ಚಿತ್ರಮಂದಿರದಲ್ಲಿ 100% ಭರ್ತಿಗೆ ಮನವಿ, ಸಿಎಂ ಜೊತೆ ಚರ್ಚಿಸುತ್ತೇನೆ ಎಂದ ಸಚಿವ ಸುಧಾಕರ್
ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆ ಸಿನಿಮಾ ಥಿಯೇಟರ್ಗಳಲ್ಲಿ ಶೇಕಡಾ 50ರಷ್ಟು ಆಸನ ಭರ್ತಿಗೆ ಆದೇಶಿಸಲಾಗಿದೆ. ಏಪ್ರಿಲ್ 7 ರಿಂದ ಬೆಂಗಳೂರು, ಮೈಸೂರು ಸೇರಿ ಕೆಲವು ಜಿಲ್ಲೆಗಳಲ್ಲಿ ಈ ನಿಯಮ ಜಾರಿಗೆ ಬರಲಿದೆ.
ಈ ಸಂಬಂಧ ಚಲನಚಿತ್ರ ನಿರ್ಮಾಪಕರ ಸಂಘ ಇಂದು (ಏಪ್ರಿಲ್ 5) ಆರೋಗ್ಯ ಸಚಿವ ಡಾ ಸುಧಾಕರ್ ಅವರನ್ನು ಭೇಡಿ ಮಾಡಿ 100 ಪರ್ಸೆಂಟ್ ಭರ್ತಿಗೆ ಅವಕಾಶ ನೀಡಬೇಕು ಎಂದು ಮನವಿ ಸಲ್ಲಿಸಿದೆ.
ನಿರ್ಮಾಪಕ ಸಂಘದ ಅಧ್ಯಕ್ಷ ರಾಮಕೃಷ್ಣ ಡಿಕೆ, ನಿರ್ಮಾಪಕ ಕೆ ಮಂಜು, ಎಂಜೆ ರಾಮಮೂರ್ತಿ, ರಮೇಶ್ ಯಾದವ್ ಆರೋಗ್ಯ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ನಿರ್ಮಾಪಕ ಸಂಘದಿಂದ ಮನವಿ ಸ್ವೀಕರಿಸಿದ ಸಚಿವ ಸುಧಾಕರ್ ''ಸಿಎಂ ಜೊತೆ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತೇವೆ'' ಎಂದು ತಿಳಿಸಿದ್ದಾರೆ.

'ತಾಂತ್ರಿಕ ಸಲಹಾ ಸಮಿತಿಯವರು ಚಿತ್ರಮಂದಿರ, ಶಾಲೆ, ಕಲ್ಯಾಣ ಮಂಟಪ, ಬಸ್ ಪ್ರಯಾಣ ಸೇರಿ ಪ್ರತಿಯೊಂದು ಚಟುವಟಿಕೆಗಳಲ್ಲೂ ನಡವಳಿಕೆ ಹೇಗಿರಬೇಕೆಂದು 20 ದಿನಗಳ ಹಿಂದೆಯೇ ವರದಿ ನೀಡಿದ್ದರು. ಮುಖ್ಯಮಂತ್ರಿಗಳು ಎಲ್ಲರೊಂದಿಗೆ ಚರ್ಚಿಸಿ ಮಾರ್ಗಸೂಚಿಗಳನ್ನು ಪ್ರಕಟಿಸುತ್ತಾರೆ. ಇದೇ ರೀತಿ ಈ ಪ್ರಕ್ರಿಯೆ ಕೂಡ ನಡೆಯುತ್ತದೆ. ಇದಕ್ಕೆ ನಾವು ಸಲಹೆ ನೀಡಬಹುದು. ಪಕ್ಕದ ಮಹಾರಾಷ್ಟ್ರದಲ್ಲಿ ಲಾಕ್ ಡೌನ್ ಆಗಿದೆ. ಅಂತಹ ಪರಿಸ್ಥಿತಿ ನಮ್ಮ ರಾಜ್ಯಕ್ಕೆ ಬರುವುದು ಬೇಡ. ಎಲ್ಲರೂ ಕೋವಿಡ್ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು'' ಎಂದು ಸುಧಾಕರ್ ತಿಳಿಸಿದರು.
ಏಪ್ರಿಲ್ 2 ರಂದು ಹೊಸ ಮಾರ್ಗಸೂಚಿ ಹೊರಡಿಸಿದ್ದ ರಾಜ್ಯ ಸರ್ಕಾರ ಬೆಂಗಳೂರು, ಮೈಸೂರು ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ 50% ಆಸನ ಭರ್ತಿಗೆ ಆದೇಶಿಸಿತ್ತು. ಇದಕ್ಕೆ ಚಿತ್ರರಂಗದಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆ ಏಪ್ರಿಲ್ 7 ರವರೆಗೂ 100 ಪರ್ಸೆಂಟ್ ಮುಂದುವರಿಸಲು ಅವಕಾಶ ಕೊಡಲಾಗಿತ್ತು.
7ನೇ ತಾರೀಖು ನಂತರ ರಾಜ್ಯ ಸರ್ಕಾರ ಚಿತ್ರಮಂದಿರಗಳ ವಿಷಯದಲ್ಲಿ ಹೊಸ ಮಾರ್ಗಸೂಚಿ ಹೊರಡಿಸಲಿದೆ. ಈ ನಿಟ್ಟಿನಲ್ಲಿ ಒಂದು ದಿನ ಮುಂಚಿತವಾಗಿ ನಿರ್ಮಾಪಕರ ಸಂಘ 100 ಪರ್ಸೆಂಟ್ ಮುಂದುವರಿಸಲು ವಿನಂತಿಸಿದೆ.
ನೆರೆರಾಜ್ಯ ಮಹಾರಾಷ್ಟ್ರದಲ್ಲಿ ಕೋವಿಡ್ ಪ್ರಕರಣ ಹೆಚ್ಚಳವಾಗುತ್ತಿರುವುದರಿಂದ ಚಿತ್ರಮಂದಿರಗಳನ್ನು ಸಂಪೂರ್ಣವಾಗಿ ಬಂದ್ ಮಾಡಿದೆ.


Click it and Unblock the Notifications











