ಏನಾಶ್ಚರ್ಯ! ಕನ್ನಡ ಪರ ಹೋರಾಟಗಾರರೇ ತಮಿಳರಿಗೆ ನೀರು ಹಂಚಿದ್ದಾರೆ!
Recommended Video

ನಾಡು-ನುಡಿ-ಜಲ ವಿಷಯ ಬಂದಾಗ ಸದಾ ಕನ್ನಡ ಪರ, ಕನ್ನಡಿಗರ ಪರ ನಿಲ್ಲುವ ಹೋರಾಟಗಾರರೇ ಇಂದು ತಮಿಳು ನಟ ಸಿಂಬು ಮಾತಿಗೆ ತಲೆಬಾಗಿದ್ದಾರೆ. ''ರಕ್ತ ಕೊಟ್ಟೇವು, ನೀರು ಕೊಡೆವು'' ಎಂದು ಬೀದಿಗಿಳಿದು ಹೋರಾಟ ಮಾಡುತ್ತಿದ್ದವರೇ ಇಂದು ತಮಿಳರಿಗೆ ಬಾಟಲ್ ಗಟ್ಟಲೆ ನೀರು ಹಂಚ್ತಿದ್ದಾರೆ. ಇಂತಹ ದೊಡ್ಡ ಪರಿವರ್ತನೆಯ ಕಾರಣಕರ್ತ ತಮಿಳು ನಟ ಸಿಂಬು.!
ಹೋರಾಟದಿಂದ ಗೆಲ್ಲಲು ಸಾಧ್ಯವಾಗದ್ದನ್ನು, ಪ್ರೀತಿಯಿಂದ ಪಡೆಯಲು ಮುಂದಾಗಿರುವ ಸಿಂಬು ನಡೆ ಕನ್ನಡಿಗರಿಗೆ ಮೆಚ್ಚುಗೆ ಆಗಿದೆ. ''ಕನ್ನಡಿಗರು ಹಾಗೂ ತಮಿಳರು ಎನ್ನುವುದಕ್ಕಿಂತ ನಾವೆಲ್ಲ ಭಾರತೀಯರು, ನಾವೆಲ್ಲರೂ ಮನುಷ್ಯರು'' ಎಂದಿರುವ ಸಿಂಬುಗೆ ಕನ್ನಡಿಗರ ಬೆಂಬಲ ವ್ಯಕ್ತವಾಗಿದೆ. ಆಶ್ಚರ್ಯ ಅಂದ್ರೆ, ಕನ್ನಡ ಪರ ಹೋರಾಟಗಾರರೂ ಕೂಡ ಸಿಂಬು ಕರೆಗೆ ಓಗೊಟ್ಟಿದ್ದಾರೆ.

ತಮಿಳುನಾಡಿಗೆ ನೀರು ಕೊಡಲು ಸಮ್ಮತಿ ಸೂಚಿಸುವಂತೆ ಕನ್ನಡಿಗರು ಕೈಯಲ್ಲಿ ನೀರು ತುಂಬಿದ ಲೋಟ ಹಿಡಿದು ವಿಡಿಯೋ ಮಾಡುವಂತೆ ತಮಿಳು ನಟ ಸಿಂಬು ಕೋರಿದ್ದರು.
ಸಿಂಬು ಮಾತಿಗೆ ಜೈಕಾರ ಕೂಗುತ್ತಾ ಕೆಲ ಕನ್ನಡಿಗರು ವಿಡಿಯೋ ಮಾಡುತ್ತಿದ್ದರೆ, ಇತ್ತ ಕನ್ನಡಿಗರ ಪರ ಹೋರಾಟ ಮಾಡುವ 'ಕರ್ನಾಟಕ ಸಂರಕ್ಷಣಾ ವೇದಿಕೆ'ಯ ಕಾರ್ಯಕರ್ತರು ತಮಿಳರಿಗೆ ಬಾಟಲ್ ಗಟ್ಟಲೆ ನೀರು ಹಂಚಿ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.

ಇನ್ನೂ, ಕೆಲವು ಕಡೆ ತಮಿಳರಿಗೆ ನೀರಿನ ಜೊತೆಗೆ ಮಜ್ಜಿಗೆಯನ್ನೂ ನೀಡಲಾಗಿದೆ. ಎಲ್ಲೆಲ್ಲೂ ತಮಿಳರು ಹಾಗೂ ಕನ್ನಡಿಗರು ಒಗ್ಗಟ್ಟಿನ ಮಂತ್ರ ಜಪ್ಪಿಸುತ್ತಿದ್ದಾರೆ. ದಶಕಗಳಿಂದ ನೀರಿಗಾಗಿ ಕಿತ್ತಾಡುತ್ತಿದ್ದ ಜನರ ಮಧ್ಯೆ ಬಾಂಧವ್ಯದ ಬೆಸುಗೆ ಮೂಡಲು ಆರಂಭಿಸಿದೆ. ಇದಕ್ಕೆ ಖುಷಿ ಪಡಬೇಕು ಅಲ್ಲವೇ.?


Click it and Unblock the Notifications











