ಶಿವಣ್ಣನ ಕಾಲಿಗೆ ಎರಗಿ ಆಶೀರ್ವಾದ ಪಡೆದ ರಾಧಿಕಾ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಮನೆಯಲ್ಲಿ ಕನ್ನಡ ಚಿತ್ರರಂಗದ ತಾರೆ ಹಾಗೂ ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ ಅವರು ರಕ್ಷಾ ಬಂಧನ ಹಬ್ಬ ಆಚರಿಸಿದರು. ಶಿವಣ್ಣನ ಕೈಗೆ ಚಿನ್ನದ ರಾಖಿಯನ್ನು ಕಟ್ಟುವ ಮೂಲಕ ತಮ್ಮ ಅಣ್ಣ ತಂಗಿ ಬಂಧನವನ್ನು ಮತ್ತಷ್ಟು ಹತ್ತಿರವಾಗಿಸಿಕೊಂಡಿದ್ದಾರೆ.
ಮಂಗಳವಾರ (ಆ.20) ಸಂಜೆ ಅವರು ನಾಗಾವರದಲ್ಲಿರುವ ಶಿವರಾಜ್ ಕುಮಾರ್ ಅವರ ಮನೆಗೆ ಭೇಟಿ ನೀಡಿದರು. ಶಿವಣ್ಣ ಹಣೆಗೆ ತಿಲಕವಿಟ್ಟು ಪೂಜಿಸಿ ನೂರ್ಕಾಲ ಬಾಳಣ್ಣ ಎಂದು ಹೇಳಿ ರಾಖಿ ಕಟ್ಟಿದ್ದಾರೆ. ಅಣ್ಣನಿಗೆ ರಾಖಿ ಕಟ್ಟಿದರೆ ಅತ್ತಿಗೆ ಗೀತಾ ಶಿವರಾಜ್ ಕುಮಾರ್ ಅವರಿಗೆ ಸೀರೆಯನ್ನು ಕೊಟ್ಟು ಅವರ ಆಶೀರ್ವಾದವನ್ನೂ ಪಡೆದಿದರು.
ಸಾಮಾನ್ಯವಾಗಿ ಚಿತ್ರಗಳಲ್ಲಿ ನಟಿಸಿದ ಮೇಲೆ ತಾವಾಯಿತು ತಮ್ಮ ಕೆಲಸವಾಯಿತು ಎಂದಿರುವವರೇ ಹೆಚ್ಚು. ಶಿವಣ್ಣ ಹಾಗೂ ರಾಧಿಕಾ ಅವರು ಜೊತೆಯಾಗಿ 'ಅಣ್ಣತಂಗಿ' ಚಿತ್ರದಲ್ಲಿ ಅಭಿನಯಿಸಿ ಎಂಟು ವರ್ಷಗಳು ಉರುಳಿದರೂ ಇವರಿಬ್ಬರ ಅನುಬಂಧ ಮಾತ್ರ ಹಾಗೆಯೇ ಉಳಿದಿರುವುದು ವಿಶೇಷ.
ಇತ್ತೀಚೆಗೆ ಬಿಡುಗಡೆಯಾದ 'ಸ್ವೀಟಿ' ಚಿತ್ರದ ಆಡಿಯೋಗಳನ್ನು ಶಿವರಾಜ್ ಕುಮಾರ್ ದಂಪತಿಗೆ ರಾಧಿಕಾ ನೀಡಿದರು. ಪ್ರತಿವರ್ಷ ರಕ್ಷಾ ಬಂಧನ ಬರುತ್ತದೆ. ಆದರೆ ಈ ಬಾರಿ ಮಾತ್ರ ಚಿನ್ನದ ರಾಖಿ ಕಟ್ಟುವ ಮೂಲಕ ವಿಭಿನ್ನವಾಗಿ ಆಚರಿಸಿದರು. ಚಿತ್ರಗಳಲ್ಲಿ ನೋಡಿ ಅಣ್ಣ ತಂಗಿಯ ಅನುಬಂಧದ ಚಿತ್ರಗಳು.

ನಗುತಾ ನಗುತಾ ಬಾಳು ನೀನು ನೂರು ವರುಷ
ಕೈಗೆ ರಾಖಿ ಕಟ್ಟಿಸಿಕೊಂಡ ಶಿವಣ್ಣ ತನ್ನ ತಂಗಿಗೆ ನಗುತಾ ನಗುತಾ ಬಾಳು ನೀನು ನೂರು ವರ್ಷ ಎಂದು ಅಕ್ಷತೆ ಕಾಳು ಹಾಕಿ ಹರಸಿದರು. ಇದರಿಂದ ರಾಧಿಕಾ ಕುಮಾರಸ್ವಾಮಿ ಫುಲ್ ಖುಷ್ ಆಗಿದ್ದಾರೆ.

ರಾಧಿಕಾಗೆ ಅಣ್ಣ ನೆನಪಾದ ಕ್ಷಣಗಳು
ಪ್ರತಿವರ್ಷ ರಕ್ಷಾ ಬಂಧನ ಬರುತ್ತಿದ್ದರೂ ಈ ಬಾರಿ ಮಾತ್ರ ಯಾಕೆ ಶಿವಣ್ಣನಿಗೆ ರಾಖಿ ಎಂಬುದು ಎಲ್ಲರ ಪ್ರಶ್ನೆಯಾಗಿತ್ತು. ಇದಕ್ಕೂ ಉತ್ತರ ಸಿಕ್ಕಿದೆ..ಮುಂದಿನ ಸ್ಲೈಡ್ ನಲ್ಲಿ ನೋಡಿ.

ಮತ್ತೊಮ್ಮೆ ಅಣ್ಣ ತಂಗಿ ಚಿತ್ರ ಸಾಧ್ಯತೆ
ಶೀಘ್ರದಲ್ಲೇ ಶಿವಣ್ಣ ಜೊತೆ ಮತ್ತೊಂದು ಚಿತ್ರದಲ್ಲಿ ರಾಧಿಕಾ ಅಭಿನಯಿಸಲಿದ್ದಾರೆ ಎಂಬುದು ಸುದ್ದಿ. ಈ ಸಂದರ್ಭದಲ್ಲಿ ಅಣ್ಣ ನೆನಪಾಗಿದ್ದಾನೆ. ಬಹುಶಃ ಮತ್ತೊಂದು 'ಅಣ್ಣತಂಗಿ'ಯಂತಹ ಚಿತ್ರ ಬರುವ ಸಾಧ್ಯತೆಗಳಿವೆ.

ಶಿವಣ್ಣ ಕೈಗೆ ಚಿನ್ನದ ರಾಖಿ ಕಟ್ಟಿದ
ಶಿವಣ್ಣನಿಗೆ ಕಟ್ಟಿರುವ ರಾಖಿ ಸುಮಾರು 17 ಗ್ರಾಂ ತೂಗುತ್ತದೆ. ಸಾಯಿಗೋಲ್ಡ್ ಪ್ಯಾಲೇಸ್ ತಯಾರಿಸಿರುವ ಈ ರಾಖಿ ಬೆಲೆ ರು.55 ಸಾವಿರ ಎನ್ನುತ್ತವೆ ಮೂಲಗಳು.

ಸೂಕ್ತ ಕಥೆ ಸಿಕ್ಕಿದರೆ ಮತ್ತೊಮ್ಮೆ ಶಿವಣ್ಣ ಜೊತೆ
'ಸ್ವೀಟಿ' ಚಿತ್ರ ಸೆಟ್ಟೇರಿದ ಸಂದರ್ಭದಲ್ಲಿ ರಾಧಿಕಾ ಅವರು ಮಾತನಾಡುತ್ತಾ, "ಶಿವಣ್ಣ ಜೊತೆ ನಾನು ಮೂರು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ (ಅಣ್ಣ ತಂಗಿ, ರಿಷಿ, ತವರಿಗೆ ಬಾ ತಂಗಿ). ಆ ಮೂರು ಚಿತ್ರಗಳು ಶತದಿನೋತ್ಸವ ಆಚರಿಸಿಕೊಂಡಿವೆ. ಈಗ ಸೂಕ್ತವಾದ ಕತೆ ಸಿಕ್ಕಿದರೆ ಮತ್ತೊಮ್ಮೆ ಅಭಿನಯಿಸುತ್ತೇನೆ. ಅದು ತಂಗಿ ಪಾತ್ರವಾದರೂ ಸರಿ" ಎಂದಿದ್ದರು.

ಇದು ರೀಲ್ ಚಿತ್ರವಲ್ಲ ರಿಯಲ್ ಚಿತ್ರ
ಇದು ರೀಲ್ ಚಿತ್ರವಲ್ಲ ರಿಯಲ್ ಚಿತ್ರ. ಶಿವಣ್ಣನ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ರಾಧಿಕಾ ಕುಮಾರಸ್ವಾಮಿ.

ಹೃದಯ ತಟ್ಟುವ ಕ್ಷಣವಿದು
ತನ್ನ ಕೋಮಲ ಕೈಗಳಿಂದ ಶಿವಣ್ಣನ ಕೈಗೆ ರಾಧಿಕಾ ರಾಖಿ ಕಟ್ಟುತ್ತಿರುವ ದೃಶ್ಯ. ಎಂಥವರನ್ನೂ ಒಂದು ಕ್ಷಣ ಹೃದಯ ತಟ್ಟದೆ ಇರದು.

ಶೀಘ್ರದಲ್ಲೇ ಪ್ರೇಕ್ಷಕರ ಕೈಗೆ ಕರ್ಚೀಫ್
ಬಹುಶಃ ಈಗ ಅದಕ್ಕೆ ಕಾಲ ಕೂಡಿಬಂದಿರಬಹುದೇನೋ? ಇನ್ನೊಂದು ಅಂದಾಜಿನ ಪ್ರಕಾರ, ಶೀಘ್ರದಲ್ಲೇ ಪ್ರೇಕ್ಷಕರ ಕೈಗೆ ಕರವಸ್ತ್ರ ಕೊಡಲು ಮತ್ತೊಮ್ಮೆ ಈ ಜೋಡಿ ಒಂದಾಗುತ್ತಿದೆಯೇ?


Click it and Unblock the Notifications











