ಸಿನಿಮಾ ಕಾರ್ಮಿಕರ ನೆರವಿಗೆ 10 ಲಕ್ಷ ನೀಡಿದ ಪುನೀತ್ ರಾಜ್ಕುಮಾರ್
ಹಲವು ಸಿನಿಮಾ ನಟರುಗಳು ಕೋವಿಡ್ ಸಂಕಷ್ಟದಲ್ಲಿ ಜನರ ನೆರವಿಗೆ ನಿಲ್ಲುತ್ತಿದ್ದಾರೆ. ಯಶ್, ಉಪೇಂದ್ರ, ಸುದೀಪ್ ಸೇರಿದಂತೆ ಹಲವಾರು ನಟ-ನಟಿಯರು ಜನರಿಗೆ ನೆರವಾಗುತ್ತಿದ್ದಾರೆ.
Recommended Video
ಸಿನಿಮಾ ರಂಗ ಕೊರೊನಾದಿಂದ ಜರ್ಜರಿತವಾಗಿದೆ. ಸಾವಿರಾರು ಮಂದಿ ಸಿನಿಮಾ ಕಾರ್ಮಿಕರು ಉದ್ಯೋಗ ಇಲ್ಲದೆ ಜೀವನ ನಿರ್ವಹಣೆ ಕಷ್ಟಕರವಾಗಿ ಪರಿಣಮಿಸಿದೆ. ಚಲನಚಿತ್ರ ಅಕಾಡೆಮಿ, ಕೆಲವು ಸ್ಟಾರ್ ನಟರು ಸಿನಿಮಾ ಕಾರ್ಮಿಕರ ನೆರವಿಗೆ ಧಾವಿಸಿದ್ದಾರೆ.
ನಟ ಪುನೀತ್ ರಾಜ್ಕುಮಾರ್ ಅವರು ಸಿನಿಮಾ ಕಾರ್ಮಿಕರ ನೆರವಿಗಾಗಿ 10 ಲಕ್ಷ ರೂ. ದೇಣಿಗೆಯನ್ನು ನೀಡಿದ್ದಾರೆ. ದೇಣಿಗೆ ಸ್ವೀಕರಿಸಿರುವ ಸಾ.ರಾ.ಗೋವಿಂದು ಪುನೀತ್ ರಾಜ್ಕುಮಾರ್ಗೆ ಧನ್ಯವಾದ ತಿಳಿಸಿದ್ದಾರೆ.

ನಟ ಪುನೀತ್ ಕೊರೊನಾ ಸಂಕಷ್ಟಕ್ಕೆ ನೆರವು ನೀಡುತ್ತಿರುವುದು ಇದು ಮೊದಲನೇನಲ್ಲ. ಕಳೆದ ವರ್ಷ ಕರ್ನಾಟಕವು ಕೊರೊನಾದೊಂದಿಗೆ ದೊಡ್ಡ ಹೋರಾಟದಲ್ಲಿ ನಿರತವಾಗಿದ್ದಾಗ ಪುನೀತ್ ಅವರು ಕೋವಿಡ್ ವಿರುದ್ಧ ಹೋರಾಟಕ್ಕೆ 1 ಕೋಟಿ ರು ದೇಣಿಗೆ ನೀಡಿದ್ದರು. ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚೆಕ್ ಹಸ್ತಾಂತರಿಸಿದ್ದರು ಪುನೀತ್ ರಾಜ್ಕುಮಾರ್.
ಕೆಲವು ದಿನಗಳ ಹಿಂದಷ್ಟೆ ನಟ ಯಶ್ ಚಿತ್ರರಂಗದ ಪೋಷಕ ಕಲಾವಿದರು, ಸಿನಿ ಕಾರ್ಮಿಕರು ಇತರೆ ತಂತ್ರಜ್ಞರು ಸೇರಿ ಒಟ್ಟು 30,000 ಕ್ಕೂ ಹೆಚ್ಚು ಮಂದಿ ಬ್ಯಾಂಕ್ ಖಾತೆಗೆ 5000 ಮೊತ್ತವನ್ನು ಜಮಾ ಮಾಡಿದ್ದಾರೆ. ಯಶ್ ಅವರ ಈ ಕಾರ್ಯ ಬಹು ಮೆಚ್ಚುಗೆಗೆ ಪಾತ್ರವಾಗಿದೆ.
ಕಿಚ್ಚ ಸುದೀಪ್ ಸಹ ಹಿರಿಯ ಪೋಷಕ ನಟರು, ನಿರ್ದೇಶಕರಿಗೆ ಔಷಧ, ದಿನಸಿ ಪದಾರ್ಥಗಳನ್ನು ಕಳುಹಿಸಿದ್ದಾರೆ. ಉಪೇಂದ್ರ ಸಹ ಸಹಾಯ ಮಾಡುತ್ತಿದ್ದಾರೆ. ಸ್ಟಾರ್ ನಟರು ಮಾತ್ರವಲ್ಲದೆ ಹಲವಾರು ಇತರ ನಟ-ನಟಿಯರು ಸಹ ದೊಡ್ಡ ಮಟ್ಟದಲ್ಲಿ ಜನರಿಗೆ, ಸಿನಿಮಾ ಕಾರ್ಮಿಕರಿಗೆ, ಪೋಷಕ ಕಲಾವಿದರಿಗೆ ನೆರವು ನೀಡುತ್ತಿದ್ದಾರೆ.


Click it and Unblock the Notifications











