ಕಾಲು ಜಾರಿ ಬಿದ್ದು ಗಾಯಗೊಂಡ ರಾಘಣ್ಣ, ಆಸ್ಪತ್ರೆಗೆ ದಾಖಲು
ನಟ-ನಿರ್ಮಾಪಕ ರಾಘವೇಂದ್ರ ರಾಜ್ ಕುಮಾರ್ ಅವರು ನಿನ್ನೆ (ಅಕ್ಟೋಬರ್ 25) ಸುಸ್ತಾಗಿ ಬಾತ್ ರೂಮ್ ನಲ್ಲಿ ಕಾಲು ಜಾರಿ ಬಿದ್ದು, ತಮ್ಮ ಕೈಗೆ ಏಟು ಮಾಡಿಕೊಂಡಿದ್ದಾರೆ. ತಕ್ಷಣ ಅವರನ್ನು ಬೆಂಗಳೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯಕ್ಕೆ ರಾಘವೇಂದ್ರ ರಾಜ್ ಕುಮಾರ್ ಅವರು ಚೇತರಿಸಿಕೊಳ್ಳುತ್ತಿದ್ದಾರೆ.
ನಟ ರಾಘವೇಂದ್ರ ರಾಜ್ ಕುಮಾರ್ ಅವರು ಆರೋಗ್ಯವಾಗಿಯೇ ಇದ್ದರು. ಅರಮನೆ ಮೈದಾನದಲ್ಲಿ ನಡೆದ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರ ಮದುವೆ ಸಮಾರಂಭದಲ್ಲಿ ಭಾಗವಹಿಸಿ ಸ್ವಲ್ಪ ಸುಸ್ತಾಗಿದ್ದ ರಾಘವೇಂದ್ರ ರಾಜ್ ಕುಮಾರ್ ಅವರು ನಿನ್ನೆ (ಅಕ್ಟೋಬರ್ 25) ಮಧ್ಯರಾತ್ರಿ ಸುಮಾರು ಎರಡೂವರೆ ಯಷ್ಟು ಹೊತ್ತಿಗೆ ಬಾತ್ ರೂಮ್ ನಲ್ಲಿ ಕಾಲು ಜಾರಿ ಬಿದ್ದಿದ್ದಾರೆ.
ತಕ್ಷಣ ಅವರನ್ನು ಬೆಂಗಳೂರಿನ ಯಶವಂತಪುರದಲ್ಲಿರುವ, ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಿಸಲಾಯಿತು. ಇದೀಗ ಮೂಲಗಳ ಪ್ರಕಾರ ಅವರ ಕೈ ಫ್ರಾಕ್ಚರ್ ಆಗಿದೆಯಂತೆ, ಆದರೆ ಆಸ್ಪತ್ರೆಯ ವೈದ್ಯರು ಇನ್ನೂ ಯಾವುದೇ ಮಾಹಿತಿ ಒದಗಿಸಿಲ್ಲ.
ಸದ್ಯಕ್ಕೆ ರಾಘವೇಂದ್ರ ರಾಜ್ ಕುಮಾರ್ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಅವರಿಗೆ ಯಾವುದೇ ರೀತಿಯ ತೊಂದರೆ ಇಲ್ಲ 'ಹೀ ಇಸ್ ಫರ್ಫೆಕ್ಟ್ ಲೀ ಆಲ್ ರೈಟ್' ಎಂದು ನಟ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ನಟ ಶಿವರಾಜ್ ಕುಮಾರ್ ಅವರು ತಮ್ಮ ಪತ್ನಿ ಗೀತಾ ಶಿವರಾಜ್ ಕುಮಾರ್ ಅವರೊಂದಿಗೆ ಆಸ್ಪತ್ರೆಗೆ ಆಗಮಿಸಿ ರಾಘವೇಂದ್ರ ಅವರ ಆರೋಗ್ಯ ವಿಚಾರಿಸಿದ್ದಾರೆ. ಮೂಲಗಳ ಪ್ರಕಾರ ಚೇತರಿಸಿಕೊಂಡಿರುವ ರಾಘಣ್ಣ ಅವರನ್ನು ನಾಳೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡುವ ಸಂಭವವಿದೆ.


Click it and Unblock the Notifications












