ಜೋಯಿಡಾ ವನ್ಯಜೀವಿ ತಾಣದಲ್ಲಿ ಪವರ್ ಸ್ಟಾರ್: ಜೇನು ಸವಿದು ಸಂತಸ ಪಟ್ಟ ಅಪ್ಪು
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸದ್ಯ ಉತ್ತರ ಕನ್ನಡ ಜಿಲ್ಲೆಯಲ್ಲಿ ಬೀಡು ಬಿಟ್ಟಿದ್ದಾರೆ. ಅಪ್ಪು ಜೋಯಿಡಾ, ದಾಂಡೇಲಿ ಅಂತ ಕಾಡು ಮೇಡು ಸುತ್ತಾಡುತ್ತಿದ್ದಾರೆ. ಜೊತೆಗೆ ಅಲ್ಲಿನ ಸ್ಥಳಿಯ ಆಹಾರ ಸವಿದು ಎಂಜಾಯ್ ಮಾಡುತ್ತಿದ್ದಾರೆ.
ಹೌದು, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸದ್ಯ ಜೋಯಿಡಾ ವನ್ಯ ಜೀವಿ ತಾಣದಲ್ಲಿದ್ದಾರೆ. ಕಾಳಿ ನದಿ ಕುರಿತು ಪವರ್ ಸ್ಟಾರ್ ಒಂದು ಸಾಕ್ಷ್ಯ ಚಿತ್ರ ಮಾಡುತ್ತಿದ್ದಾರೆ. ಈ ಸಾಕ್ಷ್ಯ ಚಿತ್ರದ ಚಿತ್ರೀಕರಣ ಸಲುವಾಗಿ ಪುನೀತ್ ಜೋಯಿಡಾಗೆ ಭೇಟಿ ನೀಡಿದ್ದಾರೆ. ಶೂಟಿಂಗ್ ವೇಳೆ ಅಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಅಪ್ಪು ಮಾರುಹೋಗಿದ್ದಾರೆ.
ಇದೇ ವೇಳೆ ಜೋಯಿಡಾದ ವಿಶೇಷ ಜೇನು ಸವಿದು ಸಂತೃಪ್ತರಾಗಿದ್ದಾರೆ. ಅಲ್ಲಿಯ ಹನಿ ಬೀ ಪಾರ್ಕ್ ನಲ್ಲಿ ಜೋನು ಕೃಷಿ ನೋಡಿ ಸಂತಸಪಟ್ಟಿದ್ದಾರೆ. ಭೇಟಿಯ ನೆನಪಿಗಾಗಿ ಹನಿ ಬೀ ಪಾರ್ಕ್ ನ ಟೀ ಶರ್ಟ್ ಹಾಕಿಕೊಂಡಿದ್ದಾರೆ. ಜೊತೆಗೆ ವನ್ಯಜೀವಿ ತಾಣದಲ್ಲಿ ಪಕ್ಷಿ ವೀಕ್ಷಣೆ ಮಾಡಿದ್ದಾರೆ.

ಇದೇ ಸಮಯದಲ್ಲಿ ಕಾಳಿ ಮಾತೆಯ ದರ್ಶನವನ್ನು ಪಡೆದಿದ್ದಾರೆ. ಅಪ್ಪು ನೋಡಲು ಅಭಿಮಾನಿಗಳು ಮುಗಿಬಿದ್ದರು. ಪ್ರೀತಿಯ ಅಭಿಮಾನಿಗಳನ್ನು ಮಾತನಾಡಿಸುತ್ತ ಅಲ್ಲಿಂದ ತೆರಳಿದರು. ಕಳೆದ 4 ದಿನಗಳಿಂದ ಈ ಸಾಕ್ಷ್ಯ ಚಿತ್ರದ ಚಿತ್ರೀಕರಣ ನಡೆಯುತ್ತಿದೆ.

ಇತ್ತೀಚಿಗೆ ದಾಂಡೇಲಿಯ ಅಭಿಮಾನಿ ಮನೆಯಲ್ಲಿ ಭೋಜನ ಸವಿದ ಫೋಟೋ ವೈರಲ್ ಆಗಿತ್ತು. ಅಂಗಳದಲ್ಲಿ ಎಲ್ಲರ ಜೊತೆ ಕುಳಿತು ಸಾಮಾನ್ಯ ವ್ಯಕ್ತಿಯಂತೆ ಊಟ ಮಾಡಿದ ಪುನೀತ್ ಫೋಟೋಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಇನ್ನೂ ಕೆಲವು ದಿನ ಸಾಕ್ಷ್ಯ ಚಿತ್ರ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ ಅಪ್ಪು.


Click it and Unblock the Notifications











