ರಾಘಣ್ಣನ 25ನೇ ಚಿತ್ರ ಆರಂಭ: 'ಕಸ್ತೂರಿ ನಿವಾಸ' ನೆನಪಿಸಿದ ಟೈಟಲ್
ನಟ ರಾಘವೇಂದ್ರ ರಾಜ್ ಕುಮಾರ್ ತಮ್ಮ ಸೆಕೆಂಡ್ ಇನ್ನಿಂಗ್ಸ್ ಭರ್ಜರಿಯಾಗಿ ಆರಂಭಿಸಿದ್ದಾರೆ. ಬಣ್ಣ ಹಚ್ಚದೇ 13 ವರ್ಷ ಸುಮ್ಮನೆ ಕೂತಿದ್ದ ರಾಜ್ ಪುತ್ರ ಈಗ ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡಲು ಮುಂದಾಗಿದ್ದಾರೆ.
'ಅಮ್ಮನ ಮನೆ' ಚಿತ್ರದ ಮೂಲಕ ಬೆಳ್ಳಿತೆರೆಗೆ ಮತ್ತೆ ಕಂಬ್ಯಾಕ್ ಮಾಡಿದ ರಾಘಣ್ಣ 'ತ್ರಯಂಬಕ' ಎಂಬ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮಧ್ಯೆ ಇನ್ನೊಂದು ಚಿತ್ರಕ್ಕೆ ಗ್ರೀನ್ ಕೊಡುವ ಮೂಲಕ ವೃತ್ತಿ ಜೀವನದ 25ನೇ ಚಿತ್ರ ಆರಂಭಿಸುತ್ತಿದ್ದಾರೆ.
ಹೌದು, ರಾಘವೇಂದ್ರ ರಾಜ್ ಕುಮಾರ್ ಅವರ 21ನೇ ಸಿನಿಮಾ ಮಾರ್ಚ್ 25ರಂದು ಶುರುವಾಗಲಿದೆ. 'ಆಡಿಸಿದಾತ' ಎಂದು ಈ ಚಿತ್ರಕ್ಕೆ ಹೆಸರಿಟ್ಟಿದ್ದು, ಫಣೀಶ್ ಭಾರಧ್ವಜ್ ನಿರ್ದೇಶನ ಮಾಡುತ್ತಿದ್ದಾರೆ. ಬಿ ಎಂ ಚೇತನ್ ಎಂಬುವರರು ಬಂಡವಾಳ ಹಾಕ್ತಿದ್ದಾರೆ.

ಆಡಿಸಿದಾತ ಎಂದಾಕ್ಷಣ ಅಣ್ಣಾವ್ರ ಕಸ್ತೂರಿ ನಿವಾಸದ ಆಡಿಸಿದಾತ ಬೀಳಿಸಿನೋಡು....ಹಾಡು ನೆನಪಾಗುತ್ತೆ. ಈಗ ಅದೇ ಹಾಡಿನ ಸಾಲಿನಿಂದ ಶೀರ್ಷಿಕೆ ಇಟ್ಟುಕೊಂಡಿರುವ ಈ ಚಿತ್ರ ಕುತೂಹಲ ಮೂಡಿಸಿದೆ.
ಶ್ರೀನಿವಾಸ ಕಲ್ಯಾಣ ಚಿತ್ರದ ಮೂಲಕ ಬಾಲನಟನಾಗಿ ಎಂಟ್ರಿಯಾದ ರಾಘಣ್ಣ, ಚಿರಂಜೀವಿ ಸುಧಾಕರ್ ಸಿನಿಮಾದಲ್ಲಿ ನಾಯಕನಾಗಿ ಪರಿಚಯವಾದರು. ನಂತರ ನಂಜುಂಡಿ ಕಲ್ಯಾಣ, ಗಜಪತಿ ಗರ್ವಭಂಗ, ಅನುಕೂಲಕ್ಕೊಬ್ಬ ಗಂಡ, ಸ್ವಸ್ತಿಕ್, ಟುವ್ವಿ ಟುವ್ವಿ ಟುವ್ವಿ, ಶಿವರಂಜನಿ, ಪಕ್ಕದ್ಮನೆ ಹುಡುಗಿ ಅಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಈಗ ಆಡಿಸಿದಾತ ಚಿತ್ರಕ್ಕಾಗಿ ರಾಘಣ್ಣ ಅವರ ಫೋಟೋಶೂಟ್ ಕೂಡ ಮಾಡಿಸಿದ್ದು, ಹೊಸ ಲುಕ್ ನಲ್ಲಿ ಮಿಂಚುತ್ತಿದ್ದಾರೆ. ಅಂದ್ಹಾಗೆ, ಸೋಮವಾರ ಸಂಜೆ 5 ಗಂಟೆಗೆ ಕಂಠೀರವ ಸ್ಟುಡಿಯೋದಲ್ಲಿ 'ಆಡಿಸಿದಾತ' ಚಿತ್ರದ ಮುಹೂರ್ತ ಕಾರ್ಯಕ್ರಮ ನೆರವೇರಲಿದೆ.


Click it and Unblock the Notifications











