5 ವರ್ಷದ ನಂತರ ಮತ್ತೆ 'ವಜ್ರೇಶ್ವರಿ ಕಂಬೈನ್ಸ್'ನಲ್ಲಿ ಪುನೀತ್ ಸಿನಿಮಾ.!
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇತ್ತೀಚೆಗಷ್ಟೇ 'PRK' (ಪಾರ್ವತಮ್ಮ ರಾಜ್ ಕುಮಾರ್) ನಿರ್ಮಾಣ ಸಂಸ್ಥೆಯನ್ನ ಸ್ಥಾಪಿಸಿ, ಹೊಸಬರ ಚಿತ್ರಗಳನ್ನ ನಿರ್ಮಿಸುತ್ತಿದ್ದಾರೆ. ಅದರ ಜೊತೆ ತಮ್ಮದೇ ಚಿತ್ರವನ್ನ ಕೂಡ ಈ ಬ್ಯಾನರ್ ನಲ್ಲಿ ನಿರ್ಮಾಣ ಮಾಡಲಿದ್ದಾರೆ.
ಹೀಗಿರುವಾಗ, ಪಾರ್ವತಮ್ಮ ರಾಜ್ ಕುಮಾರ್ ಸಾರಥ್ಯದ 'ವಜ್ರೇಶ್ವರಿ ಕಂಬೈನ್ಸ್'ನಲ್ಲಿ ಪುನೀತ್ ಮತ್ತೆ ಸಿನಿಮಾ ಮಾಡಲು ನಿರ್ಧರಿಸಿದ್ದಾರೆ. ಸುಮಾರು 5 ವರ್ಷದ ನಂತರ ಅಮ್ಮನ ಬ್ಯಾನರ್ ನಲ್ಲಿ ಅಪ್ಪು ಸಿನಿಮಾ ಮಾಡುತ್ತಿದ್ದಾರೆ.
ವಿಶೇಷ ಅಂದ್ರೆ ಈ ಚಿತ್ರವನ್ನ ದಿವಂಗತ ಪಾರ್ವತಮ್ಮ ರಾಜ್ ಕುಮಾರ್ ಅವರಿಗೆ ಸಮರ್ಪಣೆ ಮಾಡುವ ಸಲುವಾಗಿ ನಿರ್ಮಾಣ ಮಾಡುತ್ತಿದ್ದಾರಂತೆ. ಈ ಚಿತ್ರದ ಪೂರ್ತಿ ವಿವರ ತಿಳಿಯಲು ಮುಂದೆ ಓದಿ.....

ರಾಘಣ್ಣ ನಿರ್ಮಾಣ, ಅಪ್ಪು ನಟನೆ
'ವಜ್ರೇಶ್ವರಿ ಕಂಬೈನ್ಸ್' ಬ್ಯಾನರ್ ನಡಿ ನಿರ್ಮಾಣವಾಗಲಿರುವ ಚಿತ್ರವನ್ನ ರಾಘವೇಂದ್ರ ರಾಜ್ ಕುಮಾರ್ ನಿರ್ಮಾಣ ಮಾಡಲಿದ್ದಾರೆ. ಈ ಚಿತ್ರದಲ್ಲಿ ಪುನೀತ್ ನಾಯಕನಾಗಿ ನಟಿಸಲಿದ್ದಾರೆ.

ಕಥೆಗಾಗಿ ಹುಡುಕಾಟ
'ವಜ್ರೇಶ್ವರಿ ಕಂಬೈನ್ಸ್' ಮೊದಲಿನಿಂದಲೂ ಕಥೆಗೆ ಪ್ರಾಮುಖ್ಯತೆ ನೀಡುತ್ತಾ ಬಂದಿದೆ, ಹೀಗಾಗಿ, ಒಳ್ಳೆಯ ಕಥೆಗಾಗಿ ರಾಘಣ್ಣ ಹುಡುಕುತ್ತಿದ್ದಾರಂತೆ. ಈಗಾಗಲೇ ಹಲವರು ಕಥೆ ಹೇಳಿದ್ದಾರಂತೆ. ಒಂದೊಳ್ಳೆಯ ಕಥೆಯನ್ನ ಆಯ್ಕೆ ಮಾಡಿ ಸಿನಿಮಾ ಮಾಡಲು ಚಿಂತಿಸಿದ್ದಾರೆ.

ಸಕ್ಸಸ್ ನಿರ್ದೇಶಕರೇ ಬೇಕಾಗಿಲ್ಲ
ಉತ್ತಮವಾದ ಕಥೆಗಾಗಿ ಕಾಯುತ್ತಿರುವ ರಾಘಣ್ಣ, ನಿರ್ದೇಶಕರಿಗಾಗಿ ಕೂಡ ಹುಡುಕಾಟ ನಡೆಸುತ್ತಿದ್ದಾರಂತೆ. ಯಾವುದೇ ಹಿಟ್ ಸಿನಿಮಾ ನೀಡಿದ್ದಾರೆ ಎಂಬ ಮಾನದಂಡ ನಮಗೆ ಬೇಕಾಗಿಲ್ಲ ಎಂದು ಹೇಳುವ ಮೂಲಕ ಪ್ರತಿಭಾನ್ವಿತ ನಿರ್ದೇಶಕರಿಗೆ ಅವಕಾಶ ನೀಡುವ ಭರವಸೆ ವ್ಯಕ್ತಪಡಿಸಿದ್ದಾರೆ.

ಅಮ್ಮನ ನಿರ್ಮಾಣದಲ್ಲಿ ಕೊನೆಯ ಚಿತ್ರ ಯಾವುದು?
'ವಜ್ರೇಶ್ವರಿ ಕಂಬೈನ್ಸ್'ನಲ್ಲಿ ತಯಾರಾಗಿ 2012ರಲ್ಲಿ ಬಿಡುಗಡೆಯಾಗಿದ್ದ 'ಯಾರೇ ಕೂಗಾಡಲಿ' ಚಿತ್ರದಲ್ಲಿ ಅಪ್ಪು ಕೊನೆಯದಾಗಿ ಅಭಿನಯಿಸಿದ್ದರು. ಅದಕ್ಕು ಮುಂಚೆ 'ಅಪ್ಪು', 'ಅಭಿ', 'ಆಕಾಶ್', 'ಅರಸು', 'ವಂಶಿ', 'ಜಾಕಿ', 'ಹುಡುಗರು', 'ಅಣ್ಣಾಬಾಂಡ್' ಅಂತಹ ಪುನೀತ್ ಚಿತ್ರಗಳನ್ನ ಪಾರ್ವತಮ್ಮ ನಿರ್ಮಾಣ ಮಾಡಿದ್ದರು.

ಮುಂದಿನ ವರ್ಷ ಆರಂಭ
ಸದ್ಯ, ಹರ್ಷ ನಿರ್ದೇಶನ ಹಾಗೂ ಎಂ.ಎನ್ ಕುಮಾರ್ ನಿರ್ಮಾಣದ 'ಅಂಜನಿಪುತ್ರ' ಚಿತ್ರದಲ್ಲಿ ಪುನೀತ್ ನಟಿಸುತ್ತಿದ್ದಾರೆ. ಎಲ್ಲ ಅಂದುಕೊಂಡಂತೆ ಆದ್ರೆ, ಮುಂದಿನ ವರ್ಷದ ಮೇ ತಿಂಗಳಲ್ಲಿ ರಾಘಣ್ಣ ಹಾಗೂ ಪುನೀತ್ ಜೋಡಿಯ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ ಎನ್ನಲಾಗಿದೆ.


Click it and Unblock the Notifications











