ನಟ ದುನಿಯಾ ವಿಜಯ್ ಮೇಲೆ ಏನಿದು ಹೊಸ ಅಪವಾದ.?
ಆರ್.ಚಂದ್ರು ಆಕ್ಷನ್ ಕಟ್ ಹೇಳುತ್ತಿರುವ 'ಕನಕ' ಹಾಗೂ ಪ್ರೀತಂ ಗುಬ್ಬಿ ನಿರ್ದೇಶನ ಮಾಡುತ್ತಿರುವ 'ಜಾನಿ ಜಾನಿ ಎಸ್ ಪಪ್ಪಾ' ಸಿನಿಮಾದಲ್ಲಿ ನಟ ದುನಿಯಾ ವಿಜಯ್ ಅಭಿನಯಿಸುತ್ತಿದ್ದಾರೆ. ಈ ಎರಡು ಚಿತ್ರಗಳಲ್ಲಿ ನಟ ದುನಿಯಾ ವಿಜಯ್ ಗೆ ನಟಿ ರಚಿತಾ ರಾಮ್ ನಾಯಕಿ ಎಂದು ಈ ಹಿಂದೆ ಸುದ್ದಿ ಆಗಿತ್ತು.
ಆದ್ರೀಗ, ಈ ಎರಡೂ ಚಿತ್ರಗಳಲ್ಲಿ ರಚಿತಾ ರಾಮ್ ನಟಿಸುತ್ತಿಲ್ಲ. 'ಕನಕ' ಹಾಗೂ 'ಜಾನಿ ಜಾನಿ ಎಸ್ ಪಪ್ಪಾ' ಚಿತ್ರಗಳಿಂದ ನಟಿ ರಚಿತಾ ರಾಮ್ ಔಟ್ ಆಗಲು ದುನಿಯಾ ವಿಜಯ್ ಕಾರಣ ಎಂಬ ಗುಲ್ಲು ಗಾಂಧಿನಗರದಲ್ಲಿ ಗಿರಕಿ ಹೊಡೆಯುತ್ತಿದೆ.
ದುನಿಯಾ ವಿಜಯ್ ಬಗ್ಗೆ ಕೇಳಿ ಬರುತ್ತಿರುವ ಈ ಅಪವಾದ ನಿಜವೇ.? ಉತ್ತರ ಇಲ್ಲಿದೆ ಓದಿರಿ...

ನನಗೂ-ಅದಕ್ಕೂ ಸಂಬಂಧ ಇಲ್ಲ
''ನಮ್ಮ ತಾಯಾಣೆಗೂ ರಚಿತಾ ರಾಮ್ ಆ ಎರಡೂ ಚಿತ್ರಗಳಿಂದ ಹೊರ ಹೋಗೋಕೆ ನಾನು ಕಾರಣವಲ್ಲ'' ಎಂದು 'ಉದಯವಾಣಿ' ಪತ್ರಿಕೆಗೆ ನಟ ದುನಿಯಾ ವಿಜಯ್ ಸ್ಪಷ್ಟಪಡಿಸಿದ್ದಾರೆ.

ನನಗೆ ಗೊತ್ತಿರುವುದು ಇಷ್ಟೇ.!
''ಜಾನಿ ಜಾನಿ ಎಸ್ ಪಪ್ಪಾ' ಚಿತ್ರಕ್ಕೆ ರಮ್ಯಾ ಬದಲು ಯಾರನ್ನ ಆಯ್ಕೆ ಮಾಡಬೇಕು ಎಂಬ ಚರ್ಚೆ ನಡೆಯಿತು. ಈ ನಡುವೆ 'ಕನಕ' ಚಿತ್ರಕ್ಕೂ ರಚಿತಾ ರಾಮ್ ಆಯ್ಕೆ ಆದರು. ನಂತರ ಅವರು ಆ ಸಿನಿಮಾದಲ್ಲಿ ನಟಿಸುತ್ತಿಲ್ಲ ಎನ್ನುವುದಷ್ಟೇ ನನಗೆ ಗೊತ್ತು'' ಎನ್ನುತ್ತಾರೆ ನಟ ದುನಿಯಾ ವಿಜಯ್.

ನಾಯಕಿ ವಿಚಾರದಲ್ಲಿ ಮೂಗು ತೂರಿಸುವುದಿಲ್ಲ
''ಯಾವುದೇ ಸಿನಿಮಾ ಆಗಿರಲಿ... ನಾನು ನಾಯಕಿ ಆಯ್ಕೆ ವಿಚಾರದಲ್ಲಿ ಮೂಗು ತೂರಿಸುವುದಿಲ್ಲ'' ಎಂದು ನಟ ದುನಿಯಾ ವಿಜಯ್ ಹೇಳಿದ್ದಾರೆ.

ಗಲ್ಲಿ ಗಾಸಿಪ್ ಏನು.?
'ಜಾನಿ ಜಾನಿ ಎಸ್ ಪಪ್ಪಾ' ಚಿತ್ರದಲ್ಲಿ ವಿಜಯ್ ಮತ್ತು ರಚಿತಾ ಮೊದಲ ಬಾರಿಗೆ ಒಟ್ಟಿಗೆ ನಾಯಕ-ನಾಯಕಿ ಆಗಿ ನಟಿಸಬೇಕಿತ್ತು. ಅದೇ ಗ್ಯಾಪ್ ನಲ್ಲಿ 'ಕನಕ' ಚಿತ್ರಕ್ಕೂ ರಚಿತಾ ಆಯ್ಕೆ ಆದರು. 'ಕನಕ' ಸಿನಿಮಾ ಮೊದಲು ಶುರುವಾಗಿರುವುದರಿಂದ, ಮೊದಲು ಬಿಡುಗಡೆ ಆಗುತ್ತದೆ. ಆಗ 'ಜಾನಿ ಜಾನಿ ಎಸ್ ಪಪ್ಪಾ' ಚಿತ್ರದಲ್ಲಿ ಫ್ರೆಶ್ ಫೀಲ್ ನೀಡುವುದಿಲ್ಲ ಎಂಬ ಕಾರಣಕ್ಕೆ ರಚಿತಾ ಅವರನ್ನು 'ಕನಕ' ಚಿತ್ರದಿಂದ ಬದಲಾಯಿಸುವುದಕ್ಕೆ ದುನಿಯಾ ವಿಜಯ್ ಹೇಳಿದ್ರಂತೆ. ಇದರಿಂದ ಬೇಸರಗೊಂಡ ರಚಿತಾ, ಎರಡೂ ಚಿತ್ರಗಳಿಂದ ಹೊರನಡೆದರಂತೆ ಎಂಬುದು ಗಲ್ಲಿ ಗಾಸಿಪ್ಪು.


Click it and Unblock the Notifications











