'ಚಿತ್ರಮಂದಿರಕ್ಕೆ ಮತ್ತೆ ಬನ್ನಿ ಸಂಭ್ರಮಿಸೋಣ': ಕನ್ನಡದ ಈ ವಿಡಿಯೋ ನೋಡಿ ಕಣ್ಣೀರಿಟ್ಟ ಪುರಿ ಜಗನ್ನಾಥ್
'ಚಿತ್ರಮಂದಿರಕ್ಕೆ ಮತ್ತೆ ಬನ್ನಿ ಸಂಭ್ರಮಿಸೋಣ' ಎನ್ನುವ ಹೆಸರಿನಲ್ಲಿ ಕನ್ನಡದ ಕಲಾವಿದರು ಒಂದು ಅಭಿಯಾನ ಪ್ರಾರಂಭಿಸಿದ್ದಾರೆ. ಸ್ಯಾಂಡಲ್ ವುಡ್ ನಿರ್ಮಾಪಕ ಕಾರ್ತಿಕ್ ಗೌಡ ನೇತೃತ್ವದಲ್ಲಿ ಚಿತ್ರಮಂದಿರಗಳ ಬಗ್ಗೆ ಮತ್ತೆ ಜನರನ್ನು ವಾಪಸ್ ಚಿತ್ರಮಂದಿರಕ್ಕೆ ಕರೆತರುವ ಬಗ್ಗೆ ಒಂದು ಭಾವನಾತ್ಮಕ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಈ ವಿಡಿಯೋಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ವಿಡಿಯೋ ನೋಡಿ ಅನೇಕರು ಭಾವುಕರಾಗುತ್ತಿದ್ದಾರೆ. ಕೊರೊನಾ ಲಾಕ್ ಡೌನ್ ಆದ ಬಳಿಕ ಚಿತ್ರಮಂದಿರಗಳು ಸಹ ಬಂದ್ ಆಗಿದ್ದವು. ಸುಮಾರು ಏಳು ತಿಂಗಳ ಬಳಿಕ ಚಿತ್ರಮಂದಿರಗಳು ಓಪನ್ ಆಗಿವೆ. ಅಷ್ಟು ಕಾಲ ಕೆಲಸವಿಲ್ಲದೆ ಬರಿಗೈಯಲ್ಲಿ ಕುಳಿತಿದ್ದ ಎಷ್ಟು ಸಿನಿಮಾ ಕಾರ್ಮಿಕರಿಗೆ ಜೀವಬಂದ ಹಾಗಾಗಿದೆ.
ಇದೀಗ ಚಿತ್ರಮಂದಿರಗಳು ಓಪನ್ ಆಗಿವೆ. ಈಗಲಾದರೂ ಪ್ರೇಕ್ಷಕರು ಚಿತ್ರಮಂದಿರಗಳ ಕಡೆ ಬರಲಿ ಎಂದು ಸಿನಿಮಾಮಂದಿ ಕಾಯುತ್ತಿದ್ದಾರೆ. ಅಭಿಮಾನಿಗಳ ಸಂಭ್ರಮ, ಚಪ್ಪಾಳೆ, ಶಿಳ್ಳೆ, ಕೂಗು, ಕುಣಿತ ಇದನ್ನೆಲ್ಲ ಮತ್ತೆ ಚಿತ್ರಮಂದಿರಗಳಲ್ಲಿ ಕಣ್ತುಂಬಿ ಕೊಳ್ಳಬಹುದಾ? ಮತ್ತೆ ಹಳೆಯ ದಿನಗಳು ಮರುಕಳಿಸುತ್ತಾ? ಎನ್ನುವ ಬಗ್ಗೆ ವಿಡಿಯೋದಲ್ಲಿ ತೋರಿಸಲಾಗಿದೆ.

ಈ ವಿಡಿಯೋ ನೋಡಿ ಅನೇಕರು ಕಣ್ಣೀರಿಟ್ಟಿದ್ದಾರೆ. ತೆಲುಗಿನ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಕನ್ನಡದ ಈ ವಿಡಿಯೋ ಶೇರ್ ಮಾಡಿ ಭಾವುಕರಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಪುರಿ ಜಗನ್ನಾಥ್, 'ಈ ವಿಡಿಯೋ ನೋಡಿ ಕಣ್ಣೀರು ಬಂತು. ಆ ದಿನಗಳು ಮರುಕಳಿಸಬೇಕು, ಶಿಳ್ಳೆಯ ಶಬ್ದ ಮತ್ತೆ ಕೇಳಿಸಬೇಕು, ಸಿನಿಮಾ ಪೋಸ್ಟರ್ ಗಳು ರಾರಾಜಿಸಬೇಕು, ಶರ್ಟ್ ಹರಿದು ಹೋಗುವ ಹಾಗೆ ಸಂಭ್ರಮಿಸುವುದನ್ನ ನೋಡಬೇಕು. ಸಿನಿಮಾ ಚಿತ್ರಮಂದಿರಗಳು, ನಮ್ಮ ತಾಯಿ' ಎಂದು ಭಾವುಕರಾಗಿದ್ದಾರೆ.
ಈ ವಿಡಿಯೋದಲ್ಲಿ ಶಿವರಾಜ್ ಕುಮಾರ್, ದುನಿಯಾ ವಿಜಯ್, ಪುನೀತ್ ರಾಜ್ ಕುಮಾರ್, ಧನಂಜಯ್, ಶ್ರೀಮುರಳಿ ಹಾಗೂ ಗಣೇಶ್ ಪ್ರೇಕ್ಷಕರನ್ನು ಆಹ್ವಾನಿಸಿದ್ದಾರೆ. ಪ್ರೇಕ್ಷಕರು ಮೊದಲಿನಂತೆ ಚಿತ್ರಮಂದಿರಕ್ಕೆ ಬರ್ತಾರೆ ಎನ್ನುವ ಆತ್ಮವಿಶ್ವಾಸವನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ.


Click it and Unblock the Notifications











