ಮಾಸ್ಟರ್ ಕಿಶನ್ ತಂದೆ ಶ್ರೀಕಾಂತ್ ಮೌನಕ್ಕೆ ಶರಣು!

ಯಾವತ್ತೂ ಪಬ್ಲಿಟಿಸಿ ಬಯಸುತ್ತಿದ್ದ ಶ್ರೀಕಾಂತ್ ಈಗ ಪ್ರಚಾರದಿಂದ ದೂರವಾಗಿದ್ದಾರೆ, ಮೌನಕ್ಕೆ ಶರಣಾಗಿದ್ದಾರೆ. 'ಅರೇ ಇದ್ದಕ್ಕಿದ್ದಂತೆ ಶ್ರೀಕಾಂತ್ ಅವರಿಗೇನಾಯ್ತು?' ಈ ಪ್ರಶ್ನೆ ಗಾಂಧಿನಗರದ ಒಂದು ಮೂಲೆಯ ಗಲ್ಲಿಯಲ್ಲಿ ಕೇಳಿ ಬರುತ್ತಿದೆ. 'ಆಗಿದ್ದು ಏನೂ ಇಲ್ಲ. ಇದೂ ಇನ್ನೊಂದು ರೀತಿಯ ಪ್ರಚಾರ ತಂತ್ರ' ಎಂಬ ಉತ್ತರ ಇನ್ನೊಂದು ಮೂಲೆಯ ಗಲ್ಲಿಯಿಂದ ಕೇಳಿ ಬರುತ್ತಿದೆ ಅಷ್ಟೇ!
'ಕೇರ್ ಆಫ್ ಫುಟ್ ಪಾತ್' ಚಿತ್ರದ ಮೂಲಕ ವಿಶ್ವದ ಅತ್ಯಂತ ಕಿರಿಯ ನಿರ್ದೇಶಕ ಎಂಬ ಕೀರ್ತಿಗೆ ಪಾತ್ರರಾಗಿರುವ ಕಿಶನ್ ತಂದೆ ಶ್ರೀಕಾಂತ್, ತಮ್ಮ ಪುತ್ರನನ್ನೇ ನಾಯರನ್ನಾಗಿಸಿ 'ಟೀನೇಜ್' ಎಂಬ ಚಿತ್ರವನ್ನು ನಿರ್ಮಿಸಿದ್ದಾರೆ. ಆದರೆ ಈ ಬಾರಿ ಸದ್ದು-ಸುದ್ದಿಯಿಲ್ಲದೇ ಈ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭವನ್ನು ಮಾಡಿ ಮುಗಿಸಿದ್ದಾರೆ. ಈ ಹೊಸ ಪ್ರಯೋಗವೂ ಕೂಡ ವಿಭನ್ನ ಪ್ರಚಾರ ತಂತ್ರ ಎಂಬುದು ಇದೀಗ ಬಯಲಾಗಿದೆ.
ನೇರವಾಗಿ ಮಾರುಕಟ್ಟೆಗೆ ಸಿಡಿಗಳನ್ನು ಬಿಡುಗಡೆ ಮಾಡಿ, ಎಫ್ ಎಂಗಳಲ್ಲಿ ಹಾಡು ಪ್ರಸಾರವಾಗುವಂತೆ ನೋಡಿಕೊಂಡಿದ್ದಾರೆ ಶ್ರೀಕಾಂತ್. ಎಫ್ ಎಂಗಳಲ್ಲಿ ಹಾಡು ಕೇಳಿದ ಸಿನಿಪ್ರೇಕ್ಷಕರ ಪ್ರತಿಕ್ರಿಯೆಗೆ ಕಾದಿರುವ ಅವರು, "ಸದ್ಯಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿದೆ" ಎಂದಿದ್ದಾರೆ. ಟೀನೇಜ್ ಚಿತ್ರದ ಹಾಡುಗಳು ಎಫ್ ಎಂಗಳಲ್ಲಿ ಮೂರನೇ ಸ್ಥಾನದಲ್ಲಿದೆಯಂತೆ.
ಸಿದ್ಧಾರ್ಥ್ ವಿಪಿನ್ ಎಂಬವರು ಈ ಟೀನೇಜ್ ಚಿತ್ರಕ್ಕೆ ಸಂಗೀತ ನೀಡಿದ್ದು ಹಾಡುಗಳು ಚೆನ್ನಾಗಿ ಮೂಡಿಬಂದಿವೆ ಎನ್ನಲಾಗುತ್ತಿದೆ. ಈ ಮೊದಲು ಮಲಯಾಳಂ ಚಿತ್ರವೊಂದಕ್ಕೆ ಸಂಗೀತ ನೀಡಿರುವ ಸಿದ್ಧಾರ್ಥ್ ವಿಪಿನ್, ಈ ಚಿತ್ರದ ಮೂಲಕ ಕನ್ನಡಕ್ಕೆ ಕಾಲಿಟ್ಟಂತಾಗಿದೆ. "ಈಗಾಗಲೇ ಎರಡ್ಮೂರು ಹಾಡುಗಳು ಸೂಪರ್ ಹಿಟ್ ಆಗಿದ್ದು, ಸಂಗೀತ ನಿರ್ದೇಶಕರ ಪ್ರಯತ್ನ ಸಫಲವಾಗುವುದರಲ್ಲಿ ಎರಡು ಮಾತಿಲ್ಲ" ಎಂದಿದ್ದಾರೆ ಶ್ರೀಕಾಂತ್. (ಒನ್ ಇಂಡಿಯಾ ಕನ್ನಡ)


Click it and Unblock the Notifications











