ನೇತ್ರದಾನಕ್ಕೆ ಸರಿತಿ ಸಾಲಿನಲ್ಲಿ ನಿಂತ ಪುನೀತ್ ಅಭಿಮಾನಿಗಳು
ಪುನೀತ್ ರಾಜ್ಕುಮಾರ್ ನಮ್ಮನ್ನೆಲ್ಲ ಅಗಲಿ ಇಂದಿಗೆ 6ನೇ ದಿನ. ಅವರನ್ನು ಕಳೆದುಕೊಂಡಿರೋ ನೋವು ಸಾಕಷ್ಟು ಅಭಿಮಾನಿಗಳಲ್ಲಿ ಇಗಲೂ ಹಾಗೇ ಇದೆ. ಕುಟುಂಬ ಸದಸ್ಯರು ಅದು ಹೇಗೆ ಪುನೀತ್ ನಿಧನವನ್ನು ಅರಗಿಸಿಕೊಂಡಿದ್ದಾರೆ ಆ ದೇವರೇ ಬಲ್ಲ. ಹೀಗಿದ್ದಾಗ ಅಭಿಮಾನಿಗಳು ಒಂದೊಂದಾಗೇ ಪುನೀತ್ ಅವರ ಆದರ್ಶವನ್ನು ಅನುಸರಿಸಲು ಮುಂದಾಗಿದ್ದಾರೆ. ಪುನೀತ್ ಹಾಕಿಕೊಟ್ಟ ದಾರಿಯಲ್ಲೆ ನಡೆಯಲು ಮುಂದಾಗಿದ್ದಾರೆ.
ಪುನೀತ್ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದರು. ತಂದೆ ಹಾಕಿ ಕೊಟ್ಟ ದಾರಿಯಲ್ಲೆ ಪುನೀತ್ ಕಣ್ಣುಗಳನ್ನು ದಾನ ಮಾಡಿದ್ದರು. ಪುನೀತ್ ನೇತ್ರದಾನದಿಂದಾಗಿ 4 ಮಂದಿಗೆ ಪುನೀತ್ ಬೆಳಕಾಗಿದ್ದಾರೆ. ನೇತ್ರ ದಾನಕ್ಕೆ ದೊಡ್ಮನೆ ಮೊದಲಿನಿಂದಲೂ ಬೆಂಬಲಿಸುತ್ತಾ , ನೇತ್ರ ದಾನ ಮಹಾ ದಾನ ಎಂದು ಹೇಳಿಕೊಂಡು ಬಂದಿದೆ. ಇದೀಗ ನೇತ್ರದಾನವನ್ನೇ ಆದರ್ಶವಾಗಿ ಇಟ್ಟುಕೊಂಡ ಪುನೀತ್ ಅಭಿಮಾನಿಗಳು ಕೂಡ ನೇತ್ರದಾನದ ಹಾದಿಯಲ್ಲಿ ಸಾಗುತ್ತಿದ್ದಾರೆ.
ಇದಕ್ಕೆ ಸಾಕ್ಷಿಯಾಗಿರೋದು ಬಳ್ಳಾರಿಯ ಪುನೀತ್ ಅಭಿಮಾನಿಗಳು. ಪುನೀತ್ ಹಾಕಿಕೊಟ್ಟ ದಾರಿಯಲ್ಲಿ ನಡೆಯಲು ಮುಂದಾಗಿರುವ ಫ್ಯಾನ್ಸ್ ನೇತ್ರ ದಾನಕ್ಕಾಗಿ ಸರತಿ ಸಾಲಿನಲ್ಲಿ ನಿಂತು ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳುತ್ತಿದ್ದಾರೆ. ಬಳ್ಳಾರಿಯ ಆರೋಗ್ಯ ಕೇಂದ್ರದಲ್ಲಿ ಕಳೆದ ಎರೆಡು ದಿನಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿ ನೇತ್ರದಾನದ ನೊಂದಣಿ ಪತ್ರವನ್ನು ಫಿಲ್ ಮಾಡುತ್ತಿದ್ದಾರೆ. ಇದನ್ನು ಗಮನಿಸಿದ ಆರೋಗ್ಯ ಅಧಿಕಾರಿಗಳು ಆಶ್ಚರ್ಯಕ್ಕೆ ಒಳಗಾಗಿದ್ದಾರೆ.

ಕ್ಯೂನಲ್ಲಿ ನಿಂತು ಈ ಪ್ರಕ್ರೀಯೆಯನ್ನು ಪೂರ್ಣಗೊಳಿಸುತ್ತಿರುವ ಅಭಿಮಾನಿಗಳು, ವೈದ್ಯ ರೊಂದಿಗೆ ಕಣ್ಣುದಾನದ ಪ್ರಕ್ರಿಯೆಯನ್ನು ವಿಚಾರಿಸುತ್ತಿದ್ದಾರಂತೆ. ನೇತ್ರದಾನದಿಂದ ಬೇರೆಯವರಿಗೆ ಆಗುವ ಲಾಭದ ಬಗ್ಗೆ ಕೂಡ ವಿಚಾರಿಸುತ್ತಿದ್ದಾರೆ. ತಾವು ದಾನ ಮಾಡೋದು ಅಲ್ಲದೇ ಕೆಲವರು ತಮ್ಮ ಕುಟುಂಬ ಸದಸ್ಯರನ್ನು ಕರೆತಂದು ಕಣ್ಣುದಾನದ ಪ್ರಕ್ರಿಯೆಯನ್ನು ಮಾಡಿಸುತ್ತಿದ್ದಾರೆ. ಪುನೀತ್ ಅವರ ಆದರ್ಶವನ್ನು ನಾವು ಹೀಗೆ ಪಾಲಿಸಲು ಮುಂದಾಗಿರುವ ಬಗ್ಗೆ ಅಭಿಮಾನಿಗಳು ಖುಷಿಯಾಗಿದ್ದಾರೆ.
ಈ ಹಿಂದೆ ವರನಟ ಡಾ ರಾಜ್ ಕುಮಾರ್ ನಿಧನರಾದಾಗಲೂ ಅಣ್ಣಾವ್ರು ತಮ್ಮ ಎರಡೂ ಕಣ್ಣಗಳನ್ನು ದಾನ ಮಾಡಿದ್ದರು. ಆಗಲೂ ಕೂಡ ಸಾಕಷ್ಟು ರಾಜ್ ಅಭಿಮಾನಿಗಳು ಇದೇ ರೀತಿ ಡಾ ರಾಜ್ ಅವರ ಆದರ್ಶವನ್ನು ಅನುಸರಿ ನೇತ್ರದಾನ ಮಾಡಿದ್ದರು. ಈಗ ಪುನೀತ್ ಅಭಿಮಾನಿಗಳು ಕೂಡ ನೇತ್ರದಾನ ಮಹಾದಾನ ಎಂದು ಅರಿತು ನೇತ್ರದಾನಕ್ಕೆ ಮುಂದಾಗಿದ್ದಾರೆ. ಹಾಗೇ ತಮ್ಮ ನೆಚ್ಚಿನ ನಟನ ಆದರ್ಶಗಳನ್ನು ಈ ಮೂಲಕ ಈಡೇರಿಸಲು ಮುಂದಾಗಿದ್ದಾರೆ.
ಒಂದು ಕಡೆ ಕಲಾವಿದರು ಚಿತ್ರರಂಗವನ್ನು ಒಟ್ಟಾಗಿ ಮುನ್ನಡೆಸಬೇಕು ಎಂಬ ತೀರ್ಮಾನಕ್ಕೆ ಬರುತ್ತಿದ್ದಾರೆ. ಪುನೀತ್ ನಿಧನದಿಂದಾಗಿ ಎಲ್ಲಾ ಸ್ಟಾರ್ಗಳ ಫ್ಯಾನ್ಸ್ ಕ್ಲಬ್ ಅಡ್ಮಿನ್ಗಳು ಇನ್ಮೇಲೆ ಸ್ಟಾರ್ ವಾರ್ ಇರಬಾರದು ನಾವೇಲ್ಲರೂ ಒಂದೇ ತಾಯಿ ಮಕ್ಕಳು ಎಂದು ಮಂತ್ರ ಜಪಿಸುತ್ತಿದ್ದಾರೆ. ಸಾಕಷ್ಟು ರಸ್ತೆಗಳಿಗೆ ಪುನೀತ್ ಅವರ ಹೆಸರಿಡಲಾಗುತ್ತಿದೆ. ಪುನೀತ್ ದೀಪಾವಳಿಗೆ ಪಟಾಕಿ ಹೊಡೆಯಬೇಡಿ ಎಂದಿರೋದು ಕಳೆದ ವರ್ಷದ ವೀಡಿಯೋ ಕೂಡ ಸಾಕಷ್ಟು ವೈರಲ್ ಆಗುತ್ತಿದ್ದು, ಅಭಿಮಾನಿಗಳು ಇದನ್ನು ಕೂಡ ಅನುಸರಿಸಲು ಮುಂದಾಗಿದ್ದಾರೆ. ಹೀಗೆ ಎಲ್ಲಾ ಕಡೆಯಿಂದಲೂ ಪುನೀತ್ ಸ್ಮರಣೆಗಳು ಆಗುತ್ತಿದ್ದು, ಅಭಿಮಾನಿಗಳಂತೂ ನಿಂತರೂ ಕುಂತರೂ ಪುನೀತ್ ಅವರ ಜಪ ಮಾಡುತ್ತಿದ್ದಾರೆ. ಅವರು ಎಲ್ಲೇ ಇರಲಿ ಹೇಗೆ ಇರಲಿ ನಮ್ಮ ಮನಸ್ಸಿನಲ್ಲಿ ಸದಾ ಅಜರಾಮರು ಅನ್ನುತ್ತಿದ್ದಾರೆ. ಈ ಮೂಲಕ ಪುನೀತ್ ಸಾವಿನ ದುಃಖದ ಮಡುವಿನಲ್ಲೂ ಪ್ರತಿ ಹೆಜ್ಜೆಗೂ ಪುನೀತ್ ಅವರ ಆದರ್ಶಗಳನ್ನು ಪಾಲಿಸಲಾಗುತ್ತಿದೆ.
ಇನ್ನು ಪುನೀತ್ ಅಗಲಿಕೆಯ ನೆನಪಿನಲ್ಲಿ ಕೆಲವರು ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿದ್ದಾರೆ. ಅದರಲ್ಲಿಯೂ ಹೃದಯ ಸಂಬಂಧಿ ಆರೋಗ್ಯ ಚಿಕಿತ್ಸಾ ಶಿಬಿರವನ್ನು ಉಚಿತವಾಗಿ ಆಯೋಜಿಸಲಾಗುತ್ತಿದೆ.


Click it and Unblock the Notifications











