ಕೆ.ಎಸ್.ಅಶ್ವಥ್ ಪುತ್ರನ ಕಣ್ಣೀರು ಒರೆಸಲು ಮುಂದಾದ ಕನ್ನಡ ಚಿತ್ರರಂಗ
ಹಿರಿಯ ನಟ ಕೆ.ಎಸ್.ಅಶ್ವಥ್ ಅವರ ಪುತ್ರ ಶಂಕರ್ ಅಶ್ವಥ್ ಸಿನಿಮಾ ಅವಕಾಶ ಇಲ್ಲದೆ ಉಬರ್ ಕ್ಯಾಬ್ ಒಡಿಸುತ್ತಿದ್ದಾರೆ. ಶಂಕರ್ ಅವರ ಸ್ವಾಭಿಮಾನದ ಬಗ್ಗೆ ಈಗಾಗಲೇ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾರಾ ಗೋವಿಂದು, ಹಿರಿಯ ನಟ ಡಿಂಗ್ರಿ ನಾಗರಾಜ್, ಸತ್ಯಜಿತ್ ಸೇರಿದಂತೆ ಹಲವರು ಪ್ರಶಂಸೆ ವ್ಯಕ್ತಪಡಿಸಿದ್ದರು. ಕನ್ನಡದ ಹಿರಿಯ ನಟರ ಮಗನ ಆ ಸ್ಥಿತಿಯನ್ನು 'ಫಿಲ್ಮಿಬೀಟ್ ಕನ್ನಡ' ಸೇರಿದಂತೆ ಅನೇಕ ಮಾಧ್ಯಮಗಳು ವರದಿ ಮಾಡಿದ್ದು, ಇದೀಗ ಈ ಸುದ್ದಿ ತಿಳಿದ ಬಳಿಕ ಕನ್ನಡ ಚಿತ್ರರಂಗದ ಕೆಲವರು ಇವರ ಸಹಾಯಕ್ಕೆ ಮುಂದಾಗಿದೆ.
ನಟ ಹಾಗೂ 'ಬಿಗ್ ಬಾಸ್ ಸೀಸನ್ 4'ರ ವಿಜೇತ ಪ್ರಥಮ್ ಮತ್ತು ನಿರ್ದೇಶಕ ಪ್ರಶಾಂತ್ ರಾಜ್ ಶಂಕರ್ ಅಶ್ವಥ್ ಅವರ ಕಣ್ಣೀರು ಬರೆಸಿದ್ದಾರೆ. ಪ್ರಥಮ್ ತಮ್ಮ ಮುಂದಿನ ಸಿನಿಮಾ 'ಬಿಲ್ಡಪ್' ಚಿತ್ರದಲ್ಲಿ ಶಂಕರ್ ಅಶ್ವಥ್ ಅವರಿಗೆ ಅವಕಾಶ ನೀಡಿದ್ದಾರೆ. ಶಂಕರ್ ಅಶ್ವಥ್ ಅವರ ನಿವಾಸಕ್ಕೆ ಬಂದು ಅವರ ಬಳಿ ಕಾಲ್ ಶೀಟ್ ಪಡೆದಿದ್ದಾರೆ. ಈ ವಿಷಯವನ್ನು ಪ್ರಥಮ್ ತಮ್ಮ ಪೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇನ್ನು 'ಲವ್ ಗುರು' ಖ್ಯಾತಿಯ ನಿರ್ದೇಶಕ ಪ್ರಶಾಂತ್ ರಾಜ್ ಶಂಕರ್ ಅಶ್ವಥ್ ನೋವಿಗೆ ಸ್ಪಂದಿಸಿದ್ದಾರೆ. ಪ್ರಶಾಂತ್ 'ಆರೆಂಜ್' ಎಂಬ ತಮ್ಮ ಮುಂದಿನ ಚಿತ್ರವನ್ನು ನಟ ಗಣೇಶ್ ಜೊತೆ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಶಂಕರ್ ಅಶ್ವಥ್ ಅವರಿಗೆ ಒಂದು ಪಾತ್ರ ನೀಡಲು ಅವರು ಮುಂದಾಗಿದ್ದಾರೆ. ಜೊತೆಗೆ ಅವರ ಮುಂದಿನ ಎಲ್ಲ ಚಿತ್ರಗಳಲ್ಲಿಯೂ ಅವರಿಗೆ ಅವಕಾಶ ನೀಡುವುದಾಗಿ ಹೇಳಿದ್ದಾರೆ. ಪ್ರಶಾಂತ್ ರಾಜ್ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ.

ಅಂದಹಾಗೆ, ಶಂಕರ್ ಅಶ್ವಥ್ ಅವರು ''ಜನವರಿ 19ಕ್ಕೆ ನನ್ನ ತಂದೆ ಕೆ.ಎಸ್.ಅಶ್ವಥ್ ಅವರ 8ನೇ ವರ್ಷದ ಶ್ರಾದ್ಧವಿದೆ. ನಮ್ಮ ಪದ್ಧತಿ ಪ್ರಕಾರ ಈ ಕಾರ್ಯ ಮಾಡುವಾಗ ಯಾವುದೇ ಸಾಲ ಮಾಡಬಾರದು. ಯಾವುದನ್ನೂ ಮಾರಿ ಕಾರ್ಯ ಮಾಡುವಂತಿಲ್ಲ. ಕಷ್ಟಪಟ್ಟು ದುಡಿದು, ಅದನ್ನು ಶೇಖರಿಸಿ ಆ ಕಾರ್ಯ ಮಾಡಬೇಕು. ಒಂದೂವರೆ ತಿಂಗಳಿನಿಂದ ಯಾವುದೇ ಸಂಪಾದನೆ ಇಲ್ಲದೆ ಮನೆಯಲ್ಲೇ ಕುಳಿತಿದ್ದೆ. ಈ ವೇಳೆ ಉಬರ್ ಕ್ಯಾಬ್ ಓಡಿಸಲು ನಿರ್ಧರಿಸಿದೆ'' ಎಂದು ತಿಳಿಸಿದ್ದರು.


Click it and Unblock the Notifications











