ಗಂಧದ ಗುಡಿ ಚಿತ್ರೀಕರಣದ ವೇಳೆ ಪುನೀತ್ ಸರ್ ಇದ್ದ ದೋಣಿ ಮಗುಚಿತ್ತು, ಭಯವಾಗಿತ್ತು: ಚಿತ್ರತಂಡ
ಪುನೀತ್ ರಾಜ್ಕುಮಾರ್ ಅವರ ಅಂತಿಮ ಚಿತ್ರ ಗಂಧದಗುಡಿ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಈಗಾಗಲೇ ಮೂವತ್ತು ಕೋಟಿ ಗ್ರಾಸ್ ಕಲೆಕ್ಷನ್ ಮಾಡಿರುವ ಗಂಧದಗುಡಿ 25 ದಿನಗಳನ್ನು ಪೂರೈಸುವತ್ತ ಹೆಜ್ಜೆ ಇಟ್ಟಿದೆ. ಇಲ್ಲಿಯವರೆಗೂ ಕಮರ್ಷಿಯಲ್ ಚಿತ್ರಗಳಲ್ಲಿ ಅಭಿನಯಿಸಿದ್ದ ಪುನೀತ್ ರಾಜ್ಕುಮಾರ್ ಕರ್ನಾಟಕದ ವನ್ಯ ಸಂಪತ್ತನ್ನು ಬೆಳ್ಳಿತೆರೆ ಮೇಲೆ ತೋರಿಸಬೇಕು ಹಾಗೂ ಇಡೀ ರಾಜ್ಯದ ಜನತೆ ಇದನ್ನು ನೋಡಬೇಕು ಎಂಬ ಮಹಾದಾಸೆಯಿಂದ ತಯಾರಿಸಿದ್ದ ಚಿತ್ರವಿದು.
ಈ ಚಿತ್ರವನ್ನು ಅಮೋಘವರ್ಷ ತುಂಬಾ ಅಚ್ಚುಕಟ್ಟಾಗಿ ನಿರ್ದೇಶಿಸಿದ್ದರು, ರಾಜ್ಯದ ಅರಣ್ಯ, ಸಮುದ್ರ ಹಾಗೂ ನದಿಯ ದೃಶ್ಯಗಳನ್ನು ರಿಚ್ ಅಗಿ ತೆರೆ ಮೇಲೆ ತರುವಲ್ಲಿ ಯಶಸ್ವಿಯಾಗಿತ್ತು ಚಿತ್ರತಂಡ. ಚಿತ್ರ ವೀಕ್ಷಿಸಲು ಚಿತ್ರಮಂದಿರಕ್ಕೆ ಆಗಮಿಸಿದ್ದ ಸಿನಿ ರಸಿಕರು ಮನಸಾರೆ ಚಿತ್ರವನ್ನು ಮೆಚ್ಚಿಕೊಂಡರು, ಅದರಲ್ಲಿಯೂ ಚಿತ್ರದ ಛಾಯಾಗ್ರಹಣಕ್ಕೆ ಮನ ಸೋತಿದ್ದರು.
ಹೀಗೆ ಗಂಧದ ಗುಡಿ ಕುರಿತಾಗಿ ದೊಡ್ಡ ಮಟ್ಟದ ಮೆಚ್ಚುಗೆ ವ್ಯಕ್ತವಾಗಿತ್ತು. ಇಷ್ಟರ ಮಟ್ಟಿಗೆ ಪ್ರಶಂಸೆ ಗಿಟ್ಟಿಸಿಕೊಂಡ ಗಂಧದ ಗುಡಿ ಚಿತ್ರವನ್ನು ತೆರೆ ಮೇಲೆ ತರಲು ಚಿತ್ರತಂಡ ಸಾಲು ಸಾಲು ಸಾಹಸಗಳನ್ನೇ ಮಾಡಿತ್ತು. ಜನರ ಸಂಪರ್ಕವಿಲ್ಲದ ವನ್ಯ ಮೃಗಗಳಿರುವ ದಟ್ಟ ಕಾಡಿನಲ್ಲಿ ಇಷ್ಟು ಅಚ್ಚುಕಟ್ಟಾಗಿ ಚಿತ್ರೀಕರಣ ಮಾಡುವುದು ತಮಾಷೆಯ ಮಾತಲ್ಲ. ಇನ್ನು ಚಿತ್ರತಂಡ ಗಂಧದ ಗುಡಿ ತೆರೆ ಹಿಂದಿನ ಕಥೆಯನ್ನು ವಿಶೇಷ ಸಂಚಿಕೆಗಳನ್ನು ಯುಟ್ಯೂಬ್ನಲ್ಲಿ ಬಿಡುಗಡೆ ಮಾಡುವ ಮೂಲಕ ಬಿಚ್ಚಿಟ್ಟಿದೆ. ಮೊನ್ನೆಯಷ್ಟೇ ಗಂಧದ ಗುಡಿ ಬಿಹೈಂಡ್ ದ ಸೀನ್ನ ಮೊದಲ ಸಂಚಿಕೆಯನ್ನು ಹಂಚಿಕೊಂಡಿದ್ದ ತಂಡ ಇಂದು ( ನವೆಂಬರ್ 16 ) ಎರಡನೇ ಸಂಚಿಕೆಯನ್ನು ಬಿಡುಗಡೆಗೊಳಿಸಿದೆ. ಈ ಸಂಚಿಕೆಯಲ್ಲಿ ಚಿತ್ರತಂಡ ಕಾಳಿ ನದಿ ಭಾಗದ ಚಿತ್ರೀಕರಣದ ವೇಳೆ ಸಂಭವಿಸಿದ್ದ ಚಿಕ್ಕ ಅಪಘಾತವನ್ನು ಬಿಚ್ಚಿಟ್ಟಿದೆ.

ಅಪ್ಪು ಇದ್ದ ದೋಣಿ ಮಗುಚಿತ್ತು
ಪುನೀತ್ ರಾಜ್ಕುಮಾರ್ಗೆ ಗಂಧದ ಗುಡಿ ಸುತ್ತಲು ಸಾಥ್ ನೀಡಿದ್ದ ಅಮೋಘವರ್ಷ ಮಾತನಾಡಿ 'ಕಾಳಿ ನದಿಯ ಚಿತ್ರೀಕರಣ ಮಾಡುತ್ತಿದ್ದಾಗ ಒಂದು ದೋಣಿಯನ್ನು ಆಯೋಜಿಸಿಕೊಂಡಿದ್ದೆವು. ನಾನು ಮತ್ತು ಅಪ್ಪು ಸರ್ ಇಬ್ಬರೂ ಬ್ಯಾಗ್ ಎಲ್ಲಾ ಹಾಕಿಕೊಂಡು ಸಿದ್ಧರಾಗಿ ದೋಣಿ ಹತ್ತಿ ಸುಮಾರು ನೂರು ಮೀಟರ್ ಹೋದ ನಂತರ ದೋಣಿ ಮಗುಚಿಬಿಟ್ಟಿತು ಹಾಗೂ ಸ್ವಲ್ಪ ಸಮಯದಲ್ಲೇ ಮೇಲೆದ್ದ ಅಪ್ಪು ಸರ್ ಏನು ಇದು ಹೀಗಾಗೋಯ್ತಲ್ಲ ಎಂದು ನಗುತ್ತಿದ್ದರು' ಎಂದು ಅನುಭವವನ್ನು ಹಂಚಿಕೊಂಡರು.

ಎಲ್ಲವೂ ಸರಿ ಇದೆ ಎಂದು ಮೇಲೆ ಎದ್ದಿದ್ರು ಅಪ್ಪು
ಈ ವೇಳೆ ತುಂಬಾ ಭಯವಾಗಿತ್ತು ಹಾಗೂ ಪುನೀತ್ ಅವರ ಅಂಗರಕ್ಷಕ ಛಲಪತಿ ನೀರಿಗೂ ಸಹ ಧುಮುಕಿದ್ದರು, ಅಷ್ಟರಲ್ಲಿ ಅಪ್ಪು ಅವರೇ ಮೇಲೆ ಬಂದು ಏನಾಗಿಲ್ಲ, ಎಲ್ಲವೂ ಸರಿ ಇದೆ ಎಂದು ತಿಳಿಸಿದರು ಎಂದು ಚಿತ್ರದ ಕಾರ್ಯಕಾರಿ ನಿರ್ಮಾಪಕ ಸತೀಶ್ ವಿ ಹೇಳಿಕೊಂಡರು ಹಾಗೂ ಇಡೀ ಚಿತ್ರೀಕರಣದಲ್ಲಿ ಭಯವಾಗಿದ್ದ ಘಟನೆ ಇದು ಎಂದರು.

ನಾವು ಮಾಡಿದ್ದೇವೆ ಎಂದೂ ಎಲ್ಲರೂ ಮಾಡಬೇಡಿ!
ಇನ್ನೂ ಮುಂದುವರಿದು ಮಾತನಾಡಿರುವ ಅಮೋಘವರ್ಷ ನದಿಯಲ್ಲಿ ನಾವು ಮಾಡಿದ್ದೇವೆ ಎಂದು ಎಲ್ಲರೂ ಬೋಟಿಂಗ್ ಮಾಡಬೇಡಿ, ನಮಗೆ ಅಲ್ಲಿ ರಕ್ಷಾಕವಚ ಇತ್ತು ಹಾಗೂ ಸಹಾಯಕ್ಕಾಗಿ ಹೆಚ್ಚುವರಿ ದೋಣಿಗಳಿದ್ದವು ಎಂದು ಸಂದೇಶ ನೀಡಿದರು. ಈ ಮೂಲಕ ಸರಿಯಾದ ಸಿದ್ಧತೆ ಇಲ್ಲದೇ ಬೋಟಿಂಗ್ ಮಾಡಿದರೆ ಅಪಾಯ ಸಂಭವಿಸಲಿದೆ ಎಂದು ಅಮೋಘವರ್ಷ ಎಚ್ಚರಿಸಿದರು.


Click it and Unblock the Notifications











