'ಕುರುಕ್ಷೇತ್ರ' ವಿವಾದದ ಬಗ್ಗೆ ಮಾತನಾಡಿದರು ನಿರ್ಮಾಪಕ ಮುನಿರತ್ನ!
ನಟ ದರ್ಶನ್ ಅವರ 'ಕುರುಕ್ಷೇತ್ರ' ಚಿತ್ರದ ಟ್ರೇಲರ್ ಹಾಗೂ ಹಾಡುಗಳ ನಿರೀಕ್ಷೆಯಲ್ಲಿ ಇದ್ದ ಅಭಿಮಾನಿಗಳ ಕಿವಿಗೆ ವಿವಾದದ ಸುದ್ದಿ ಬಂದಿತ್ತು. ಕೆಲ ದಿನಗಳಿಂದ 'ಕುರುಕ್ಷೇತ್ರ' ಸಿನಿಮಾದಲ್ಲಿ ವಿವಾದ ಆಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ಸಿನಿಮಾದಲ್ಲಿ ನಟ ನಿಖಿಲ್ ಕುಮಾರ್ ಅಭಿಮನ್ಯು ಪಾತ್ರವನ್ನು ಮಾಡಿದ್ದು, ಅವರ ಪಾತ್ರದ ಅವಧಿ ಹೆಚ್ಚಾಗಿದೆ. ಈ ಕಾರಣದಿಂದ ನಟ ದರ್ಶನ್ ಚಿತ್ರದ ಮೇಲೆ ಮುನಿಸಿಕೊಂಡಿದ್ದಾರೆ ಎಂಬ ಗುಸು ಗುಸು ಕೇಳಿ ಬಂದಿತ್ತು. ಆದರೆ, ಈ ವಿವಾದದ ಸುದ್ದಿ ಬಗ್ಗೆ ಇದೀಗ ಚಿತ್ರದ ನಿರ್ಮಾಪಕ ಹಾಗೂ ಆರ್ ಆರ್ ನಗರದ ಶಾಸಕರಾದ ಮುನಿರತ್ನ ಪ್ರತಿಕ್ರಿಯೆ ನೀಡಿದ್ದಾರೆ. ಮುಂದೆ ಓದಿ....

ವಿವಾದ ಆಗಿರುವ ಸುದ್ದಿ ಸುಳ್ಳು
''ಕುರುಕ್ಷೇತ್ರ' ಸಿನಿಮಾ ಕಾಲ್ಪನಿಕ ಕಥೆ ಅಲ್ಲ, ಇದು ಮಹಾಭಾರತದ ಕಥೆ. ಹೀಗಿದ್ದ ಮೇಲೆ ಇಲ್ಲಿ ಯಾರ ಪಾತ್ರವನ್ನು ಹೆಚ್ಚಿಸಲು, ಯಾರ ಪಾತ್ರವನ್ನು ಕಡಿಮೆ ಮಾಡಲು ಸಾಧ್ಯವಿಲ್ಲ. ವಿವಾದ ಆಗಿರುವ ಸುದ್ದಿ ಸುಳ್ಳು. ದರ್ಶನ್ ಚಿತ್ರದ ಬಗ್ಗೆ ಮುನಿಸಿಕೊಂಡಿಲ್ಲ. ಇದು ಅವರ 50ನೇ ಸಿನಿಮಾ.'' - ಮುನಿರತ್ನ, ನಿರ್ಮಾಪಕ

ಯಾವುದೇ ಪಾತ್ರವನ್ನು ಬೇಕೆಂದು ಹೆಚ್ಚು ಮಾಡಿಲ್ಲ
''ಜಾಗ್ವರ್' ಸಿನಿಮಾದಲ್ಲಿ ನಿಖಿಲ್ ಕುಮಾರ್ ಅವರ ನಟನೆಯನ್ನು ನೋಡಿ ಇಷ್ಟ ಪಟ್ಟು ಈ ಚಿತ್ರಕ್ಕೆ ಆಯ್ಕೆ ಮಾಡಿದ್ವಿ. ಅದೇ ರೀತಿ ದರ್ಶನ್ ಹಾಗೂ ನಿಖಿಲ್ ಕುಮಾರ್ ಅವರಿಗೆ ಕಥೆ ಹೇಳಿದ್ದಂತೆ ಶೂಟಿಂಗ್ ಮಾಡಲಾಗಿದೆ. ಯಾವುದೇ ಪಾತ್ರವನ್ನು ಬೇಕೆಂದು ಹೆಚ್ಚು ಮಾಡಿಲ್ಲ. ಆಗ ಎಷ್ಟಿತ್ತೋ ಈಗಲೂ ಹಾಗೇ ಇದೆ.'' - ಮುನಿರತ್ನ, ನಿರ್ಮಾಪಕ

ಅಭಿಮನ್ಯು ಸಾಯುವ ಪಾತ್ರ
''ಅಭಿಮನ್ಯು ಸಾಯುವ ಪಾತ್ರ. ಹಾಗಿದ್ದರೂ ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಮಗನನ್ನು ಈ ಪಾತ್ರಕ್ಕೆ ನಟಸಲು ಕಳುಹಿಸಿದ್ದರು. ಅವರು ಚಿತ್ರರಂಗವನ್ನು ತುಂಬ ಪ್ರೀತಿಸುತ್ತಾರೆ. ಅವರ ಬಗ್ಗೆ ನನಗೆ ಗೌರವ ಇದೆ. ಹಾಗೆಂದ ಮಾತ್ರಕ್ಕೆ ಚಿತ್ರದಲ್ಲಿ ನಿಖಿಲ್ ಕುಮಾರ್ ಪಾತ್ರವನ್ನು ಜಾಸ್ತಿ ಮಾಡಿಲ್ಲ.'' - ಮುನಿರತ್ನ, ನಿರ್ಮಾಪಕ

ನಿಖಿಲ್ ಕುಮಾರ್ ಪ್ರತಿಕ್ರಿಯೆ
ವಿವಾದ ಸುದ್ದಿ ಬಗ್ಗೆ ನಟ ನಿಖಿಲ್ ಕುಮಾರ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ''ಕುರುಕ್ಷೇತ್ರ' ಸಿನಿಮಾ ಬಗ್ಗೆ ಹಬ್ಬಿರುವ ಸುದ್ದಿ ಈಗ ಗೊತ್ತಾಗಿದೆ. ಚಿತ್ರದಲ್ಲಿ ಎಲ್ಲಾ ಪಾತ್ರಗಳಿಗೂ ಅದರದ್ದೇ ಆದ ಪ್ರಾಮುಖ್ಯತೆಯನ್ನೂ ನೀಡಲಾಗಿದ್ದು, ಯಾವುದೇ ರೀತಿಯ ಸಮಸ್ಯೆಗಳಿಲ್ಲ. ಸಿನಿಮಾದ ಚಿತ್ರೀಕರಣ ಕಂಪ್ಲೀಟ್ ಆಗಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ನಾನು ಡಬ್ಬಿಂಗ್ ಮಾಡಿಲ್ಲ. ಅವರು ಕರೆದಾಗ ಡಬ್ಬಿಂಗ್ ಮಾಡಿ ಬರುತ್ತೇನೆ.'' ಎಂದು ನಿಖಿಲ್ ತಿಳಿಸಿದ್ದಾರೆ.

ವಿವಾದ ಹಿನ್ನಲೆ
'ಕುರುಕ್ಷೇತ್ರ' ಚಿತ್ರದಲ್ಲಿ ವಿವಾದ ಆಗಿದೆ ಎಂದು ಕೆಲ ದಿನಗಳ ಹಿಂದೆ ಮಾಧ್ಯಮದಲ್ಲಿ ವರದಿಯಾಗಿತ್ತು. ಚಿತ್ರದಲ್ಲಿ ನಟ ನಿಖಿಲ್ ಕುಮಾರ್ ಪಾತ್ರವನ್ನು ಹೆಚ್ಚು ಮಾಡಿದ್ದು, ದರ್ಶನ್ ಈ ಬಗ್ಗೆ ಅಸಮಾಧಾನಗೊಂಡಿದ್ದಾರೆ ಎಂದು ಸುದ್ದಿಯಾಗಿತ್ತು. ಅಲ್ಲದೆ, ದರ್ಶನ್ ತಮ್ಮ 50ನೇ ಸಿನಿಮಾವಾಗಿ 'ಯಜಮಾನ' ಚಿತ್ರವನ್ನು ಘೋಷಣೆ ಮಾಡುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಈಗ ಚಿತ್ರದ ನಿರ್ಮಾಪಕ ಮುನಿರತ್ನ ಹಾಗೂ ನಟ ನಿಖಿಲ್ ಕುಮಾರ್ ವಿವಾದದ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.


Click it and Unblock the Notifications











