'ಸಿಎಂ ಸ್ಪಂದಿಸಿದ್ದಾರೆ' ಎಂದ ಫಿಲಂ ಛೇಂಬರ್, 'ಸುಧಾಕರ್ ಖಾತೆ ಬದಲಿಸಿ' ಎಂದ ಕೆ.ಮಂಜು
ಚಿತ್ರಮಂದಿರಗಳ ಮೇಲೆ ನಿರ್ಬಂಧ ಹೇರಿರುವ ವಿಷಯ ಇಡೀಯ ಚಿತ್ರರಂಗವನ್ನು ಆತಂಕಕ್ಕೆ ನೂಕಿದೆ. ಹಲವು ನಿರ್ಮಾಪಕರು, ನಟ-ನಟಿ, ನಿರ್ದೇಶಕರು ತೀವ್ರ ಕಳವಳವನ್ನು ವ್ಯಕ್ತಪಡಿಸಿದ್ದಾರೆ.
ಈ ನಡುವೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಜಯರಾಜ್ ಅವರು ಇಂದು ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿ 'ಚಿತ್ರಮಂದಿರದ ಮೇಲೆ ಹೇರಲಾಗಿರುವ ನಿರ್ಬಂಧವನ್ನು ಹಿಂಪಡೆಯಬೇಕು' ಎಂದು ಮನವಿ ಮಾಡಿ ಕೋರಿಕೆ ಪತ್ರವನ್ನು ನೀಡಿದ್ದಾರೆ.
ಸಿಎಂ ಜೊತೆ ಕೆಲ ಕಾಲ ಚರ್ಚೆ ನಡೆಸಿದ ನಿಯೋಗವು, ಚಿತ್ರಮಂದಿರಗಳು ಪೂರ್ಣ ಕಾರ್ಯನಿರ್ವಹಿಸಬೇಕಾದ ಅವಶ್ಯತೆಯ ಬಗ್ಗೆ ಯಡಿಯೂರಪ್ಪ ಅವರಿಗೆ ಮನದಟ್ಟು ಮಾಡಿದೆ. ಸಭೆಯ ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ಜಯರಾಜ್, 'ಸಿಎಂ ಅವರು ನಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ' ಎಂದಿದ್ದಾರೆ.

'ಕೊರೊನಾ ಪ್ರಕರಣಗಳು ತುಸು ಕಡಿಮೆ ಆಗುತ್ತಿದ್ದಂತೆಯೇ ಪ್ರಸ್ತುತ ಮಾಡಲಾಗಿರುವ ಆದೇಶವನ್ನು ಪುನರ್ ಪರಿಶೀಲನೆ ನಡೆಸುವುದಾಗಿ ಸಿಎಂ ಭರವಸೆ ನೀಡಿದ್ದಾರೆ' ಎಂದು ಜಯರಾಜ್ ಹೇಳಿದ್ದಾರೆ.
ಈ ನಡುವೆ ಪ್ರತ್ಯೇಕ ಘಟನೆಯಲ್ಲಿ ಮಾತನಾಡಿರುವ ನಿರ್ಮಾಪಕ ಕೆ.ಮಂಜು, ಸಚಿವ ಸುಧಾಕರ್ ವಿರುದ್ಧ ಹರಿಹಾಯ್ದಿದ್ದಾರೆ.
'ಸುಧಾಕರ್ ಅವರು ಏಕಾಏಕಿ ನಿರ್ಣಯ ಜಾರಿ ಮಾಡಿದ್ದಾರೆ. ಇಲ್ಲಿ ಫಿಲಂ ಛೇಂಬರ್ ಇದೆ. ಸಿನಿಮಾಕ್ಕೆ ಸಂಬಂಧಿಸಿದ ವಾರ್ತಾ ಮತ್ತು ಪ್ರಸಾರ ಇಲಾಖೆ ಇದೆ. ಇವುಗಳನ್ನು ಪರಿಗಣನೆಗೆ ತೆಗೆದುಕೊಳ್ಳದೆ ಮೂಗಿನ ನೇರಕ್ಕೆ ನಿರ್ಣಯ ತೆಗೆದುಕೊಳ್ಳಲಾಗಿದೆ' ಎಂದಿದ್ದಾರೆ ಕೆ.ಮಂಜು.
'ಕಳೆದ ವಾರವಷ್ಟೆ ಸಿಎಂ ಅವರೇ ಟ್ವೀಟ್ ಮಾಡಿ ಚಿತ್ರಮಂದಿರಗಳ ಮೇಲೆ ನಿರ್ಬಂಧ ಇಲ್ಲ ಎಂದಿದ್ದಾರೆ. ಈಗ ಗುರುವಾರ ಸಿನಿಮಾ ಬಿಡುಗಡೆ ಆಗಿದೆ ಶುಕ್ರವಾರ ನಿರ್ಬಂಧ ಹೇರಿದ್ದಾರೆ. 80-100 ಕೋಟಿ ಹಾಕಿ ಸಿನಿಮಾ ಮಾಡಿದ ನಿರ್ಮಾಪಕನ ಕತೆ ಏನು? ಬೇರೆಯವರಾಗಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು' ಎಂದು ಆಕ್ರೋಶ ಹೊರಹಾಕಿದ್ದಾರೆ ಮಂಜು.
Recommended Video
'ಸುಧಾಕರ್ ಅವರು ಸಾಮಾನ್ಯದವರೇನಲ್ಲ ಅವರಿಗೆ ಎಲ್ಲ ಪರಿಸ್ಥಿತಿಗಳ ಅರಿವು ಇದೆ. ಆದರೂ ಸಹ ಆತುರದ ನಿರ್ಧಾರವನ್ನು ಅವರು ತೆಗೆದುಕೊಂಡಿದ್ದಾರೆ. ಅವರಿಗೆ ಸಿನಿಮಾದವರೆಂದರೆ ಸಿಟ್ಟಿದ್ದಹಾಗಿದೆ. ದಯವಿಟ್ಟು ಸಿಎಂ ಯಡಿಯೂರಪ್ಪ ಅವರು ಸುಧಾಕರ್ ಅವರ ಖಾತೆ ಬದಲಾವಣೆ ಮಾಡಬೇಕು' ಎಂದು ಕೆ.ಮಂಜು ಒತ್ತಾಯಿಸಿದ್ದಾರೆ.


Click it and Unblock the Notifications











