ಪ್ರಿಯಾಮಣಿ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿದೆಯಾ ಈ ಚಿತ್ರತಂಡ.!
ಮದುವೆ ಬಳಿಕ ಪ್ರಿಯಾಮಣಿ ಕನ್ನಡದಲ್ಲಿ 'ನನ್ನ ಪ್ರಕಾರ' ಮತ್ತು 'ಧ್ವಜ' ಚಿತ್ರಗಳನ್ನ ಮಾಡುತ್ತಿದ್ದಾರೆ. ಇದರ ಜೊತೆ ತಮಿಳಿನ ಒಂದು ಸಿನಿಮಾಗೆ ಪ್ರಿಯಾ ಸಹಿ ಮಾಡಿದ್ದಾರೆ ಎನ್ನಲಾಗಿದೆ. ಇನ್ನು ತೆಲುಗಿನಲ್ಲಿ 2013ರಲ್ಲೊಂದು, 2016ರಲ್ಲಿ ಇನ್ನೊಂದು ಸಿನಿಮಾದಲ್ಲಿ ಕೊನೆಯದಾಗಿ ಅಭಿನಯಿಸಿದ್ದಾರೆ.
ಅರೇ ಇಷ್ಟೊಂದು ಮಾಹಿತಿ ಯಾಕೆ ಅಂತ ಯೋಚನೆನಾ. ವಿಷ್ಯ ಇದೆ. ಇತ್ತೀಚಿಗಷ್ಟೆ ತೆಲುಗಿನಲ್ಲಿ 'ಅಂಗುಲಿಕ' ಎಂಬ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಈ ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕರ ವಿರುದ್ಧ ನಟಿ ಪ್ರಿಯಾಮಣಿ ದೂರು ನೀಡಿದ್ದಾರೆ.
ನಾನು ಈ ಸಿನಿಮಾದಲ್ಲಿ ನಟಿಸಿಲ್ಲ. ಆದ್ರೂ, ಚಿತ್ರದ ಟೀಸರ್ ನಲ್ಲಿ ನನ್ನ ಪೋಟೋ ಬಳಸಲಾಗಿದೆ ಎಂದು ಆರೋಪ ಮಾಡಿದ್ದಾರೆ. ಈ ಸಂಬಂಧ ಹೈದ್ರಾಬಾದ್ ಕಲಾವಿದರ ಸಂಘದಲ್ಲಿ ದೂರು ಕೂಡ ದಾಖಲಾಗಿದೆ. ಅಷ್ಟಕ್ಕೂ, ಏನಿದು ಪ್ರಿಯಾಮಣಿ ಮತ್ತು 'ಅಂಗುಲಿಕ' ಚಿತ್ರದ ವಿವಾದ ಎಂದು ಪೂರ್ತಿ ತಿಳಿಯಲು ಮುಂದೆ ಓದಿ....

'ಅಂಗುಲಿಕ' ಚಿತ್ರದಲ್ಲಿ ಪ್ರಿಯಾಮಣಿ ನಟಿಸಿಲ್ಲ.!
ದೂರಿನ ಅನ್ವಯ 'ಅಂಗುಲಿಕ' ಚಿತ್ರದಲ್ಲಿ ಪ್ರಿಯಾಮಣಿ ನಟಿಸಿಲ್ಲ. ಆದ್ರೆ, ಪೋಸ್ಟರ್ ನಲ್ಲಿ ಪ್ರಿಯಾ ಫೋಟೋ ಬಳಸಲಾಗಿದೆ. ಇದು ಯಾಕೆ ಎಂಬ ಅನುಮಾನ, ಪ್ರಶ್ನೆ, ಕುತೂಹಲ ಈಗ ಎಲ್ಲರನ್ನ ಕಾಡಿದೆ. ಇದನ್ನ ಪ್ರಶ್ನಿಸಿ ಪ್ರಿಯಾ ಕಲಾವಿದರ ಸಂಘದಲ್ಲಿ ದೂರು ದಾಖಲಿಸಿದ್ದಾರೆ.

2013ರಲ್ಲಿ ಆರಂಭವಾದ ಸಿನಿಮಾ
ಅಂದ್ಹಾಗೆ, 'ಅಂಗುಲಿಕ' 2013ರಲ್ಲಿ ಆರಂಭವಾದ ಸಿನಿಮಾ. ಈ ಸಿನಿಮಾ ಸೆಟ್ಟೇರಿದಾಗ ಈ ಚಿತ್ರಕ್ಕೆ ಪ್ರಿಯಾಮಣಿ ನಾಯಕಿಯಾಗಿದ್ದರು. ಅರ್ಥಾಥ್ ಈ ಸಿನಿಮಾಗೆ ಮೊದಲು ನಾಯಕಿಯಾಗಿದ್ದವರು ಪ್ರಿಯಾಮಣಿ. ಚಿತ್ರದ ಮುಹೂರ್ತದಲ್ಲಿ ಪ್ರಿಯಾಮಣಿ ಭಾಗಿಯಾಗಿದ್ದರು. ಶೂಟಿಂಗ್ ನಲ್ಲಿ ಭಾಗವಹಿಸಿದ್ದರು.

ಸಿನಿಮಾ ಕೈಬಿಟ್ಟ ಪ್ರಿಯಾಮಣಿ
ಈ ಮಧ್ಯೆ ಅದೇನ್ ಆಯ್ತೋ ಗೊತ್ತಿಲ್ಲ. ಈ ಚಿತ್ರದಿಂದ ಪ್ರಿಯಾಮಣಿ ಹೊರಬಂದರು. ನಂತರ ಪ್ರಿಯಾಮಣಿ ಜಾಗಕ್ಕೆ ಬೇರೆ ನಟಿಯನ್ನ ಕರೆತಂದು 'ಅಂಗುಲಿಕ' ಸಿನಿಮಾದವರು ಚಿತ್ರೀಕರಣ ಮುಗಿಸಿದ್ದಾರೆ. ಸತತ ಐದು ವರ್ಷಗಳ ನಂತರ ಈಗ ಬಿಡುಗಡೆಗೆ ಸಜ್ಜಾಗಿದ್ದು, ಇತ್ತೀಚಿಗಷ್ಟೆ ಟೀಸರ್ ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ.

ಪ್ರಚಾರಕ್ಕೆ ಬಳಸಿಕೊಂಡ್ರಾ.!
ಸಿನಿಮಾ ಆರಂಭದಲ್ಲಿ ಮಾಡಿದ್ದನ್ನ ಈಗ ಸಿನಿಮಾ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದೆಯಾ ಚಿತ್ರತಂಡ ಎಂಬ ಅನುಮಾನ ಕಾಡುತ್ತಿದೆ. ಇಲ್ಲವಾದರೇ ಸಿನಿಮಾದಿಂದ ಹಿಂದೆ ಸರಿದಿರುವ ಪ್ರಿಯಾಮಣಿಯ ಫೋಟೋಗಳನ್ನ ಯಾಕೆ ಮೋಷನ್ ಪೋಸ್ಟರ್ ನಲ್ಲಿ ಬಳಸಬೇಕಿತ್ತು.? ಎಂಬ ಪ್ರಶ್ನೆ ಈಗ ಎದ್ದಿದೆ.

ಪ್ರಿಯಾಮಣಿ ಇಲ್ಲ ಅಂದ್ರು ಹೆಸರು ದುರ್ಬಳಕೆ.!
ಸ್ವತ ಪ್ರಿಯಾಮಣಿ ಅವರೇ ಈ ಚಿತ್ರದಲ್ಲಿ ನಟಿಸಿಲ್ಲ ಎನ್ನುತ್ತಿದ್ದಾರೆ. ಆದ್ರೆ, ಚಿತ್ರತಂಡ ಮಾತ್ರ ಪೋಸ್ಟರ್, ಟ್ರೈಲರ್, ಎಲ್ಲರದಲ್ಲಿಯೂ ಪ್ರಿಯಾಮಣಿ ನಾಯಕಿ ಎಂದು ಪ್ರಚಾರ ಮಾಡುತ್ತಿದೆ. ಈಗ ಕಲಾವಿದರ ಸಂಘದ ಮೊರೆಹೋಗಿರುವ ಪ್ರಿಯಾಮಣಿ ನಷ್ಟ ಪರಿಹಾರ ಕೇಳುತ್ತಿದ್ದಾರೆ.

'ಅಂಗುಲಿಕ' ಚಿತ್ರದ ಬಗ್ಗೆ ...
ಪ್ರೇಮ್ ಆರ್ಯನ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ತೂಮುಲ ಕೋಟಿ ಮತ್ತು ರಾಂಬಾಬು ಜಂಟಿ ನಿರ್ಮಾಣ ಮಾಡಿದ್ದಾರೆ. ಅರ್ಜನ್ ಭಾಜ್ವ ನಾಯಕನಾಗಿದ್ದು, ಹೊಸ ನಾಯಕಿ ಯಾರು ಎಂಬುದು ಬಹಿರಂಗಪಡಿಸಿಲ್ಲ.


Click it and Unblock the Notifications











