ಗುರುಕಿರಣ್ ಪಾರ್ಟಿಯಲ್ಲಿ ಸಮಯ ಕಳೆದಿದ್ದ ಪುನೀತ್: ಅಲ್ಲೇನಾಯ್ತು?
ನಟ ಪುನೀತ್ ರಾಜ್ಕುಮಾರ್ ಇಂದು ಹಠಾತ್ತನೆ ನಿಧನ ಹೊಂದಿದ್ದಾರೆ. ನಿನ್ನೆಯೆಲ್ಲಾ ಆರಾಮವಾಗಿಯೇ ಇದ್ದ ವ್ಯಕ್ತಿ ಇಂದು ಹಠಾತ್ತನೆ ಅಸುನೀಗಿರುವುದು ಅಭಿಮಾನಿಗಳಿಗೆ, ಕುಟುಂಬ ವರ್ಗದವರಿಗೆ ತೀವ್ರ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.
ಪುನೀತ್ ರಾಜ್ಕುಮಾರ್ ಅವರಿಗೆ ನಿನ್ನೆ ರಾತ್ರಿಯೇ ಆರೋಗ್ಯ ಸರಿಯಿರಲಿಲ್ಲ ಎಂದು ಹೇಳಲಾಗುತ್ತಿದೆ. ಆದರೆ ಪುನೀತ್ ರಾಜ್ಕುಮಾರ್ ನಿನ್ನೆ ರಾತ್ರಿ ಸಂಗೀತ ನಿರ್ದೇಶಕ ಗುರುಕಿರಣ್ ಅವರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆ ಬಗ್ಗೆ ಗುರುಕಿರಣ್ ಅವರು ಮಾಧ್ಯಮಗಳೊಟ್ಟಿಗೆ ಮಾತನಾಡಿದ್ದಾರೆ.
''ನಿನ್ನೆ ರಾತ್ರಿ ಅವರು ನನ್ನೊಟ್ಟಿಗೆ ಇದ್ದರು. ರಾತ್ರಿ ನನಗೆ ಶುಭ ಹಾರೈಸಿದರು. ಸುಮಾರು ಎರಡು ಗಂಟೆಗಳ ಕಾಲ ಅವರು ನಮ್ಮೊಂದಿಗೆ ಮಾತನಾಡುತ್ತಾ, ನಗುತ್ತಾ ಕಾಲ ಕಳೆದರು. ಬಹಳ ಲವ-ಲವಿಕೆಯಿಂದ ಇದ್ದರು. ಅವರಿಗೆ ಆರೋಗ್ಯ ಸಮಸ್ಯೆ ಇರಬಹುದೆಂಬ ಅನುಮಾನವೂ ಯಾರಿಗೂ ಬರಲು ಸಾಧ್ಯವಿಲ್ಲವದಂತೆ ಅವರು ಇದ್ದರು'' ಎಂದರು ಗುರುಕಿರಣ್.

''ಬಹಳ ಕಾಲ ನಾವುಗಳು ಜೊತೆಗೆ ಇದ್ದೆವು. ಹಲವು ವಿಷಯಗಳ ಬಗ್ಗೆ ಅವರು ಮಾತನಾಡಿದರು. ನಗು-ನಗುತ್ತಾ ಇದ್ದರು. ಅವರಿಗೆ ರಾತ್ರಿಯೇ ಎದೆನೋವು ಇತ್ತು ಎಂದು ಕೆಲವರು ಹೇಳುತ್ತಿದ್ದಾರೆ, ಅದು ಸುಳ್ಳು, ಅವರು ನಮ್ಮೊಂದಿಗೆ ಇದ್ದಾಗ ಬಹಳ ಖುಷಿಯಿಂದ ಇದ್ದರು. ಬಳಲಿಕೆ ಏನೂ ಇರಲಿಲ್ಲ'' ಎಂದಿದ್ದಾರೆ ಗುರುಕಿರಣ್.
''ನನಗೆ ಅವರೊಟ್ಟಿಗಿನ ಬಂಧ ಬಹಳ ಹಳೆಯದ್ದು. ವೃತ್ತಿ ಸಂಬಂಧಕ್ಕಿಂತಲೂ ಮಾನವೀಯ ಸಂಬಂಧ ನಮ್ಮೊಂದಿಗೆ ಇತ್ತು. ದೊಡ್ಮನೆಯ ಯಾರಿಗೂ ತಾವು ಸ್ಟಾರ್ ಎಂಬ ಸಣ್ಣ ಅಹಂ ಸಹ ಇರಲಿಲ್ಲ. ಪುನೀತ್ ಪಾರ್ಟಿಯಿಂದ ಹೋದ ಮೇಲೂ ಹಲವರು ಪುನೀತ್ ಅವರ ಸರಳತೆ ಬಗ್ಗೆ ಮಾತನಾಡಿದ್ದರು'' ಎಂದು ಗುರುಕಿರಣ್ ಹೇಳಿದ್ದಾರೆ.
ಅದೇ ಪಾರ್ಟಿಯಲ್ಲಿ ಭಾಗಿಯಾಗಿದ್ದ ನಟ ಅನಿರುದ್ಧ ಸಹ ಮಾತನಾಡಿ, ''ಪುನೀತ್ ಪಾರ್ಟಿಯಲ್ಲಿ ಬಹಳ ಗೆಲುವಾಗಿದ್ದರು. ಹಲವು ವಿಷಯಗಳ ಬಗ್ಗೆ ನಮ್ಮೊಂದಿಗೆ ಮಾತನಾಡಿದರು. ತಾವು ಕಿಲೋಮೀಟರ್ ಗಟ್ಟಲೆ ಸೈಕಲ್ ತುಳಿಯುವ ವಿಷಯ. ವ್ಯಾಯಾಮ ಮಾಡುವ ವಿಷಯ. ಸಿನಿಮಾಗಳ ಬಗ್ಗೆ ಚರ್ಚೆ ಮಾಡಿದ್ದರು'' ಎಂದು ಅನಿರುದ್ಧ ಹೇಳಿದ್ದಾರೆ.
ಅದೇ ಪಾರ್ಟಿಯಲ್ಲಿ ನಟ ರಮೇಶ್ ಅರವಿಂದ್, ಗಾಯಕ ಹೇಮಂತ್ ಸೇರಿ ಹಲವರು ಭಾಗವಹಿಸಿದ್ದರು, ಸುಮಾರು ಮಧ್ಯರಾತ್ರಿ 12 ಗಂಟೆ ವರೆಗೆ ಪುನೀತ್ ರಾಜ್ಕುಮಾರ್ ಆ ಪಾರ್ಟಿಯಲ್ಲಿದ್ದರು.


Click it and Unblock the Notifications











