ಹಣ ಪಡೆಯದೇ ಪುನೀತ್ ಅಭಿನಯಿಸಿದ್ದ ಜಾಹೀರಾತುಗಳದೆಷ್ಟು ಗೊತ್ತೆ?
ನಟ ಪುನೀತ್ ರಾಜ್ಕುಮಾರ್ ತಮ್ಮ ನಟನೆಯಿಂದ ಮಾತ್ರವೇ ಅಲ್ಲ ಸಮಾಜ ಸೇವೆಯಿಂದಲೂ ಜನಸಮುದಾಯವನ್ನು ಸೆಳೆದಿದ್ದವರು.
ಬಲಗೈಲಿ ಕೊಟ್ಟದ್ದು ಎಡಗೈಗೆ ತಿಳಿಯಬಾರದೆಂಬ ತತ್ವದಲ್ಲಿ ನಂಬಿಕೆ ಇಟ್ಟಿದ್ದ ಪುನೀತ್ ರಾಜ್ಕುಮಾರ್ ತಾವು ಮಾಡಿದ ಸಮಾಜ ಸೇವೆಗಳಿಗೆ ಎಂದೂ ಪ್ರಚಾರ ಬಯಸಿದವರಲ್ಲ. ವೈಯಕ್ತಿಕವಾಗಿ ದಾನ-ಧರ್ಮ, ಸೇವೆಗಳನ್ನು ಮಾಡುವ ಜೊತೆಗೆ, ಸರ್ಕಾರದ ಜೊತೆ ನಿಂತು ನಾಡಿನ ಜನರನ್ನು ಜಾಗೃತಿಗೊಳಿಸುವ, ಸೌಲಭ್ಯಗಳನ್ನು ತಲುಪಿಸುವ ಕಾರ್ಯವನ್ನೂ ಮಾಡಿದ್ದರು ಪುನೀತ್ ರಾಜ್ಕುಮಾರ್.
ಪುನೀತ್ ರಾಜ್ಕುಮಾರ್ ಅವರಷ್ಟು ಹೆಚ್ಚು ಸಂಖ್ಯೆಯಲ್ಲಿ ಸರ್ಕಾರಿ ಜಾಹೀರಾತುಗಳಲ್ಲಿ ಕಾಣಿಸಿಕೊಂಡ ಮತ್ತೊಬ್ಬ ಕರ್ನಾಟಕದ ನಟ ಇಲ್ಲ. ಆದರೆ ಯಾವುದೇ ಸರ್ಕಾರಿ ಜಾಹೀರಾತಿಗೆ ಪುನೀತ್ ರಾಜ್ಕುಮಾರ್ ಒಂದು ಬಿಡಿಗಾಸೂ ಹಣ ಪಡೆಯುತ್ತಿರಲಿಲ್ಲ ಎಂಬುದು ವಿಶೇಷ.
ನಂದಿನಿ (ಕರ್ನಾಟಕ ಹಾಲು ಒಕ್ಕೂಟ)ದ ಹಲವು ಜಾಹೀರಾತುಗಳಲ್ಲಿ ಹಲವು ವರ್ಷ ನಟ ಪುನೀತ್ ರಾಜ್ಕುಮಾರ್ ಕಾಣಿಸಿಕೊಂಡರು. ಆದರೆ ಅದಕ್ಕಾಗಿ ಅವರು ಹಣ ಪಡೆಯಲಿಲ್ಲ. ನಟ ರಾಜ್ಕುಮಾರ್ ಸಹ ನಂದಿನಿ ಜಾಹೀರಾತನ್ನು ಉಚಿತವಾಗಿ ಮಾಡಿದ್ದರು.

ಚಾಮರಾಜ ನಗರ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ರಾಯಭಾರಿಯಾಗಿದ್ದರು ನಟ ಪುನೀತ್ ರಾಜ್ಕುಮಾರ್. ಇದಕ್ಕಾಗಿಯೂ ಅವರು ಚಿಕ್ಕಾಸು ಪಡೆದಿರಲಿಲ್ಲ. ಸ್ವತಃ ನಿಸರ್ಗ ಪ್ರೇಮಿಯಾಗಿದ್ದ ಪುನೀತ್ ಈ ಕಾರ್ಯವನ್ನು ಉಚಿತವಾಗಿ ಮಾಡಿದ್ದರು.
ಕೌಶಲ್ಯ ಕರ್ನಾಟಕ ಯೋಜನೆಯ ರಾಯಭಾರಿಯೂ ಆಗಿದ್ದರು ಪುನೀತ್. ಉದ್ಯಮಶೀಲತೆ, ಎಫಿಷಿಯಂಟ್ ಲೈಂಟಿಂಗ್ ಪ್ರೋಗ್ರಾಂಗೂ ಪುನೀತ್ ರಾಯಭಾರಿ ಆಗಿದ್ದರು. ಸಬ್ಸಿಡಿ ದರದಲ್ಲಿ ಎಲ್ಇಡಿ ಬಲ್ಬ್ ವಿತರಣೆ ಯೋಜನೆ ಹೊರತಂದಾಗ ಅದಕ್ಕೆ ಜಾಹೀರಾತು ನೀಡಿದ್ದು ಪುನೀತ್ ರಾಜ್ಕುಮಾರ್. ಅವರೊಟ್ಟಿಗೆ ನಟಿ ರಮ್ಯಾ ಸಹ ಇದ್ದರು. ಆಗ ಡಿ.ಕೆ.ಶಿವಕುಮಾರ್ ಇಂಧನ ಸಚಿವರಾಗಿದ್ದರು.
ಬಿಎಂಟಿಸಿ ಬಸ್ ಆದ್ಯತಾ ಪಥ ಕಾರ್ಯಕ್ರಮಕ್ಕೂ ಪುನೀತ್ ರಾಜ್ಕುಮಾರ್ ಅಂಬಾಸಿಡರ್ ಆಗಿದ್ದರು. ಪುನೀತ್ ನಿಧನ ಹೊಂದಿದಾಗ ಬಿಎಂಟಿಸಿಯು ಅದೇ ಜಾಹೀರಾತನ್ನು ಟ್ವಿಟ್ಟರ್ನಲ್ಲಿ ಪ್ರಕಟಿಸಿ ಪುನೀತ್ ಅಗಲಿಕೆಗೆ ಸಂತಾಪ ಸೂಚಿಸಿತು.
ಕಿಮ್ಮನೆ ರತ್ನಾಕರ್ ಶಿಕ್ಷಣ ಮಂತ್ರಿಗಳಾಗಿದ್ದಾಗ ಸಂಭಾವನೆ ಪಡೆಯದೆ ಆರ್ಟಿಇ ಕಾರ್ಯಕ್ರಮಕ್ಕೆ ಪ್ರಚಾರ ನೀಡಿದ್ದರು ಪುನೀತ್ ರಾಜ್ಕುಮಾರ್. ಪುನೀತ್ ಧನ್ಯವಾದ ಸಲ್ಲಿಸುತ್ತಾ, ''ನೀವು ರಾಜಕುಮಾರನೇ ಮಗನೇ ಹೆಸರಲ್ಲೇ ಅಲ್ಲ ಗುಣದಲ್ಲೂ'' ಎಂದಿದ್ದರಂತೆ ಕಿಮ್ಮನೆ. ಆಗ ನಗುತ್ತಾ, ''ಅಪ್ಪಾಜಿಯ ಆಶೀರ್ವಾದ'' ಎಂದಿದ್ದರಂತೆ. ಈ ವಿಷಯವನ್ನು ಕಿಮ್ಮನೆ ಇಂದು ನೆನಪಿಸಿಕೊಂಡಿದ್ದಾರೆ.
ನಟ ಪುನೀತ್ ರಾಜ್ಕುಮಾರ್ ರಾಜಕೀಯದಿಂದ ಸದಾ ದೂರ. ಸ್ವತಃ ಅವರ ಅತ್ತಿಗೆ ಗೀತಾ ಶಿವರಾಜ್ ಕುಮಾರ್ ಚುನಾವಣೆಗೆ ಸ್ಪರ್ಧಿಸಿದಾಗ ಪುನೀತ್ ರಾಜ್ಕುಮಾರ್ ಅವರ ಪರವಾಗಿ ಪ್ರಚಾರಕ್ಕೆ ಬರಲಿಲ್ಲ. ರಾಜಕೀಯದಿಂದ ದೂರ ಉಳಿಯುವ ಅವರ ತಂದೆಯ ಅಚಲ ನಿರ್ಧಾರದಂತೆ ಪುನೀತ್ ಸಹ ನಿರ್ಧರಿಸಿದ್ದರು. ಆದರೆ ಚುನಾವಣೆ ಸಮಯದಲ್ಲಿ ಚುನಾವಣಾ ಆಯೋಗದ ಜೊತೆ ಸೇರಿ ಮತದಾನ ಜಾಗೃತಿ ಅಭಿಯಾನ ಮಾಡುತ್ತಿದ್ದರು. ಸ್ವತಃ ಪ್ರತಿ ಬಾರಿಯು ಜವಾಬ್ದಾರಿಯುತ ನಾಗರೀಕನಂತೆ ಮತದಾನ ಮಾಡುತ್ತಿದ್ದರು ಅಪ್ಪು.


Click it and Unblock the Notifications











