ಅಪ್ಪುಗೆ ಕರ್ನಾಟಕ ರತ್ನ ಕಾರ್ಯಕ್ರಮದ ಅತಿಥಿಗಳ ಪಟ್ಟಿ ಬಿಡುಗಡೆ; ಭಾಗವಹಿಸೋಕೆ ಪಾಸ್ ಇರಬೇಕಾ?
ನಟ ಪುನೀತ್ ರಾಜ್ಕುಮಾರ್ ತಮ್ಮ ಕುಟುಂಬ ಹಾಗೂ ಅಪಾರವಾದ ಅಭಿಮಾನಿ ಬಳಗವನ್ನು ಅಗಲಿ ವರ್ಷ ಕಳೆದಿದೆ. ಪುನೀತ್ ಅಕಾಲಿಕ ಮರಣದ ಬೆನ್ನಲ್ಲೇ ಅವರು ಮಾಡುತ್ತಿದ್ದ ಅಪಾರವಾದ ಸಮಾಜ ಸೇವೆಗಳು ಬೆಳಕಿಗೆ ಬಂದವು. ಪುನೀತ್ ಅವರನ್ನು ಓರ್ವ ನಟನೆಂದು ಗೌರವಿಸುತ್ತಿದ್ದ ಜನತೆ ಅಪ್ಪು ಗೌಪ್ಯವಾಗಿ ಮಾಡುತ್ತಿದ್ದ ಹಲವಾರು ಸಮಾಜಮುಖಿ ಕೆಲಸಗಳ ಬಗ್ಗೆ ತಿಳಿದ ನಂತರ ಅವರನ್ನು ದೇವತಾ ಮನುಷ್ಯನೆಂದು ಆರಾಧಿಸಲಾರಂಭಿಸಿದರು.
ಬಾಲ ನಟನಾಗಿ ಚಿತ್ರರಂಗ ಪ್ರವೇಶಿಸಿದ ಮಾಸ್ಟರ್ ಲೋಹಿತ್ ತನ್ನ ಹತ್ತನೇ ವಯಸ್ಸಿನಲ್ಲೇ ರಾಷ್ಟ್ರ ಪ್ರಶಸ್ತಿಯನ್ನು ಪಡೆದು ಹಲವರಿಗೆ ಮಾದರಿಯಾಗಿದ್ದರು. ನಂತರ ಅಪ್ಪು ಚಿತ್ರದ ಮೂಲಕ ಸಿನಿಮಾ ರಂಗದ ತನ್ನ ಎರಡನೇ ಜರ್ನಿಯನ್ನು ಆರಂಭಿಸಿದ ಪುನೀತ್ ರಾಜ್ಕುಮಾರ್ ಜನರ ಮನಸ್ಸನ್ನು ಗೆದ್ದು ಪವರ್ ಸ್ಟಾರ್ ಆದರು, ರಾಜರತ್ನನಾದರು.
ಹೀಗೆ ಬದುಕಿದ್ದಾಗಲೇ ಉನ್ನತ ರಾಷ್ಟ್ರ ಪ್ರಶಸ್ತಿಯನ್ನು ಪಡೆದಿದ್ದ ಅಪ್ಪು ನಿಧನ ಹೊಂದಿದ ಬಳಿಕ ಗೌರವ ಡಾಕ್ಟರೇಟ್ ಪಡೆದರು ಹಾಗೂ ಈಗ ರಾಜ್ಯದ ಅತ್ಯುನ್ನತ ಪ್ರಶಸ್ತಿಯಾದ ಕರ್ನಾಟಕ ರತ್ನಕ್ಕೂ ಭಾಜನರಾಗುತ್ತಿದ್ದಾರೆ. ಹೌದು, ಅಪ್ಪು ನಿಧನ ಹೊಂದಿದ ಕೆಲ ದಿನಗಳಲ್ಲಿಯೇ ಸಿಎಂ ಬಸವರಾಜ ಬೊಮ್ಮಾಯಿ ಪುನೀತ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿಯನ್ನು ಮುಂದಿನ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಂದು ನೀಡಲಾಗುವುದು ಎಂದು ಘೋಷಿಸಿದ್ದರು. ಅದರಂತೆ ನಾಳೆ ( ನವೆಂಬರ್ 1 ) ಕನ್ನಡ ರಾಜ್ಯೋತ್ಸವದಂದು ಪುನೀತ್ ರಾಜ್ಕುಮಾರ್ ಅವರಿಗೆ ಮರಣೋತ್ತರ ಕರ್ನಾಟಕ ಪ್ರಶಸ್ತಿಯನ್ನು ಪ್ರದಾನ ನಡೆಯಲಿದ್ದು, ಈ ಕಾರ್ಯಕ್ರಮದ ವಿವರ ಈ ಕೆಳಕಂಡಂತಿದೆ.

ಕಾರ್ಯಕ್ರಮದ ಸಮಯ ಮತ್ತು ಸ್ಥಳ
ಪುನೀತ್ ರಾಜ್ಕುಮಾರ್ ಅವರಿಗೆ ರಾಜ್ಯ ಸರ್ಕಾರ ನೀಡುವ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಾಳೆ ( ನವೆಂಬರ್ 1 ) ಬೆಂಗಳೂರಿನ ವಿಧಾನಸೌಧದ ಮುಂಭಾಗದ ಮೆಟ್ಟಿಲುಗಳ ಮೇಲೆ ನಡೆಯಲಿದೆ. ಕಾರ್ಯಕ್ರಮವು ಸಂಜೆ 4 ಗಂಟೆಗೆ ಆರಂಭಗೊಳ್ಳಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.

ಪಾಸ್ ಇರಬೇಕಾ?
ಇನ್ನು ಈ ಕಾರ್ಯಕ್ರಮ ಭವ್ಯ ವಿಧಾನಸೌಧದ ಮುಂಭಾಗ ನಡೆಯುವುದರಿಂದ ಪಾಸ್ ಇದ್ದವರಿಗೆ ಮಾತ್ರ ಪ್ರವೇಶ ನೀಡಲಾಗುತ್ತಾ ಎಂಬ ಪ್ರಶ್ನೆ ಹಲವರಲ್ಲಿದೆ. ಆದರೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಯಾವುದೇ ಪಾಸ್ ಅಗತ್ಯವಿಲ್ಲ. ಜನ ಸಾಮಾನ್ಯರು ವಿಧಾನಸೌಧದ ಬಳಿ ಆಗಮಿಸಿ ಅಪ್ಪು ಅವರಿಗೆ ಕರ್ನಾಟಕ ಪ್ರಶಸ್ತಿ ಪ್ರದಾನ ಮಾಡುವ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಬಹುದಾಗಿದೆ.

ಅತಿಥಿಗಳ ಪಟ್ಟಿ
ಈ ಕಾರ್ಯಕ್ರಮದ ಅತಿಥಿಗಳ ಸಂಪೂರ್ಣ ವಿವರ ಈ ಕೆಳಕಂಡಂತಿದೆ
ಪ್ರಶಸ್ತಿ ಪ್ರದಾನ: ಬಸವರಾಜ ಬೊಮ್ಮಾಯಿ, ಸನ್ಮಾನ್ಯ ಮುಖ್ಯಮಂತ್ರಿ
ಗೌರವ ಉಪಸ್ಥಿತಿ: ಶ್ರೀ ರಘುನಾಥ್ ರಾವ್ ಮಲ್ಕಾಪುರೆ ( ಕರ್ನಾಟಕ ವಿಧಾನ ಪರಿಷತ್ ಸಭಾಪತಿಗಳು ), ವಿಶ್ವೇಶ್ವರ ಹೆಗಡೆ ಕಾಗೇರಿ ( ವಿಧಾನಸಭೆ ಸಭಾಧ್ಯಕ್ಷರು )
ವಿಶೇಷ ಆಹ್ವಾನಿತರು: ತಮಿಳು ನಟ ರಜಿನಿಕಾಂತ್, ತೆಲುಗು ನಟ ಜೂನಿಯರ್ ಎನ್ಟಿಆರ್ ಹಾಗೂ ಡಾ. ಸುಧಾ ಮೂರ್ತಿ
ಘನ ಉಪಸ್ಥಿತಿ: ಕಂದಾನ ಸಚಿವ ಆರ್ ಅಶೋಕ್, ಇಂಧನ ಸಚಿವ ವಿ ಸುನೀಲ್ ಕುಮಾರ್.
ಮುಖ್ಯ ಅತಿಥಿಗಳು: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಬಿ.ಕೆ ಹರಿಪ್ರಸಾದ್ ಹಾಗೂ ಸಂಸದ ಪಿ.ಸಿ. ಮೋಹನ್.
ಅಧ್ಯಕ್ಷತೆ: ರಿಜ್ವಾನ್ ಅರ್ಷದ್, ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕರು
ಸಂಜೆ 4 ಗಂಟೆಗೆ ಗಾಯಕ ವಿಜಯ್ ಪ್ರಕಾಶ್ ಮತ್ತು ತಂಡದವರಿಂದ ಸಾಂಸ್ಕೃತಿಕ ಕಾರ್ಯಕ್ರಮ


Click it and Unblock the Notifications











