ಗಂಧದಗುಡಿ ಪ್ರಿ ರಿಲೀಸ್ಗೆ ಬರುವವರು ಈ ಬಣ್ಣದ ಬಟ್ಟೆಯನ್ನೇ ಧರಿಸಬೇಕು; ಇಲ್ಲಿದೆ ದಿನಾಂಕ, ಸ್ಥಳದ ವಿವರ

ಪುನೀತ್ ರಾಜ್ ಕುಮಾರ್ ಕನಸಿನ ಕೂಸು ಗಂಧದ ಗುಡಿ ಚಿತ್ರ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಪುನೀತ್ ನಿಧನದ ನಂತರ ಬಿಡುಗಡೆಗೊಳ್ಳಲಿರುವ ಮೂರನೇ ಮತ್ತು ಅಂತಿಮ ಚಿತ್ರ ಇದಾಗಿದ್ದು, ಈ ಹಿಂದೆ ಅಪ್ಪು ನಿಧನದ ನಂತರ ಜೇಮ್ಸ್ ಹಾಗೂ ಲಕ್ಕಿ ಮ್ಯಾನ್ ಚಿತ್ರಗಳನ್ನು ಚಿತ್ರಮಂದಿರಕ್ಕೆ ತೆರಳಿ ವೀಕ್ಷಿಸಿದ್ದ ಅಪ್ಪು ಅಭಿಮಾನಿಗಳು ಹಾಗೂ ಸಿನಿಪ್ರೇಕ್ಷಕರು ಈ ಬಾರಿ ಕೊನೆಯದಾಗಿ ಬೆಳ್ಳಿತೆರೆ ಮೇಲೆ ಗಂಧದ ಗುಡಿ ಮೂಲಕ ಅಪ್ಪು ದರ್ಶನವನ್ನು ಪಡೆಯಲು ಕಾಯುತ್ತಿದ್ದಾರೆ.
ಇನ್ನು ಗಂಧದಗುಡಿ ಚಿತ್ರ ಇದೇ ತಿಂಗಳ 28ರಂದು ವಿಶ್ವದಾದ್ಯಂತ ಭರ್ಜರಿಯಾಗಿ ಬಿಡುಗಡೆಯಾಗಲಿದ್ದು, ಅದಕ್ಕೂ ಮುನ್ನ ಚಿತ್ರದ ಪ್ರೀ ರಿಲೀಸ್ ಇವೆಂಟ್ ನಡೆಸಲು ಚಿತ್ರತಂಡ ತೀರ್ಮಾನಿಸಿದೆ. ಸ್ವತಃ ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಈ ಕಾರ್ಯಕ್ರಮದ ಬಗ್ಗೆ ಮುತುವರ್ಜಿ ವಹಿಸಿಕೊಂಡಿದ್ದಾರೆ. ಈಗಾಗಲೇ ರಾಜ್ಯದ ಮುಖ್ಯಮಂತ್ರಿ ಹಾಗೂ ಚಂದನವನದ ಬಹುತೇಕ ತಾರೆಗಳಿಗೆ ರಾಜ್ ಕುಟುಂಬ ಗಂಧದಗುಡಿ ಪ್ರಿ ರಿಲೀಸ್ ಕಾರ್ಯಕ್ರಮದ ಆಹ್ವಾನವನ್ನು ನೀಡಿದೆ.
ಗಂಧದ ಗುಡಿ ಚಿತ್ರದ ಪೂರ್ವ ಬಿಡುಗಡೆ ಕಾರ್ಯಕ್ರಮಕ್ಕೆ 'ಪುನೀತ ಪರ್ವ' ಎಂದು ಹೆಸರಿಡಲಾಗಿದ್ದು, ಇಡೀ ಚಿತ್ರರಂಗವೇ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದೆ ಹಾಗೂ ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರರಂಗದ ಹಲವಾರು ಸಿನಿತಾರೆಯರು ಕೂಡ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಹೀಗೆ ಪುನೀತ ಪರ್ವ ಕಾರ್ಯಕ್ರಮ ಸಮೀಪಿಸುತ್ತಿದ್ದು, ಅಶ್ವಿನಿ ಪುನೀತ್ ರಾಜ್ ಕುಮಾರ್ ಈ ಕಾರ್ಯಕ್ರಮದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಪುನೀತ ಪರ್ವ ಕಾರ್ಯಕ್ರಮದ ದಿನಾಂಕ, ಸ್ಥಳ ಮತ್ತು ಡ್ರೆಸ್ ಕೋಡ್
ಅಶ್ವಿನಿ ಪುನೀತ್ ರಾಜ್ ಕುಮಾರ್ ಪುನೀತ ಪರ್ವ ಕಾರ್ಯಕ್ರಮದ ಸಂಪೂರ್ಣ ಮಾಹಿತಿಯನ್ನು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಪುನೀತ ಪರ್ವ ಕಾರ್ಯಕ್ರಮ ಅಕ್ಟೋಬರ್ 21ರ ಶುಕ್ರವಾರದಂದು ಸಂಜೆ 6 ಗಂಟೆಗೆ ಆರಂಭಗೊಳ್ಳಲಿದೆ. ಕಾರ್ಯಕ್ರಮ ಬೆಂಗಳೂರಿನ ಅರಮನೆ ಮೈದಾನದ ಕೃಷ್ಣ ವಿಹಾರದಲ್ಲಿ ನಡೆಯಲಿದೆ. ಇನ್ನು ಈ ಕಾರ್ಯಕ್ರಮಕ್ಕೆ ಬರುವ ಜನರು ಬಿಳಿ ಬಣ್ಣದ ವಸ್ತ್ರವನ್ನು ಧರಿಸಿ ಬನ್ನಿ ಎಂದು ನಮೂದಿಸಲಾಗಿದೆ.

ಕಾರ್ಯಕ್ರಮಕ್ಕೆ ಬರಲಿದೆ ತಾರೆಯರ ದಂಡು
ಇನ್ನು ಈ ಗಂಧದ ಗುಡಿ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಇಡೀ ಚಂದನವನವೇ ಆಗಮಿಸುವುದು ಖಚಿತ. ಸದ್ಯ ಈ ಕಾರ್ಯಕ್ರಮಕ್ಕೆ ದರ್ಶನ್ ಹಾಗೂ ಸುದೀಪ್ ಕೂಡ ಆಗಮಿಸಲಿದ್ದು, ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರಾ ಎಂದು ಅಭಿಮಾನಿಗಳು ಕಾತರರಾಗಿದ್ದಾರೆ. ಆದರೆ ಇಬ್ಬರೂ ಒಂದೇ ಸಮಯಕ್ಕೆ ಕಾರ್ಯಕ್ರಮಕ್ಕೆ ಬರಲಿದ್ದಾರಾ ಎಂಬುದು ಇದೀಗ ಪ್ರಶ್ನೆಯಾಗಿದೆ.

ಗಂಧದಗುಡಿ ಸಲುವಾಗಿ ಸಾಲು ಸಾಲು ಕಾರ್ಯಕ್ರಮಗಳು
ಗಂಧದಗುಡಿ ಚಿತ್ರದ ಬಿಡುಗಡೆ, ಅಪ್ಪು ಒಂದನೇ ವರ್ಷದ ಪುಣ್ಯತಿಥಿ ಮತ್ತು ಅಪ್ಪು ಅವರಿಗೆ ರಾಜ್ಯೋತ್ಸವದಂದು ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನದ ಗೌರವ ಹೀಗೆ ಸಾಲು ಸಾಲು ಕಾರ್ಯಕ್ರಮಗಳು ಇರುವುದರಿಂದ ಅಪ್ಪು ಅಭಿಮಾನಿಗಳು ಅಕ್ಟೋಬರ್ ಅಂತಿಮ ವಾರದಲ್ಲಿ ಹಲವಾರು ಸಂಭ್ರಮಾಚರಣೆಯ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದಾರೆ. ಅವುಗಳ ಕುರಿತಾದ ಮಾಹಿತಿ ಕೆಳಕಂಡಂತಿದೆ.
* 26 - 10 - 2022: ಅಪ್ಪು ಸಮಾಧಿ ಬಳಿ ವಿಶ್ವ ದಾಖಲೆ ಮಟ್ಟದಲ್ಲಿ ಪುನೀತ್ ರಾಜ್ಕುಮಾರ್ ಅವರ ಬರೋಬ್ಬರಿ 75 ಕಟ್ಔಟ್ಗಳನ್ನು ನಿಲ್ಲಿಸಲಾಗಲಿದೆ.
* 27-10-2022ರಂದು ಮಧ್ಯಾಹ್ನ ಎಲ್ಲಾ ಕಟ್ಔಟ್ಗಳಿಗೂ ಭಾರೀ ಹೂವಿನ ಹಾರ ಹಾಕಲಾಗುವುದು ಹಾಗೂ ಸಂಜೆ ಸ್ಮಾರಕದ ಒಂದು ಕಿಲೋಮೀಟರ್ ಸುತ್ತ ದಸರಾ ರೀತಿ ದೀಪಾಲಂಕಾರ ಮಾಡಲಾಗುವುದು.
* 28-10-2022ರಂದು ಗಂಧದ ಗುಡಿ ಬಿಡುಗಡೆಯ ದಿನ ಕೆಜಿ ರಸ್ತೆ ಹಾಗೂ ಮಾಗಡಿ ರಸ್ತೆಯ ಚಿತ್ರಮಂದಿರಗಳಲ್ಲಿ ಸಂಭ್ರಮಾಚರಣೆ.
* 29-10-2022ರಂದು ಪುನೀತ್ ರಾಜ್ಕುಮಾರ್ ಒಂದನೇ ವರ್ಷದ ಪುಣ್ಯಸ್ಮರಣೆಯ ಅಂಗವಾಗಿ ಸ್ಮಾರಕದ ಬಳಿ ಅಭಿಮಾನಿಗಳಿಗೆ ಬೆಳಗ್ಗೆ 8ರಿಂದ ಸಂಜೆ 6 ಗಂಟೆಯವರೆಗೆ ನಿರಂತರ ದಾಸೋಹವನ್ನು ಏರ್ಪಡಿಸಲಾಗಿದೆ.


Click it and Unblock the Notifications











