ಡ್ರಗ್ಸ್ ವ್ಯೂಹದಲ್ಲಿ ಸಿಲುಕಿದ 'ಕೆಂಪೇಗೌಡ' ನಿರ್ಮಾಪಕ: ವಿಚಾರಣೆಗೆ ಹಾಜರು
ಡ್ರಗ್ಸ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೆಂಪೇಗೌಡ ಚಿತ್ರದ ನಿರ್ಮಾಪಕ ಶಂಕರ್ ಗೌಡ ನಿವಾಸ ಹಾಗೂ ಕಚೇರಿ ಮೇಲೆ ಗೋವಿಂದಪುರ ಪೊಲೀಸರು ದಾಳಿ ನಡೆಸಿ ಖಾಸಗಿ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದರು.
ಈ ಕೇಸ್ ಸಂಬಂಧ ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಹಾಜರಾಗಲು ಪೊಲೀಸರು ನೋಟಿಸ್ ನೀಡಿದ್ದರು. ಪೊಲೀಸರ ಸೂಚನೆ ಹಿನ್ನೆಲೆ ಇನ್ಸ್ ಪೆಕ್ಟರ್ ಪ್ರಕಾಶ್, ಎಸಿಪಿ ಸಕ್ರಿ ಅವರ ಮುಂದೆ ಶಂಕರ್ ಗೌಡ ವಿಚಾರಣೆ ಎದುರಿಸಿದ್ದಾರೆ.
ಸುಮಾರು ಎರಡೂವರೆ ಗಂಟೆಗಳಿಂದ ನಿರಂತರವಾಗಿ ಶಂಕರ್ ಗೌಡ ಅವರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಫೆಬ್ರವರಿ 8 ರಂದು ರಾತ್ರಿ ಸಂಜಯ್ ನಗರದ ಕಚೇರಿ ಮೇಲೆ ದಾಳಿ ಮಾಡಲಾಗಿತ್ತು. ಈ ವೇಳೆ ಶಂಕರ್ ಗೌಡ ಅವರ ಮೊಬೈಲ್, ಪೆನ್ ಡ್ರೈವ್, ಲ್ಯಾಪ್ ಟಾಪ್ ವಶಕ್ಕೆ ಪಡೆದುಕೊಂಡಿದ್ದರು.
ಅಂದ್ಹಾಗೆ, ಡ್ರಗ್ಸ್ ಪ್ರಕರಣದಲ್ಲಿ ಬಿಗ್ ಬಾಸ್ ಸ್ಪರ್ಧಿ ಮಸ್ತಾನ್ ಅವರನ್ನು ಗೋವಿಂದಪುರ ಪೊಲೀಸರು ಬಂಧಿಸಿದ್ದರು. ಮಸ್ತಾನ್ ವಿಚಾರಣೆ ವೇಳೆ ಶಂಕರ್ ಗೌಡನ ಹೆಸರು ಬಾಯಿ ಬಿಟ್ಟಿದ್ದ. ಈ ಹಿನ್ನೆಲೆ ಶಂಕರ್ ಗೌಡ ಅವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದೆ.
ಈ ಹಿಂದೆ ಡ್ರಗ್ಸ್ ಜಾಲದಲ್ಲಿ ನಟಿ ರಾಗಿಣಿ, ಸಂಜನಾ ಅವರನ್ನು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿತ್ತು. ಬಳಿಕ ಡ್ರಗ್ಸ್ ತನಿಖೆ ತಣ್ಣಗಾಯಿತು ಎಂದು ಹೇಳಲಾಗುತ್ತಿತ್ತು. ಆದ್ರೆ, ಬೆಂಗಳೂರು ಪೊಲೀಸರು ಸ್ಯಾಂಡಲ್ವುಡ್ ಬೇಟೆ ಇನ್ನು ನಿಲ್ಲಿಸಿಲ್ಲ ಎನ್ನುವುದು ಶಂಕರ್ ಗೌಡ ಹಾಗೂ ಮಸ್ತಾನ್ ಘಟನೆಯಿಂದ ಗೊತ್ತಾಗುತ್ತಿದೆ.


Click it and Unblock the Notifications











