ಕಾಂಗ್ರೆಸ್ ಟಿಕೆಟ್ಗಾಗಿ ಅರ್ಜಿ ಸಲ್ಲಿಸಿದ ನಿರ್ಮಾಪಕ ಉಮಾಪತಿ ಗೌಡ
ಸಿನಿಮಾ ರಂಗದವರು ರಾಜಕೀಯಕ್ಕೆ ಬರುವುದು ವಿಶೇಷವೇ ಅಲ್ಲ. ಹಲವು ದಶಕಗಳಿಂದಲೂ ಈ ಪದ್ಧತಿ ನಡೆಯುತ್ತಾ ಬಂದಿದೆ. ಕೆಲವು ಉತ್ತಮ ಸಿನಿಮಾ ನಟರು, ಸೆಲೆಬ್ರಿಟಿಗಳು ಉತ್ತಮ ಆಡಳಿತಗಾರರಾಗಿಯೂ ಗುರುತಿಸಿಕೊಂಡಿದ್ದಾರೆ.
ಈಗಲೂ ಸಾಕಷ್ಟು ಮಂದಿ ಸಿನಿಮಾ ತಾರೆಯರು ವಿವಿಧ ರಾಜಕೀಯ ಪಕ್ಷಗಳ ಜೊತೆಗೆ ಗುರುತಿಸಿಕೊಂಡು ಪಕ್ಷದ ಮಟ್ಟದಲ್ಲಿ ಹಾಗೂ ಸರ್ಕಾರದ ಮಟ್ಟದಲ್ಲಿ ವಿವಿಧ ಹುದ್ದೆಯಲ್ಲಿದ್ದಾರೆ. ಸಿನಿಮಾ ಹಾಗೂ ರಾಜಕೀಯ ಎರಡನ್ನೂ ತೂಗಿಸಿಕೊಂಡು ಸಾಗುತ್ತಿದ್ದಾರೆ.
ಜಗ್ಗೇಶ್, ಬಿ.ಸಿ.ಪಾಟೀಲ್, ಉಮಾಶ್ರೀ, ಸುಮಲತಾ, ಮಾಳವಿಕ ಅವಿನಾಶ್, ತಾರಾ, ಸಾಧುಕೋಕಿಲ, ಪ್ರಕಾಶ್ ರೈ ಇನ್ನೂ ಹಲವರು ಸಕ್ರಿಯ ರಾಜಕೀಯದಲ್ಲಿದ್ದುಕೊಂಡೆ ಸಿನಿಮಾ, ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ. ಈ ಪಟ್ಟಿಗೆ ಹೊಸದಾಗಿ ಸೇರ್ಪಡೆಯಾಗುತ್ತಿದ್ದಾರೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ.

ರಾಬರ್ಟ್ ಸೇರಿ ಹಲವು ಸಿನಿಮಾ ನಿರ್ಮಾಣ
ದರ್ಶನ್ ನಟನೆಯ 'ರಾಬರ್ಟ್' ಸೇರಿದಂತೆ ಕೆಲವಾರು ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಉಮಾಪತಿ ಶ್ರೀನಿವಾಸ್ ಗೌಡ ಸಕ್ರಿಯ ರಾಜಕೀಯಕ್ಕೆ ಧುಮುಕಲು ಸಕಲ ಸಜ್ಜಾಗಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಚುನಾವಣಾ ರಾಜಕೀಯಕ್ಕೆ ಇಳಿಯಲು ಸಿದ್ಧತೆ ಮಾಡಿಕೊಂಡಿರುವ ಉಮಾಪತಿ, ಕಾಂಗ್ರೆಸ್ ಪಕ್ಷದ ಚುನಾವಣಾ ಟಿಕೆಟ್ ಬಯಸಿ ಅರ್ಜಿ ಸಹ ಹಾಕಿದ್ದಾರೆ.

ಮಹಾತ್ವಾಂಕ್ಷೆ ಇರುವ ಉದ್ಯಮಿ
ಉಮಾಪತಿ ಶ್ರೀನಿವಾಸ್ ಗೌಡ, ತಾವೇ ಹೇಳಿಕೊಂಡಿರುವಂತೆ ಮಹಾತ್ವಾಂಕಾಕ್ಷೆ ಇರುವ ಉದ್ಯಮಿ. ಕುಟುಂಬದ ಉದ್ಯಮದ ಜೊತೆಗೆ ಸಿನಿಮಾಕ್ಕೂ ಕೈಇಟ್ಟು ಅಲ್ಲಿಯೂ ಯಶಸ್ಸುಗಳಿಸಿರುವ ಉಮಾಪತಿ ಶ್ರೀನಿವಾಸ್ ಗೌಡ ಇದೀಗ ರಾಜಕೀಯದಲ್ಲಿಯೂ ಒಂದು ಕೈ ನೋಡಲು ಮುಂದಾಗಿದ್ದಾರೆ. ಬೆಂಗಳೂರಿನ ಬೊಮ್ಮನಹಳ್ಳಿ ಕ್ಷೇತ್ರದಿಂದ ಚುನಾವಣಾ ಟಿಕೆಟ್ಗಾಗಿ ಯತ್ನಿಸುತ್ತಿರುವ ಉಮಾಪತಿ, ಕ್ಷೇತ್ರದ ಟಿಕೆಟ್ ಬಯಸಿ ಕೆಪಿಸಿಸಿಗೆ ಅರ್ಜಿ ಹಾಕಿದ್ದಾರೆ.

2018 ರಲ್ಲಿಯೇ ಟಿಕೆಟ್ಗೆ ಪ್ರಯತ್ನಿಸಿದ್ದರು
2018 ರ ವಿಧಾನಸಭೆ ಚುನಾವಣೆಯಲ್ಲಿಯೇ ಉಮಾಪತಿಗೆ ಟಿಕೆಟ್ ದೊರಕುತ್ತದೆ ಎನ್ನಲಾಗಿತ್ತು. ಚುನಾವಣೆಗೆ ನಿಲ್ಲಲು ಉಮಾಪತಿ ಸಹ ಸಜ್ಜಾಗಿ, ಟಿಕೆಟ್ ಪಡೆಯಲು ಲಾಭಿ ಸಹ ನಡೆಸಿದ್ದರು. ಆದರೆ ಕೊನೆ ಕ್ಷಣದಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ಉಮಾಪತಿ ಕೈಜಾರಿ ಸುಷ್ಮಾ ರಾಜ್ಗೋಪಾಲ್ ರೆಡ್ಡಿ ಎಂಬುವರ ಪಾಲಾಗಿತ್ತು. ಅಂತೆಯೇ ಚುನಾವಣೆಯಲ್ಲಿ ಸುಷ್ಮಾ ರೆಡ್ಡಿ ಸೋತು ಬಿಜೆಪಿಯ ಸತೀಶ್ ರೆಡ್ಡಿ ಜಯಭೇರಿ ಭಾರಿಸಿದ್ದರು. ಸುಷ್ಮಾ ಅವರಿಗೆ ಟಿಕೆಟ್ ಸಿಗಲು ಕಾಂಗ್ರೆಸ್ ಮುಖಂಡ ರಾಮಲಿಂಗಾ ರೆಡ್ಡಿ ಪ್ರಮುಖ ಕಾರಣ ಎಂಬ ಮಾತುಗಳು ಸಹ ಕೇಳಿ ಬಂದಿದ್ದವು.

ಡಿ.ಕೆ.ಶಿವಕುಮಾರ್ ಭೇಟಿಯಾಗಿದ್ದ ಉಮಾಪತಿ
ಮೊದಲಿನಿಂದಲೂ ರಾಜಕೀಯದ ಬಗ್ಗೆ ಒಲವಿರುವ ಉಮಾಪತಿ ಶ್ರೀನಿವಾಸ್ ಗೌಡ, ತಿಂಗಳ ಹಿಂದೆ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಮಾತುಕತೆ ಸಹ ನಡೆಸಿದ್ದರು. ಆಗಲೇ ಉಮಾಪತಿ ಕಾಂಗ್ರೆಸ್ ಟಿಕೆಟ್ಗೆ ಯತ್ನಿಸುತ್ತಿದ್ದಾರೆ ಎನ್ನಲಾಗಿತ್ತು. ಅಂತೆಯೇ ಇದೀಗ ಅಧಿಕೃತವಾಗಿ ಬೊಮ್ಮನಹಳ್ಳಿ ಕ್ಷೇತ್ರದಿಂದ ಚುನಾವಣೆಗೆ ಅರ್ಜಿ ಹಾಕಿದ್ದಾರೆ. ಉಮಾಪತಿಗೆ ಟಿಕೆಟ್ ದೊರೆತರೆ ಬಿಜೆಪಿಯ ಸತೀಶ್ ರೆಡ್ಡಿಗೆ ಒಳ್ಳೆಯ ಸ್ಪರ್ಧೆ ಒಡ್ಡುವುದಂತೂ ಖಚಿತ.


Click it and Unblock the Notifications











