ಪುನೀತ್ ರಾಜ್ಕುಮಾರ್ ಈಡೇರದ ಕನಸು
ನಟ ಪುನೀತ್ ರಾಜ್ಕುಮಾರ್ ಇಂದು ನಿಧನರಾಗಿದ್ದಾರೆ. ಕನ್ನಡ ಚಿತ್ರರಂಗದ ಸ್ಟಾರ್ ನಟರಲ್ಲಿ ಒಬ್ಬರಾಗಿದ್ದ ಪುನೀತ್ ಇನ್ನೂ ಅಭಿನಯಿಸಬೇಕಾಗಿದ್ದ ಸಿನಿಮಾಗಳು ನೂರಾರಿದ್ದವು, ಮಾಡಬೇಕಿದ್ದ ಪಾತ್ರಗಳು ಹಲವಾರಿದ್ದವು.
ಸಿನಿಮಾವನ್ನೇ ಉಸಿರಾಡುತ್ತಿದ್ದ ಪುನೀತ್ ರಾಜ್ಕುಮಾರ್ ಸ್ವಂತದ ಸಿನಿಮಾ ನಿರ್ಮಾಣ ಸಂಸ್ಥೆಯೊಂದನ್ನು ಕಟ್ಟಿ ಕನ್ನಡಕ್ಕೆ ಅದ್ಭುತವಾದ ಹೊಸ ಮಾದರಿಯ ಸಿನಿಮಾಗಳನ್ನು ನೀಡುತ್ತಿದ್ದರು, ಜೊತೆಗೆ ಯುವ ಸಿನಿಕರ್ಮಿಗಳಿಗೆ ಪ್ರೋತ್ಸಾಹ ನೀಡುತ್ತಿದ್ದರು. ಇದರೆಲ್ಲದರ ಜೊತೆಗೆ ತಾವೂ ಸಹ ಆಸೆಯೊಂದನ್ನು ಬಹಳ ವರ್ಷಗಳಿಂದ ಇಟ್ಟುಕೊಂಡಿದ್ದರು.
ಪುನೀತ್ ರಾಜ್ಕುಮಾರ್ಗೆ ತಾವೊಂದು ಸಿನಿಮಾ ನಿರ್ದೇಶನ ಮಾಡಬೇಕು ಎಂಬ ಆಸೆ ಬಹುವರ್ಷಗಳಿಂದಲೂ ಇತ್ತು. ಕೆಲವು ದಿನಗಳ ಹಿಂದೆಯಷ್ಟೆ 'ಸಲಗ' ಸಿನಿಮಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪುನೀತ್ ರಾಜ್ಕುಮಾರ್, ''ದುನಿಯಾ ವಿಜಯ್, ಉಪೇಂದ್ರ ಅವರನ್ನೆಲ್ಲ ನೋಡಿದಾಗ ನಾನೂ ನನ್ನ ಹಳೆಯ ಕನಸಿಗೆ ಮರುಜೀವ ಕೊಡಬೇಕು ಎನಿಸುತ್ತಿದೆ'' ಎಂದಿದ್ದರು.

ಅದೇ ವೇದಿಕೆ ಮೇಲೆ ನಿರೂಪಕಿ ಅನುಶ್ರೀ ಒತ್ತಾಯಕ್ಕೆ ಮಣಿದು, ತಮ್ಮ ಅಣ್ಣನಾದ ನಟ ಶಿವರಾಜ್ ಕುಮಾರ್ ಅವರಿಗೆ ಆಕ್ಷನ್ ಕಟ್ ಸಹ ಹೇಳಿದ್ದರು. ಆದರೆ ತಮ್ಮ ಕನಸನ್ನು ನನಸು ಮಾಡಿಕೊಳ್ಳುವ ಮುಂಚೆ ಇಹಲೋಕ ಬಿಟ್ಟು ಹೋಗಿದ್ದಾರೆ ಪುನೀತ್ ರಾಜ್ಕುಮಾರ್.
'ಸಲಗ' ಸಿನಿಮಾದ ಸಂದರ್ಭದಲ್ಲಿ ಮಾತ್ರವೇ ಅಲ್ಲ ಈ ಹಿಂದೆ 'ನಟಸಾರ್ವಭೌಮ' ಸಿನಿಮಾದ ಮುಹೂರ್ತದ ಸಂದರ್ಭದಲ್ಲಿಯೂ ಪುನೀತ್ ರಾಜ್ಕುಮಾರ್ ತಮ್ಮ ನಿರ್ದೇಶನ ಮಾಡುವ ಆಸೆಯ ಬಗ್ಗೆ ಮಾತನಾಡಿದ್ದರು. ತಾವು ನಿರ್ದೇಶಿಸುವ ಮೊದಲ ಸಿನಿಮಾವನ್ನು ಶಿವರಾಜ್ ಕುಮಾರ್ಗಾಗಿಯೇ ನಿರ್ದೇಶಿಸುವುದಾಗಿ ಅವರು ಹೇಳಿದ್ದರು.


Click it and Unblock the Notifications











