಚಿತ್ರ ಎಂದೇ ಹೆಚ್ಚು ಖ್ಯಾತಿಯನ್ನು ಪಡೆದುಕೊಳ್ಳಲಾರಂಭಿಸಿದೆ. ಚಿತ್ರದ ಬಗ್ಗೆ ಸಾಮಾನ್ಯ ಪ್ರೇಕ್ಷಕರು ಮಾತ್ರವಲ್ಲದೆ ಸೆಲೆಬ್ರಿಟಿಗಳು ಸಹ ಹಾಡಿ ಹೊಗಳುತ್ತಿದ್ದು, ಚಿತ್ರಕ್ಕೆ ಫುಲ್ ಮಾರ್ಕ್ಸ್ ನೀಡಿದ್ದಾರೆ. ಈ ಸಾಲಿಗೆ ಇದೀಗ ನಿರ್ದೇಶಕ ಪ್ರಶಾಂತ್ ನೀಲ್ ಕೂಡ ಸೇರಿಕೊಂಡಿದ್ದಾರೆ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಗಂಧದಗುಡಿ ಚಿತ್ರದ ಬಗ್ಗೆ ಟ್ವೀಟ್ ಮಾಡಿದ್ದಾರೆ.

ಚಿತ್ರ ವೀಕ್ಷಿಸಿ ಫುಲ್ ಮಾರ್ಕ್ಸ್ ಕೊಟ್ಟ ಪ್ರಶಾಂತ್ ನೀಲ್
ಇಂತಹ ಅತ್ಯದ್ಭುತ ಹಾಗೂ ದೀರ್ಘಕಾಲ ನೆನಪಿರುವಂತಹ ಅನುಭವವನ್ನು ಕೊಟ್ಟ ಅಶ್ವಿನಿ ಪುನೀತ್ ರಾಜ್ ಕುಮಾರ್, ಅಮೋಘವರ್ಷ ಹಾಗೂ ಇಡೀ ಗಂಧದಗುಡಿ ಚಿತ್ರ ತಂಡಕ್ಕೆ ಧನ್ಯವಾದಗಳು, ಕನ್ನಡ ತಾಯಿಯ ಮಗನಾದ ಪುನೀತ್ ರಾಜ್ ಕುಮಾರ್ ಅವರಿಗಿಂತ ನಮ್ಮ ಕರ್ನಾಟಕವನ್ನು ಬೇರೆ ಯಾರಿಗೂ ಇಷ್ಟು ಚೆನ್ನಾಗಿ ತೋರಿಸಲು ಸಾಧ್ಯವಿಲ್ಲ, ಇಂಥ ಚಿತ್ರವನ್ನು ನಮಗೆ ನೀಡಿದ್ದಕ್ಕೆ ಧನ್ಯವಾದಗಳು ಡಾ ಪುನೀತ್ ರಾಜ್ ಕುಮಾರ್ ಸರ್ ಎಂದು ನಿರ್ದೇಶಕ ಪ್ರಶಾಂತ್ ನೀಲ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.

ಗಂಧದಗುಡಿ ಕೇವಲ ಚಿತ್ರವಲ್ಲ: ದರ್ಶನ್
ಇನ್ನು ದರ್ಶನ್ ತೂಗುದೀಪ ಶ್ರೀನಿವಾಸ್ ಸಹ ಗಂಧದ ಗುಡಿ ಚಿತ್ರದ ಕುರಿತು ಟ್ವೀಟ್ ಮಾಡಿದ್ದಾರೆ. ನಮ್ಮ ಪುನೀತ್ ರಾಜ್ ಕುಮಾರ್ ಅವರನ್ನು ತೆರೆ ಮೇಲೆ ವೀಕ್ಷಿಸಿ ಸಾಕ್ಷಿಯಾಗುವ ಸಮಯವಿದು, ಗಂಧದ ಗುಡಿ ಚಿತ್ರಕ್ಕೆ ಶುಭವಾಗಲಿ, ಇದೊಂದು ಚಿತ್ರವಲ್ಲ ಅನುಭವ ಎಂದು ಗಂಧದಗುಡಿ ಚಿತ್ರದ ಪೋಸ್ಟರ್ ಹಂಚಿಕೊಂಡು ಬರೆದುಕೊಂಡಿದ್ದಾರೆ.

ವಿಶ್ ಮಾಡಿದ ಸುದೀಪ್
ಗಂಧದ ಗುಡಿ ಚಿತ್ರಕ್ಕೆ ವಿಶ್ ಮಾಡಿದ ಸೆಲೆಬ್ರಿಟಿಗಳ ಪಟ್ಟಿಗೆ ಕಿಚ್ಚ ಸುದೀಪ್ ಕೂಡ ಸೇರಿಕೊಂಡಿದ್ದಾರೆ. ಪುನೀತ್ ಕುಟುಂಬ ಹಾಗೂ ಗಂಧದ ಗುಡಿ ಚಿತ್ರತಂಡಕ್ಕೆ ಹೃದಯಪೂರ್ವಕ ಧನ್ಯವಾದಗಳು, ಗಂಧದ ಗುಡಿ ಚಿತ್ರ ಅಪ್ಪು ರೀತಿಯೇ ಪ್ರಜ್ವಲಿಸಲಿ. ಅಶ್ವಿನಿ ಪುನೀತ್ ರಾಜ್ಕುಮಾರ್ ಅವರಿಗೆ ಶುಭವಾಗಲಿ, ನೀವು ಗಂಧದ ಗುಡಿ ಜತೆ ನಿಂತಿದ್ದೀರಿ, ಅಪ್ಪು ಅಭಿಮಾನಿಗಳೇ ಚಿತ್ರಮಂದಿರಕ್ಕೆ ತೆರಳಿ ಅಪ್ಪುವನ್ನು ಅಪ್ಪಿಕೊಳ್ಳಿ ಎಂದು ಬರೆದುಕೊಂಡಿದ್ದಾರೆ ಸುದೀಪ್.


Click it and Unblock the Notifications











