ಸುಧಾಮೂರ್ತಿ ಕಾದಂಬರಿ ಆಧಾರಿತ ಚಿತ್ರಕ್ಕೆ ಪುನೀತ್
ಶೀಘ್ರದಲ್ಲೇ ಅವರ ಈ ಕನಸು ನೆರವೇರಲಿದೆ. ಡಾ.ರಾಜ್ ಕುಟುಂಬದ ಎಲ್ಲರೂ ಈಗಾಗಲೆ ಕಾದಂಬರಿ ಆಧಾರಿತ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಶಿವರಾಜ್ ಕುಮಾರ್ ಅವರು ರಥಸಪ್ತಮಿ, ಚಿಗುರಿದ ಕನಸು, ಜನುಮದ ಜೋಡಿ ಹೀಗೆ ಹಲವಾರು ವೈವಿಧ್ಯಮಯ ಪಾತ್ರಗಳನ್ನು ಪೋಷಿಸಿದ್ದಾರೆ.
ರಾಘವೇಂದ್ರ ರಾಜ್ ಕುಮಾರ್ ಅವರು ಸಹ ಅಷ್ಟೇ ಕಾದಂಬರಿ ಆಧಾರಿತ 'ಸಾಗರ ದೀಪ' ಚಿತ್ರದಲ್ಲಿ ಅಭಿನಯಿಸಿದ್ದರು. ಇನ್ನು ಅಣ್ಣಾವ್ರ ಬಗ್ಗೆ ಹೇಳುವುದೇ ಬೇಡ ಅವರ ಹಲವಾರು ಚಿತ್ರಗಳು ಕಾದಂಬರಿಗಳನ್ನು ಆಧರಿಸಿಯೇ ಮೂಡಿಬಂದಿವೆ. ಆದರೆ ಇದೇ ಮೊದಲ ಬಾರಿಗೆ ಪುನೀತ್ ಕಾದಂಬರಿ ಆಧಾರಿತ ಚಿತ್ರವೊಂದರಲ್ಲಿ ಅಭಿನಯಿಸಲು ಮುಂದಾಗಿದ್ದಾರೆ.
ಇಷ್ಟಕ್ಕೂ ಅವರು ಅಭಿನಯಿಸಲು ಮುಂದಾಗಿರುವುದು ಸುಧಾಮೂರ್ತಿ ಅವರ 'ತುಮುಲ' ಕಾದಂಬರಿ ಆಧಾರಿತ ಚಿತ್ರದಲ್ಲಿ. ಈ ಕೃತಿಗೆ ಸಿನಿಮಾ ರೂಪ ನೀಡಲಿರುವವರು ಖ್ಯಾತ ನಿರ್ದೇಶಕ ಟಿ.ಎಸ್. ನಾಗಾಭರಣ. ಈಗಾಗಲೆ ಅವರು ರಾಜ್ ಕುಟುಂಬದ ಎಲ್ಲರಿಗೂ ಕಾದಂಬರಿ ಆಧಾರಿತ ಚಿತ್ರಗಳನ್ನು ನೀಡಿರುವುದು ಗೊತ್ತೇ ಇದೆ.
ವರನಟ ಡಾ.ರಾಜ್ ಕುಮಾರ್ ಅವರ ಆಕಸ್ಮಿಕ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಚಿಗುರಿದ ಕನಸು, ಜನುಮದ ಜೋಡಿ ಹಾಗೂ ರಾಘವೇಂದ್ರ ರಾಜ್ ಕುಮಾರ್ ಅವರ 'ಸಾಗರದೀಪ' ಚಿತ್ರಗಳನ್ನು ನಿರ್ದೇಶಿಸಿದ್ದರು. ಇವೆಲ್ಲವೂ ಕಾದಂಬರಿ ಆಧಾರಿತ ಚಿತ್ರಗಳು ಎಂಬುದು ವಿಶೇಷ.
ಕನ್ನಡ ಚಿತ್ರಗಳ ಹಿರಿಯ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಅವರ ವಿಶೇಷ ಆಸಕ್ತಿಯ ಮೇರೆಗೆ ಸುಧಾಮೂರ್ತಿ ಅವರ ಕೃತಿಗೆ ದೃಶ್ಯರೂಪ ನೀಡಲಾಗುತ್ತಿದೆ. ನಮ್ಮ ಬ್ಯಾನರ್ನಲ್ಲಿ ಕಾದಂಬರಿ ಆಧಾರಿತ ಸಿನಿಮಾ ಬಂದು ತುಂಬ ದಿನಗಳಾಗಿವೆ ಎಂಬ ಕೊರಗು ಅವರನ್ನು ಕಾಡುತ್ತಿತ್ತು.
"ಇದುವರೆಗೂ ಅಪ್ಪು ಕಾದಂಬರಿ ಆಧಾರಿತ ಚಿತ್ರದಲ್ಲಿ ಅಭಿನಯಿಸಿಲ್ಲ. ಒಂದು ಒಳ್ಳೆಯ ಕಾದಂಬರಿಯನ್ನು ಸಿನಿಮಾ ಮಾಡಿಕೊಡಿ" ಎಂದು ಸ್ವತಃ ಅವರೇ ನಾಗಾಭರಣ ಅವರನು ವಿನಂತಿಸಿಕೊಂಡರಂತೆ. ಆಗ ಸುಧಾಮೂರ್ತಿ ಅವರ 'ತುಮುಲ' ಕಾದಂಬರಿ ಬಗ್ಗೆ ನಾಗಾಭರಣ ಅವರು ಪ್ರಸ್ತಾಪಿಸಿದ್ದಾರೆ. ಇದಕ್ಕೆ ಪಾರ್ವತಮ್ಮ ಅವರ ಕಡೆಯಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ.
ಪುನೀತ್ ಕೂಡ ಅಷ್ಟೇ ಈ ಚಿತ್ರದಲ್ಲಿ ಅಭಿನಯಿಸಲು ತುದಿಗಾಲಲ್ಲಿ ನಿಂತಿದ್ದಾರೆ. ನನ್ನ ಕಾಲ್ಶೀಟ್ ಯಾವಾಗ ಬೇಕು ಹೇಳಿ ಅಂಕಲ್. ನಾನು ಚಿತ್ರದಲ್ಲಿ ಅಭಿನಯಿಸಲು ಸದಾ ಸಿದ್ಧ" ಎಂದಿದ್ದಾರಂತೆ. ಇನ್ನೇನು ಬೇಕು ನಾಗಾಭರಣ ಅವರು ಚಿತ್ರಕತೆ ಹೆಣೆಯುವುದೊಂದೇ ಬಾಕಿ.
ಸದ್ಯಕ್ಕೆ ಅದೇ ಕೆಲಸದಲ್ಲಿ ನಾಗಾಭರಣ ಅವರು ಬಿಜಿಯಾಗಿದ್ದಾರೆ. ಉಳಿದಂತೆ ಚಿತ್ರ ಯಾವಾಗ ಆರಂಭವಾಗುತ್ತದೆ, ಶೀರ್ಷಿಕೆ ಏನು, ಚಿತ್ರದ ತಾರಾಬಳಗ, ತಾಂತ್ರಿಕ ಬಳಗದಲ್ಲಿ ಯಾರಾರು ಇರುತ್ತಾರೆ ಎಂಬ ಬಗ್ಗೆ ಇನ್ನಷ್ಟೇ ತೀರ್ಮಾನವಾಗಬೇಕಾಗಿದೆ. ಅಲ್ಲಿಯವರೆಗೂ ನಿರೀಕ್ಷೆ ತಪ್ಪಿದ್ದಲ್ಲ. (ಏಜೆನ್ಸೀಸ್)


Click it and Unblock the Notifications












