ಸ್ಯಾಂಡಲ್ ವುಡ್ ಪಾಲಿಗೆ ವಿತರಕ ಚಂದ್ರಪ್ಪ ಅಪಾಯಕಾರಿ ವಿಷ ಜಂತುವಂತೆ.!
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಪಟಾಕಿ' ಚಿತ್ರದ ಬಿಡುಗಡೆಗೆ ದೊಡ್ಡ ವಿಘ್ನ ಎದುರಾಗಿದೆ. ಮೇ 26 ರಂದು ರಾಜ್ಯಾದ್ಯಂತ ರಿಲೀಸ್ ಆಗಬೇಕಿದ್ದ 'ಪಟಾಕಿ' ಚಿತ್ರಕ್ಕೆ ಶಿವಮೊಗ್ಗದ ವಿತರಕ ಚಂದ್ರಪ್ಪ ಅಡ್ಡಗಾಲು ಹಾಕುತ್ತಿದ್ದಾರೆ.
'ಪಟಾಕಿ' ಚಿತ್ರದ ನಿರ್ಮಾಪಕ ಎಸ್.ವಿ.ಬಾಬು ಹಾಗೂ ವಿತರಕ ಚಂದ್ರಪ್ಪ ನಡುವಿನ ಹಣಕಾಸು ವ್ಯವಹಾರ ಕೋರ್ಟ್ ಮೆಟ್ಟಿಲೇರಿದೆ. ಹೀಗಾಗಿ, 'ಪಟಾಕಿ' ಚಿತ್ರವನ್ನ ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಮಂಗಳೂರು ಕಡೆ ಬಿಡುಗಡೆ ಮಾಡಲು ಬಿಡುವುದಿಲ್ಲ ಎಂದು ಚಂದ್ರಪ್ಪ ಪಟ್ಟು ಹಿಡಿದು ಕೂತಿದ್ದಾರೆ. ಸಾಲದಕ್ಕೆ 'ಪಟಾಕಿ' ಚಿತ್ರಕ್ಕೆ ಥಿಯೇಟರ್ ಗಳನ್ನ ನೀಡದಂತೆ ಚಿತ್ರಮಂದಿರಗಳ ಮಾಲೀಕರ ಮೇಲೆ ಚಂದ್ರಪ್ಪ ಒತ್ತಡ ಹೇರುತ್ತಿದ್ದಾರಂತೆ.
'ಪಟಾಕಿ' ಚಿತ್ರದ ನಿರ್ಮಾಪಕರಿಗೆ ತೊಂದರೆ ಉಂಟು ಮಾಡುತ್ತಿರುವ ಚಂದ್ರಪ್ಪ ವಿರುದ್ಧ ಕನ್ನಡ ಚಿತ್ರ ನಿರ್ಮಾಪಕರು ಒಟ್ಟಾಗಿ ಕಿಡಿಕಾರುತ್ತಿದ್ದಾರೆ. ಈಗಾಗಲೇ ಅನೇಕ ನಿರ್ಮಾಪಕರಿಗೆ ಉಂಡೆ ನಾಮ ತಿಕ್ಕಿರುವ 'ಅಪಾಯಕಾರಿ ವಿಷ ಜಂತು' ಚಂದ್ರಪ್ಪ ಮೇಲೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕೂಡಲೆ ಕ್ರಮ ಕೈಗೊಳ್ಳಬೇಕು ಎಂಬುದು ನಿರ್ಮಾಪಕರ ಸಂಘದ ಆಗ್ರಹ. ಮುಂದೆ ಓದಿರಿ....

'ಪಟಾಕಿ' ನಿರ್ಮಾಪಕ ಎಸ್.ವಿ.ಬಾಬು ಪರ ದನಿ ಎತ್ತಿದ ನಿರ್ಮಾಪಕರು
'ಪಟಾಕಿ' ಚಿತ್ರವನ್ನ ನಿರ್ಮಾಣದ ಜೊತೆಗೆ ವಿತರಣೆಯನ್ನೂ ಮಾಡುತ್ತಿರುವ ಎಸ್.ವಿ.ಬಾಬು ಪರ ನಿರ್ಮಾಪಕರು ದನಿ ಎತ್ತಿದ್ದಾರೆ. ಎಸ್.ವಿ.ಬಾಬು ರವರಿಗೆ ಕಿರುಕುಳ ನೀಡುತ್ತಿರುವ ವಿತರಕ ಚಂದ್ರಪ್ಪ ವಿರುದ್ಧ ಚಾಟಿ ಏಟು ಕೊಟ್ಟಿದ್ದಾರೆ.

ಚಂದ್ರಪ್ಪ ವಿರುದ್ಧ ಕಿಡಿಕಾರಿದ ದಿನೇಶ್ ಗಾಂಧಿ
''ಪಟಾಕಿ' ಚಿತ್ರದ ನಿರ್ಮಾಪಕ ಎಸ್.ವಿ.ಬಾಬು. ಈ ಸಿನಿಮಾ ಮೇ 26 ರಂದು ಬಿಡುಗಡೆ ಆಗಬೇಕು. ಆದರೆ, ಚಂದ್ರಪ್ಪ ಎಂಬ ಶಿವಮೊಗ್ಗ ವಿತರಕ ಕೋರ್ಟ್ ಮೆಟ್ಟಿಲೇರಿದ್ದಾರೆ. ಇದರ ನಡುವೆ ಅಲ್ಲಿನ ಎಲ್ಲಾ ಥಿಯೇಟರ್ ಗಳಿಗೆ ಫೋನ್ ಮಾಡಿ ಚಿತ್ರಮಂದಿರಗಳನ್ನ 'ಪಟಾಕಿ' ಚಿತ್ರಕ್ಕೆ ಕೊಡಬೇಡಿ ಅಂತ ಹೇಳ್ತಿದ್ದಾರೆ. ಇದು ದೊಡ್ಡ ತಪ್ಪು. ಇದನ್ನ ನಾನು ಖಂಡಿಸುತ್ತೇನೆ. ನಿರ್ಮಾಪಕರ ಸಂಘ ಹಾಗೂ ವಾಣಿಜ್ಯ ಮಂಡಳಿ ಕೂಡ ಖಂಡಿಸುತ್ತದೆ'' ಎನ್ನುತ್ತಾರೆ ನಿರ್ಮಾಪಕ ದಿನೇಶ್ ಗಾಂಧಿ

ಆತ ಅಪಾಯಕಾರಿ ವಿಷ ಜಂತು
''ಇತ್ತೀಚೆಗೆ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಕಡೆ ಚಂದ್ರಪ್ಪ ಎಂಬ ನರಹಂತಕ ವಿತರಕ ಸೇರಿಕೊಂಡಿದ್ದಾರೆ. ಇವರದ್ದು ಬರೀ ತಕರಾರು... 50 ಲಕ್ಷ ಮಾತನಾಡುತ್ತಾರೆ, 20 ಲಕ್ಷ ಕೊಡುತ್ತಾರೆ, 30 ಲಕ್ಷ ಕೈ ಎತ್ತುತ್ತಾರೆ. ಈ ಅನುಭವ ನನಗೂ ಆಗಿದೆ. ಚಂದ್ರಪ್ಪ ರವರಿಂದ ನನಗೂ 50 ಲಕ್ಷ ನಷ್ಟ ಆಗಿದೆ. ಇದೇ ತರಹ 'ಪಟಾಕಿ' ಸಿನಿಮಾಗೂ ಆಗುತ್ತಿದೆ. ಇವರು ತುಂಬಾ ಅಪಾಯಕಾರಿ ವಿಷ ಜಂತು. ಥಿಯೇಟರ್ ಓನರ್ ಗಳಿಗೂ ಬ್ಲಾಕ್ ಮೇಲ್ ಮಾಡುತ್ತಾರೆ. ಈ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕೂಡಲೆ ಕ್ರಮ ಕೈಗೊಳ್ಳಲೇಬೇಕು'' - ಆರ್.ಎಸ್.ಗೌಡ, ನಿರ್ಮಾಪಕ

ಆತ ಹಿಟ್ಲರ್
''ಕನ್ನಡ ಚಿತ್ರರಂಗದಲ್ಲಿ ಒಬ್ಬ ಹಿಟ್ಲರ್ ಹುಟ್ಟಿಕೊಂಡಿದ್ದಾನೆ. ಕನ್ನಡ ನಿರ್ಮಾಪಕರೆಲ್ಲ ಬಳೆ ತೊಟ್ಟುಕೊಳ್ಳುವ ದಿನವನ್ನ ಈತ (ವಿತರಕ ಚಂದ್ರಪ್ಪ) ಬಹಳ ಬೇಗ ತರುತ್ತಾನೆ. 'ಪಟಾಕಿ' ಸಿನಿಮಾ ರಿಲೀಸ್ ಮಾಡಬಾರದು ಅಂತ ಥಿಯೇಟರ್ ಓನರ್ ಗಳ ಮೇಲೆ ಒತ್ತಡ ತರುತ್ತಿದ್ದಾನೆ. ಕನ್ನಡ ಚಿತ್ರರಂಗದಲ್ಲಿ ದುಡ್ಡು ಮಾಡಿ ಈಗ ನಿರ್ಮಾಪಕರಿಗೆ ಅವಮಾನ ಮಾಡುತ್ತಿದ್ದಾನೆ. ಇಂಥವರು ಇಲ್ಲಿ ಇರಬಾರದು'' - ಎ.ಗಣೇಶ್, ನಿರ್ಮಾಪಕ (ಕೃಪೆ - ಚಿತ್ರಲೋಕ)



Click it and Unblock the Notifications











