ಸೆನ್ಸಾರ್ ಮಂಡಳಿ ವಿರುದ್ಧ ನಿರ್ಮಾಪಕರ ಆಕ್ರೋಶ
ಪ್ರಾದೇಶಿಕ ಸೆನ್ಸಾರ್ ಮಂಡಳಿಯ ವಿರುದ್ಧ ಕನ್ನಡ ಸಿನಿಮಾರಂಗದ ಹಲವಾರು ನಿರ್ಮಾಪಕರು, ನಿರ್ದೇಶಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಸರಿಯಾದ ಸಮಯಕ್ಕೆ ಸೆನ್ಸಾರ್ ಆಗುತ್ತಿಲ್ಲ. ಎಲ್ಲಾ ಸಿನಿಮಾಗಳಿಗೂ ಎ ಸರ್ಟಿಫಿಕೇಟ್ ಕೊಡುತ್ತಾರೆ ಎನ್ನುವ ಆರೋಪವನ್ನು ನಿರ್ಮಾಪಕರು ಮತ್ತು ನಿರ್ದೇಶಕರು ಮಾಡುತ್ತಿದ್ದಾರೆ.
ಇದೇ ವಿಚಾರವಾಗಿ ಇಂದು ವಾಣಿಜ್ಯ ಮಂಡಳಿ ಎದುರು ಪ್ರತಿಭಟನೆ ಮಾಡುತ್ತಿದ್ದು ಅನೇಕ ನಿರ್ಮಾಪಕ, ನಿರ್ದೇಶಕರು ಭಾಗಿ ಆಗಿದ್ದಾರೆ. ಸೆನ್ಸಾರ್ ನಿಧಾನ ಆಗುವುದರಿಂದ ಚಿತ್ರಕ್ಕೆ ಎ ಸರ್ಟಿಫಿಕೇಟ್ ಕೊಡುವುದರಿಂದ ಆಗುವ ತೊಂದರೆಯನ್ನು ನಿರ್ಮಾಪಕರು ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾರೆ.
ಇದಕ್ಕೆ ಸೆನ್ಸಾರ್ ಮಂಡಳಿಯ ಪ್ರಾದೇಶಿಕ ಮುಖ್ಯ ಅಧಿಕಾರಿ ಪ್ರತಿಕ್ರಿಯೆ ನೀಡಿದ್ದಾರೆ. ಹಾಗಾದರೆ ಸೆನ್ಸಾರ್ ಹಾಗೂ ಕೆಲ ನಿರ್ಮಾಪಕ ನಿರ್ದೇಶಕರ ಮಧ್ಯೆ ನಡೆಯುತ್ತಿರುವ ಈ ವಿವಾದ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ.

ಸೆನ್ಸಾರ್ ಮಂಡಳಿ ವಿರುದ್ದ ಪ್ರತಿಭಟನೆ
ಸೆನ್ಸಾರ್ ಮಂಡಳಿ ತಾರತಮ್ಯ ವಿರೋಧಿಸಿ ಫಿಲ್ಮ್ ಚೇಂಬರ್ ಮುಂಭಾಗದಲ್ಲಿ ಇಂದು ನಿರ್ಮಾಪಕರು ಮತ್ತು ನಿರ್ದೇಶಕರು ಪ್ರತಿಭಟನೆ ಮಾಡಿದ್ದಾರೆ. ಸೆನ್ಸಾರ್ ಆಫೀಸರ್ ಶ್ರೀನಿವಾಸಪ್ಪರಿಂದ ಹೊಸ ಸಿನಿಮಾಗಳಿಗೆ ಅನ್ಯಾಯ ಆಗುತ್ತಿದೆ ಎಂದು ಆರೋಪ ಮಾಡಿದ್ದಾರೆ.

ಎ ಸರ್ಟಿಫಿಕೇಟ್ ನಿಂದ ಸಮಸ್ಯೆ
'ಮಫ್ತಿ', 'ಕುಮಾರಿ 21f' ದಂತಹ ಸಿನಿಮಾಗಳಿಗೆ ಮಾತ್ರ ನಿಯಮ ಅನ್ವಯ ಆಗುವುದಿಲ್ಲ. 'ರವಿ ಹಿಸ್ಟರಿ', 'ಆದಿಪುರಾಣ' ಅಂತಹ ಚಿತ್ರಗಳಿಗೆ ಮಾತ್ರ ಎ ಸರ್ಟಿಫಿಕೇಟ್ ನೀಡಿದ್ದಾರೆ. ಇದರಿಂದ ಸಾಕಷ್ಟು ಸಮಸ್ಯೆ ಆಗುತ್ತಿದೆ ಎನ್ನುವುದು ನಿರ್ಮಾಪಕರ ಅಳಲು. ಪ್ರತಿಭಟನೆಯಲ್ಲಿ 'ಆದಿಪುರಾಣ' ಚಿತ್ರದ ಶಮಂತ್, 'ಮುರಕಲ್ ಎಸ್ಟೇಟ್' ಚಿತ್ರದ ಕುಮಾರ್ ಭದ್ರಾವತಿ, 'ರವಿ ಹಿಸ್ಟರಿ' ಸಿನಿಮಾದ ಕಾರ್ತಿಕ್ ಸೇರಿ ಇನ್ನು ಅನೇಕರು ಭಾಗಿಯಾಗಿದ್ದರು.

ಸಮಸ್ಯೆ ಬಗ್ಗೆ ಸ್ಪಷ್ಟನೆ ಕೊಟ್ಟ ಸೆನ್ಸಾರ್ ಅಧಿಕಾರಿ
ನಾವು ಚಲನಚಿತ್ರಗಳನ್ನು ಕಾನೂನು, ನಿಯಮಗಳು ಮತ್ತು ಮಾರ್ಗದರ್ಶಿ ಸೂತ್ರಗಳ ಪ್ರಕಾರ ಪ್ರಮಾಣ ಪತ್ರ ನೀಡುತ್ತೇವೆ. ಈ ಹಿಂದೆ ಪ್ರಮಾಣ ಪತ್ರಗಳನ್ನು ಸ್ವತಃ ನಿರ್ಮಾಪಕರ ಕೈಗೆ ನೀಡಲಾಗುತ್ತಿತ್ತು. ಆದರೆ ಈಗ ಪ್ರಮಾಣ ಪತ್ರಗಳು ಆನ್ಲೈನ್ನಲ್ಲೇ ಸಿಗುತ್ತಿವೆ. ನಂತರ ಇದರ ಪ್ರತಿಯನ್ನು ಸ್ವತಃ ನಿರ್ಮಾಪಕರೇ ಬಂದು ಪಡೆದುಕೊಳ್ಳುತ್ತಾರೆ. ರಾಜ್ಯದಲ್ಲಿ ಪ್ರತಿ ವಾರವೂ ಕನಿಷ್ಟ 8 ಚಲನಚಿತ್ರಗಳು ಬಿಡುಗಡೆಗೊಳ್ಳುತ್ತವೆ. ಕನ್ನಡ ಪ್ರೇಕ್ಷಕರು ಉತ್ತಮ ಮನರಂಜನಾತ್ಮಕ ಚಿತ್ರಗಳ ನಿರೀಕ್ಷೆಯಲ್ಲಿದ್ದಾರೆ. ಅವರ ನಿರೀಕ್ಷೆಗಳನ್ನು ಪೂರೈಸುವ ಭರವಸೆ ನಮ್ಮದು. ಎಂದಿದ್ದಾರೆ.

ನಿರ್ಮಾಪಕ ಮಂಡಳಿಗೆ ತಿಳಿದಿಲ್ಲ
ನಿರ್ಮಾಪಕರು ಮತ್ತು ನಿರ್ದೇಶಕರು ರಸ್ತೆಗಿಳಿದು ಪ್ರತಿಭಟನೆ ಮಾಡುವ ವಿಚಾರ ನಿರ್ಮಾಪಕರಮಂಡಳಿ ಗಮನಕ್ಕೆ ಬಂದಿಲ್ಲ. ನಿರ್ಮಾಪಕರ ಮಂಡಳಿಯಿಂದಲೂ ಯಾರು ಪ್ರತಿಭಟನೆಯಲ್ಲಿ ಭಾಗಿ ಆಗಿಲ್ಲ. ಸದ್ಯ ಹೋರಾಟ ಮಾಡುತ್ತಿರುವವರು ಈ ಸಮಸ್ಯೆಗೆ ಪರಿಹಾರ ಸಿಗದಿದ್ದರೆ ದೆಹಲಿಯಲ್ಲಿ ಪ್ರತಿಭಟನೆ ಮಾಡಲು ನಿರ್ಮಾಪಕರ ನಿರ್ಧಾರ ಮಾಡಿದ್ದಾರೆ.


Click it and Unblock the Notifications











