ಪುನೀತ್ 'ಯಾರೇ ಕೂಗಾಡಲಿ'ಗೆ ಸಮೀರಾ ರೆಡ್ಡಿ?
ಜೂನ್ 13, 2012 ರಂದು ಮುಹೂರ್ತ ಆಚರಿಸಿಕೊಂಡು ಚಿತ್ರೀಕರಣ ಪ್ರಾರಂಭಿಸಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ಲೂಸ್ ಮಾದ ಯೋಗೇಶ್ ಸಂಗಮದ 'ಯಾರೇ ಕೂಗಾಡಲಿ' ಚಿತ್ರಕ್ಕೆ ನಾಯಕಿಯರ ಆಯ್ಕೆ ಆಗಿರಲಿಲ್ಲ. ಈಗ ಬಂದ ಸುದ್ದಿಯ ಪ್ರಕಾರ ಯೋಗೇಶ್ ಅವರಿಗೆ ನಾಯಕಿಯಾಗಿ ಸಿಂಧು ಲೋಕನಾಥ್ ಆಯ್ಕೆಯಾಗಿದ್ದಾರೆ.
ಹಾಗೇ, ಪುನೀತ್ ಅವರಿಗೆ ನಾಯಕಿಯಾಗಿ ನಟಿ ಸಮೀರಾ ರೆಡ್ಡಿ ಹೆಸರು ಕೇಳಿ ಬರುತ್ತಿದೆ. ಸದ್ಯ ಬೆಂಗಳೂರಿನ ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ 'ವರದನಾಯಕ' ಚಿತ್ರದಲ್ಲಿ ಸುದೀಪ್ ಜೋಡಿಯಾಗಿ ಸಮೀರಾ ನಟಿಸುತ್ತಿದ್ದಾರೆ. ಯಾರೇ ಕೂಗಾಡಲಿ ಚಿತ್ರದ ಆಫರ್, ಅಲ್ಲಿರುವ ಸಮೀರಾಗೆ ಹೋಗಿದ್ದು ಬಹಪಾಲು ಮಾತುಕತೆ ಮುಗಿದಿದೆ, ಓಕೆ ಅನ್ನುವುದು ಮಾತ್ರ ಬಾಕಿ ಇದೆ ಎಂಬ ಸುದ್ದಿ ಬಂದಿದೆ.
ಬಾಲಿವುಡ್, ತಮಿಳು, ತೆಲುಗು ಚಿತ್ರಗಳ್ಲಿ ಈಗಾಗಲೇ ನಟಿಸಿ ಸಾಕಷ್ಟು ಹೆಸರು ಮಾಡಿರುವ ಸಮೀರಾ, ವರದನಾಯಕ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಇದೀಗ ಕನ್ನಡದ ಪವರ್ ಸ್ಟಾರ್ ಪುನೀತ್ ಜೋಡಿಯಾಗಿ ನಟಿಸುವ ಆಫರ್ ಸಮೀರಾ ಪಾಲಾಗಿದೆ. ಮಾತುಕತೆ ಓಕೆ ಆದರೂ ಗ್ರೀನ್ ಸಿಗ್ನಲ್ ಬಂದಿಲ್ಲವಾದ್ದರಿಂದ ಕನ್ನಡಿಗರಿಗೆ ಪುನೀತ್ ಜೊತೆ ಸಮೀರಾ ನೋಡುವ ಅವಕಾಶ ಏನಾಗಲಿದೆಯೋ!
ತಮಿಳಿನ ನಾಡೋಡಿಗಳ್ ಚಿತ್ರವನ್ನು ಕನ್ನಡದಲ್ಲಿ 'ಹುಡುಗರು' ಎಂಬ ಹೆಸರಿನಿಂದ ಮಾಡಿದ್ದ ವಜ್ರೇಶ್ವರಿ ಸಂಸ್ಥೆ, ಇದೀಗ ತಮಿಳಿನ 'ಪೊರಾಲಿ' ಚಿತ್ರವನ್ನು 'ಯಾರೇ ಕೂಗಾಡಲಿ' ಎಂಬ ಹೆಸರಿಟ್ಟು ಕನ್ನಡಕ್ಕೆ ತರಲಿದೆ. ಹುಡುಗರು ಹಿಟ್ ಆದ ಹಿನ್ನೆಲೆಯಲ್ಲಿ ಹಾಗೂ ಅದರ ಯಶಸ್ಸಿನಲ್ಲಿ ಯೋಗೇಶ್ ಪಾಲು ಬಹಳಷ್ಟು ಇದ್ದುದರಿಂದ ಈ ಚಿತ್ರದಲ್ಲೂ ಯೋಗೇಶ್ ಇದ್ದಾರೆ.
ಮೂಲ ಚಿತ್ರದಲ್ಲಿ ತಮಿಳು ನಟ ಶಶಿಕುಮಾರ್ ನಿರ್ವಹಿಸಿದ್ದ ಪಾತ್ರವನ್ನು ಇಲ್ಲಿ ಪುನೀತ್ ಹಾಗೂ ಅಲ್ಲರಿ ನರೇಶ್ ಪಾತ್ರವನ್ನು ಯೋಗೇಶ್ ಮಾಡಲಿದ್ದಾರೆ. ಮೂಲ ಚಿತ್ರವನ್ನು ನಿರ್ದೇಶಿಸಿದ್ದ 'ಸಮುದ್ರ ಕಣಿ' ಕನ್ನಡದ 'ಯಾರೇ ಕೂಗಾಡಲಿ' ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಇಲ್ಲಿಯ ನೆಟಿವಿಟಿಗೆ ಕೆಲವೊಂದು ಬದಲಾವಣೆ ಆಗಲಿದೆ ಎಂದು ನಿರ್ಮಾಪಕ ರಾಘವೇಂದ್ರ ರಾಜ್ ಕುಮಾರ್ ತಿಳಿಸಿದ್ದಾರೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











