'ಬೊಂಬೆ ಹೇಳುತೈತೆ' ಹೊಸ ದಾಖಲೆ: ಅಪ್ಪು ಅಭಿಮಾನಿಗಳಿಗೆ ಹೆಮ್ಮೆ
ಸ್ಯಾಂಡಲ್ವುಡ್ ಪವರ್ಸ್ಟಾರ್ ದಿಢೀರ್ ಹೃದಯಾಘಾತದಿಂದ ಈ ಲೋಕವನ್ನೇ ತ್ಯಜಿಸಿದ್ದಾರೆ. ಪುನೀತ್ ನಿಧನ ಸ್ಯಾಂಡಲ್ವುಡ್ ಅಷ್ಟೇ ಅಲ್ಲ. ಇಡೀ ಭಾರತೀಯ ಚಿತ್ರರಂಗಕ್ಕೆ ದೊಡ್ಡ ಶಾಕ್ ಆಗಿತ್ತು. ಈ ದುರಂತವನ್ನು ಅರಗಿಸಿಕೊಳ್ಳಲಾಗಿದೆ ಅಪ್ಪು ಅಭಿಮಾನಿಗಳು ಒದ್ದಾಡುತ್ತಿದ್ದಾರೆ. ಚಿಕ್ಕವರಿಂದ ದೊಡ್ಡವರೆಗೂ ಪುನೀತ್ ಅಗಲಿಕೆಯ ನೋವಿನಲ್ಲಿ ಕಣ್ಣೀರಿಡುತ್ತಿದ್ದಾರೆ.
ಪವರ್ಸ್ಟಾರ್ ಅಭಿಮಾನಿ ದೇವರುಗಳೇ ಕೊಟ್ಟ ಬಿರುದು. ಅದಕ್ಕೆ ತಕ್ಕಂತೆ ಬದುಕಿದ ನಟ ಪುನೀತ್ ರಾಜ್ಕುಮಾರ್. ಅದು ತೆರೆಮೇಲಿರಲಿ ಅಥವಾ ತೆರೆಯ ಹಿಂದೆಯೇ ಇರಲಿ. ಅಪ್ಪು ದೊಡ್ಮನೆಯ ದೊಡ್ಡ ನಟ ಅನ್ನುವುದನ್ನು ಸಾಭೀತು ಮಾಡಿ ಹೋಗಿದ್ದಾರೆ. ಅಕ್ಟೋಬರ್ 29ರಂದು ಅಪ್ಪು ನಮ್ಮೆಲ್ಲರನ್ನೂ ಅಗಲಿ ಇಂದಿಗೆ 18 ದಿನಗಳಾಗಿವೆ. ಇನ್ನೂ ದುಃಖದಿಂದ ಪುನೀತ್ ಫ್ಯಾನ್ಸ್ ಇನ್ನೂ ಹೊರಬಂದಿಲ್ಲ. ಆದರೆ, ನೋವಿನಲ್ಲಿರುವ ಅಭಿಮಾನಿಗಳಿಗೆ ಬೊಂಬೆ ಹಾಡು ದಾಖಲೆಯ ಕಥೆ ಹೇಳುವುದಕ್ಕೆ ಹೊರಟಿದೆ.
ಅಪ್ಪು ಫ್ಯಾನ್ಸ್ಗೆ 'ರಾಜಕುಮಾರ'ನ ದಾಖಲೆ ಖುಷಿ
ಹೌದು.. ಈ ನೋವು ತಕ್ಷಣಕ್ಕೆ ಕಡೆಯಾಗುವಂತಹದ್ದಲ್ಲ. ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಪುನೀತ್ ರಾಜ್ಕುಮಾರ್ರನ್ನು ಕಳಕೊಂಡ ಅಭಿಮಾನಿಗಳ ಪಾಡು ಯಾರಿಗೂ ಹೇಳಲಾಗದು. ಅಪಾರ ನೋವನ್ನು ಎದೆಯೊಳಗಿಟ್ಟುಕೊಂಡು ಅಪ್ಪು ನೆನೆಪನ್ನು ಅಜರಾಮರಾಗಿಸಲು ಅಭಿಮಾನಿಗಳೇ ಮುನ್ನುಗ್ಗುತ್ತಿದ್ದಾರೆ. ಈ ಮಧ್ಯೆ ನೊಂದಿರುವ ಪುನೀತ್ ಅಭಿಮಾನಿಗಳಿಗೆ ಖುಷಿಯ ವಿಷಯವೊಂದು ಸಿಕ್ಕಿದೆ. ಅಪ್ಪು ನಟಿಸಿದ ರಾಜಕುಮಾರ ಚಿತ್ರದ ಬೊಂಬೆ ಹೇಳುತೈತೆ ಹಾಡು ಹೊಸ ದಾಖಲೆ ಬರೆದಿದೆ.

ಬೊಂಬೆ ಹೇಳುತೈತೆ 100 ಮಿಲಿಯನ್ ವೀಕ್ಷಣೆ
ಪುನೀತ್ ರಾಜ್ಕುಮಾರ್ 42ನೇ ಹುಟ್ಟುಹಬ್ಬ ಆಚರಿಸಿಕೊಂಡ ಒಂದು ವಾರದ ಬಳಿಕ ರಿಲೀಸ್ ಆಗಿದ್ದ ಸಿನಿಮಾ ರಾಜಕುಮಾರ. ಸಂತೋಷ್ ಆನಂದ್ರಾಮ್ ನಿರ್ದೇಶಿಸಿದ್ದ ಈ ಸಿನಿಮಾ ದಾಖಲೆಗಳ ಮೇಲೆ ದಾಖಲೆ ಬರೆದಿತ್ತು. 2017, ಮಾರ್ಚ್ 24ರಂದು ತೆರೆಕಂಡಿದ್ದ ರಾಜಕುಮಾರ ಬಿಡುಗಡೆಗೂ ಮುನ್ನವೇ ಸದ್ದು ಮಾಡಿತ್ತು. ಅದಕ್ಕೆ ಕಾರಣ ಬೊಂಬೆ ಹೇಳುತೈತೆ ಹಾಡು. ವಿ.ಹರಿಕೃಷ್ಣ ಸಂಗೀತ ಸಂಯೋಜಿಸಿದ್ದ ಈ ಹಾಡಿಗೆ ವಿಜಯ್ ಪ್ರಕಾಶ್ ಧ್ವನಿಯಾಗಿದ್ದರು. ಮೊದಲು ಬೊಂಬೆ ಹೇಳುತೈತೆ ಹಾಡಿನ ಮೇಕಿಂಗ್ ಝಲಕ್ ರಿಲೀಸ್ ಮಾಡಲಾಗಿತ್ತು. ಆ ಹಾಡನ್ನು ಇಡೀ ರಾಜ್ಯದ ಜನತೆ ಹೊಗಳಿ ಕೊಂಡಾಡಿದ್ದರು. ಈ ಬೊಂಬೈ ಹೇಳುತೈತೆ ಸಾಂಗ್ ಅಪ್ಪು ನಿಧನದ ಬಳಿಕ ಮತ್ತಷ್ಟು ಜನಪ್ರಿಯವಾಗಿದೆ. ಯುಟ್ಯೂಬ್ನಲ್ಲಿ ಬರೋಬ್ಬರಿ 100 ಮಿಲಿಯನ್ ವೀಕ್ಷಣೆ ಕಂಡು ದಾಖಲೆ ಬರೆದಿದೆ. ಭಾರತದಲ್ಲಿ ಮೇಕಿಂಗ್ ವಿಡಿಯೋಗೆ ಇಷ್ಟೊಂದು ವೀವ್ಸ್ ಸಿಕ್ಕಿಲ್ಲವೆಂದು ಅಪ್ಪು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.
ಬಾಕ್ಸಾಫೀಸ್ನಲ್ಲೂ ಚಿಂದಿ ಉಡಾಯಿಸಿದ್ದ 'ರಾಜಕುಮಾರ'
2017ರಲ್ಲಿ ತೆರೆಕಂಡಿದ್ದ 'ರಾಜಕುಮಾರ' ಬಾಕ್ಸಾಫೀಸ್ನಲ್ಲೂ ಧೂಳೆಬ್ಬಿಸಿತ್ತು. ಸ್ಯಾಂಡಲ್ವುಡ್ನಲ್ಲಿ ಇಲ್ಲಿವರೆಗೂ ಮಾಡಿದ್ದ ದಾಖಲೆಗಳನ್ನೆಲ್ಲಾ ಚಿಂದಿ ಉಡಾಯಿಸಿಬಿಟ್ಟಿತ್ತು. ಯೋಗರಾಜ್ ಭಟ್ ನಿರ್ದೇಶಿಸಿದ್ದ, 2006ರಲ್ಲಿ ತೆರೆಕಂಡಿದ್ದ ಮುಂಗಾರು ಮಳೆ ಒಟ್ಟು 60 ಕೋಟಿಗೂ ಅಧಿಕ ಹಣ ಗಳಿಸಿತ್ತು. ಆ ದಾಖಲೆಯನ್ನು ಸಂತೋಷ್ ಆನಂದ್ರಾಮ್ ನಿರ್ದೇಶಿಸಿದ್ದ ಮಿಸ್ಟರ್ ಅಂಡ್ ಮಿಸ್ಸಸ್ ರಾಮಾಚಾರಿ ಮುರಿದು ಹಾಕಿತ್ತು. ರಾಕಿಂಗ್ ಸ್ಟಾರ್ ಸಿನಿಮಾದ ದಾಖಲೆಯನ್ನು ಮುರಿದಿದ್ದು, ಪುನೀತ್ ರಾಜ್ಕುಮಾರ್ ನಟಿಸಿದ ಇದೇ ರಾಜಕುಮಾರ್. ಬಾಕ್ಸಾಫೀಸ್ನಲ್ಲಿ 75 ಕೋಟಿಗೂ ಅಧಿಕಗಳಿಕೆ ಕಂಡಿತ್ತು. ನಿರ್ಮಾಪಕರು 60 ಕೋಟಿಗೂ ಅಧಿಕ ಹಣ ಲಾಭ ಮಾಡಿದ್ದರು ಎಂಬುದನ್ನು ಸ್ಯಾಂಡಲ್ವುಡ್ನ ವಿತರಕರ ಮೂಲಗಳಿಂದ ಮಾಹಿತಿ ಹೊರಬಿದ್ದಿತ್ತು.
ಮುಂಬೈ ಅಭಿಮಾನಿಗಳಿಂದ ಅಪ್ಪುಗೆ ಗೌರವ
ಪುನೀತ್ ರಾಜ್ಕುಮಾರ್ ಮುಂಬೈ ಅಭಿಮಾನಿಗಳಿಂದ ನವೆಂಬರ್ 16ರಂದು ಸಂಜೆ ಏಳು ಗಂಟೆಗೆ ಹಾಡೊಂದು ಬಿಡುಗಡೆಯಾಗಲಿದೆ. ಈ ಹಾಡನ್ನು ಮುಂಬೈನಲ್ಲಿರುವ ಪುನೀತ್ ಅಭಿಮಾನಿಗಳೇ ಸಿದ್ಧಪಡಿಸಿದ್ದು, ಅಪ್ಪುಗೆ ಗೌರವ ಸೂಚಿಸುವ ಸಲುವಾಗಿ ಈ ಹಾಡನ್ನು ಬಿಡುಗಡೆ ಮಾಡಲಾಗುತ್ತಿದೆ. ಇದೇ ದಿನ ಸ್ಯಾಂಡಲ್ವುಡ್ ವತಿಯಿಂದ ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿಯ ನೇತೃತ್ವದಲ್ಲಿ ಪುನೀತ್ ನಮನ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ.


Click it and Unblock the Notifications











